Tuesday, February 10, 2015

ಮರಣದೆಡೆಗೆ ಮುಖ ಮಾಡಿದ ಅಪ್ಪಯ್ಯ!

ಗಾಡಿ ತಡೆಯುವ ಸುದ್ದಿ ಇನ್ನೊಂದು ತರಹದ ದುರಂತಕ್ಕೆ ಪರಿಣಾಮಕಾರಿಯಾಯಿತು. ಅಪ್ಪಯ್ಯನ ಕಿವಿಗೆ ಆ ಸುದ್ದಿ ಬಿದ್ದು ಅವರು ಅಸ್ಥಿರರಾದರು. ಮನೆಯ ಡಾಗೀನು ಯಾವುದನ್ನೂ ಸಾಗಿಸುತ್ತಿರಲಿಲ್ಲವಾದ್ದರಿಂದ ಆ ವಿಚಾರವಾಗಿ ಅವರಿಗೆ ದಿಗಿಲಾಗಲಿಲ್ಲ. ಆದರೆ ಒಬ್ಬರು ಗಾಡಿ ತಡೆದು, ಇನ್ನೊಬ್ಬರು ಕೋವಿ ಹಾರಿಸಿ, ಏನು ಅನಾಹುತವಾಗುತ್ತದೆಯೊ ಎಂದು ಹೆದರಿ ಅಶಂಕೆಯಿಂದ ಉದ್ವಿಗ್ನರಾದ ಅವರು ಜ್ವರದಲ್ಲಿಯೆ ಕೊಡೆಹಿಡಿದುಕೊಂಡು ದೋಣಿಗಂಡಿಗೆ ಹೋಗಿ ಅಲ್ಲಿಯ ಅಶ್ವತ್ಥಕಟ್ಟೆಯ ಮೇಲೆ ಕುಪ್ಪಳಿಯಿಂದ ಬರುವ ಗಾಡಿಯನ್ನು ನಿರೀಕ್ಷಿಸುತ್ತಾ ಕುಳಿತರು. ಆಗಾಗ ಮಳೆ ಬೀಳುತ್ತಿತ್ತು; ಶಿತಗಾಳಿ ಭರ್ರನೆ ಹೊಳೆಕಡೆಯಿಂದ ಬೀಸುತ್ತಿತ್ತು. ಇವರಿಗೆ ಜ್ವರ ಏರಿತ್ತು. ಬೆಳಿಗ್ಗೆ ಹನ್ನೊಂದು ಹನ್ನೆರಡು ಗಂಟೆಯವರೆಗೆ ಕಾದು ನಿರಾಶರಾಗಿ ಹಿಂತಿರುಗಿ ಬಂದು, ತುಸು ಪಥ್ಯ ಸ್ವೀಕರಿಸಿ ಮಲಗಿದರು. ಅವರ ಮನಸ್ಸು ಅಶಂಕೆಯ ತಾಂಡವರಂಗವಾಘಿತ್ತು. ಮತ್ತೆ ಎದ್ದು ಸುಮಾರು ಎರಡು ಗಂಟೆಯ ಹೊತ್ತಿಗೆ ದೋಣಿಗಂಡಿಗೆ ಹೋಗಿ ಕೂತು ಬೈಗಿನವರೆಗೂ ಕಾದರು ಗಾಡಿ ಬರಲಿಲ್ಲ. ಅವರಿಗೆ ಅದುವರೆಗೂ ಯಾವುದು ಗಾಳಿ ಸಉದ್ದಿಯಾಗಿತ್ತೋ ಅದು ಈಗ ನಿಜವಾಗಿ ತೋರತೊಡಗಿ ತುಂಬ ಅಧೀರರಾದರು. ಯಾರ ಕೈಲಿ ಹೇಳುವುದು? ಯಾರನ್ನು ಕಳಿಸುವುದು ನೋಡಿಬರಲು? ನಾವೆಲ್ಲ ಚಿಕ್ಕಮಕ್ಕಳು! ಅಂತೂ ತುಂಬ ನಿಃಶಕ್ತರಾಗಿ ಆಯಾಸದಿಂದಲೂ ಹತಾಶೆಯಿಂದಲೂ ಕುಗ್ಗಿ ಕತ್ತಲಾದ ಮೇಲೆ ಮಳೆಗಾಳಿಗಳ ಮಧ್ಯೆ ಮನೆಗೆ ಬಂದರು!
ಮತ್ತೆ ಮರುದಿನವೂ ದೋಣಿಗಂಡಿಗೆ ಗಾಡಿಗಾಗಿ ಕಾಯಲು ಹೋಗುತ್ತಿದದ್ರೋ ಏನೊ? ಆದರೆ ಜ್ವರ ಏರಿ, ಕೆಮ್ಮು, ಕಫ ಹೆಚ್ಚಿ, ನಿತ್ರಾಣವಾಗಿ, ಹಾಸಗೆಯಿಂದ ಏಳಲಾರದೆ ಮಲಗಿಬಿಟ್ಟರು.
ಅಂತೂ ಮರುದಿನ ಐಯ್ಯಪ್ಪ ಚಿಕ್ಕಪ್ಪಯ್ಯ ನನ್ನ ತಾಯಿತಂಗಿಯರನ್ನು ತೀರ್ಥಹಳ್ಳಿಗೆ ಕರೆತಂದುಬಿಟ್ಟರು. ಅಪ್ಪಯ್ಯಗೆ ಕಾಯಿಲೆ ವಿಷಮಿಸಿದ್ದನ್ನು ನೋಡಿ ಔಷಧಿಪಥ್ಯಗಳ ಏರ್ಪಾಡನ್ನೂ, ನಮ್ಮ ಮನೆಮೇಷ್ಟರಾಗಿದ್ದ ಶ್ರೀಯುತ ಮೋಸಸ್ ಅವರೊಡಗೂಡಿ, ಮಾಡತೊಡಗಿದರು. ಕಾಯಿಲೆ ದಿನದಿನಕ್ಕು ವಿಷಮಿಸುತ್ತಾ ಹೋಯಿತು. ಆಮೇಲೆ ಮಾತನಾಡುವ ಶಕ್ತಿ ಕುಂದುತ್ತಾ ಹೋಗಿ, ನಾಲಗೆಯೆ ಬಿದ್ದುಹೋಯಿತು. ಪ್ರಜ್ಞೆ ಬಂದಾಗ ಏನನ್ನಾದರೂ ಹೇಳಲು ಪ್ರತ್ನಿಸಿ ಸನ್ನೆ ಮಾಡುತ್ತಿದ್ದರಷ್ಟೆ!
ಜನರ ಸಂಚಾರ ಕ್ಲಿಷ್ಟವಾಗಿ, ವಾಹನ ಸೌಕರ್ಯಗಳೂ ಅಭಾವವಾಗಿದ್ದು ಅದರಲ್ಲಿಯೂ ಮಳೆಗಾಲ ಹಿಡಿದಿದ್ದ ಆ ಸಮಯದಲ್ಲಿ ನಮ್ಮ ತಂದೆಯ ಕಾಯಿಲೆಯ ಸುದ್ದಿ ದೂರದೂರದ ಹಳ್ಳಿಗಳಲ್ಲಿ ಬೇಸಾಯದಲ್ಲಿ ತೊಡಗಿದ್ದ ಬಂಧುವರ್ಗಕ್ಕೆ ತಲುಪುವುದು ಬಹಳ ತಡವೇ ಆಯತೆಂದು ತೋರುತ್ತದೆ. ಅಂತೂ ಕುಪ್ಪಳಿ ವೆಂಕಟಪ್ಪಗೌಡರು ತೀರ್ಥಹಳ್ಳಿಉಯಲ್ಲಿ ಈಗಲೊ ಆಗಲೊ ಎಂಬಂತೆ ಕಾಯಿಲೆ ಬಿದ್ದಿದ್ದಾರಂತೆ ಎಂಬ ವಾರ್ತೆ ಇತರರಿಗೆಂತೊ ಅಂತೆಯೆ ಹೀಲಿಕೇರಿಗೂ ತಲುಪಿ ದೊಡ್ಡಚಿಕ್ಕಪ್ಪಯ್ಯನೂ ಬಂದರು. ಬಂದವರು ತುಂಬಾ ದಿಗಿಲುಗೊಂಡು ಪಶ್ಚತ್ತಪ್ತರಾದರು. ಇಷ್ಟು ವಿಷಮಕ್ಕೆ ಏರಿದೆ ಎಂದು ಅವರು ಎಣಿಸಿರಲಿಲ್ಲ. ಡಾಕ್ಟರುಗಳನ್ನು ಕರೆತಂದತರು. ಆಗ ತೀರ್ಥಹಳ್ಳಿಯಲ್ಲಿ, ಔಷಧಿ ಮಾರಾಟಮಾಡುವವರನ್ನೂ ಡಾಕ್ಟರುಗಳೆಂದೆ ಭಾವಿಸಿದ್ದರು ಜನ. ಷರಾಯಿ ಬೂಟು, ಹ್ಯಾಟು ಹಾಕಿ ಕೊರಳಿಗೆ ಸ್ಟೆಥಾಸ್ಕೋಪನ್ನು ತಗುಲಿಸಿಕೊಂಡಿದ್ದವರೊಬ್ಬರು ಬಂದು ಏನೇನೊ ಮಾಡಿಹೋದರು. ಹುಡುಗನಾಗಿದ್ದ ನಾನು ಕಾಯಿಲೆ ಸಾವಿನಲ್ಲಿ ಪರಿಣಮಿಸುತ್ತದೆ ಎಂದು ನಂಬಿರಲಿಲ್ಲ. ಅದರಲ್ಲಿಯೂ ದೊಡ್ಡ ಚಿಕ್ಕಪ್ಪಯ್ಯ, ಡಾಕ್ಟರು, ಐಯ್ಯಪ್ಪ ಚಿಕ್ಕಪ್ಪಯ್ಯ, ಸ್ವತಃ ನಮ್ಮ ಭಯಕ್ಕೇ ಕಾರಣರಾಗಿದ್ದ ಮೋಸಸ್ ಮೇಷ್ಟರು ಇವಬರೆಲ್ಲ ಇರುವಾಗ ಕಾಯಿಲೆ ಗುಣವಾಘದೆ ಇರುತ್ತದೆಯೆ ಎಂಬ ಅಣಗುಕೆಚ್ಚು. ಜೊತೆಗೆ, ಬೇರೆ ಯಾರೂ ಇಲ್ಲದಿರುವಾಗ, ಶೋಕಾಕುಲೆಯಾಘಿದ್ದ ನನ್ನ ತಾಯಿ ನಾಲಗೆ ಬಿದ್ದು ಹೋಗಿ ಮಾತಾಡಲಾರದಿದ್ದ ತನ್ನ ಸ್ವಾಮಿಯ ಬಳಿ ಕುಳಿತು ಪರಿತಪಿಸುತ್ತಾ, ಧರ್ಮಸ್ಥಳ ತಿರುಪತಿ ಇತ್ಯಾದಿ ದೇವರುಗಳಿಗೆ ತನ್ನ ದೈನ್ಯವನ್ನು ಹೇಳಿಕೊಂಡು, ಮೂರುಕಾಸು ಆರುಕಾಸುಗಳನ್ನು ನಮ್ಮ ತಂದೆಗೆ ’ಸುಳಿಸಿ’ ಅಂದರೆ ಪ್ರದಕ್ಷಿಣೆ ಬರಿಸಿ, ತನ್ನ ಜೀವನದೇವತೆಗೆ ಗುಣವಾದರೆ ಬೆಳ್ಳಿಸರಿಗೆ ಮಾಡಿಸಿ ಹಾಕುವುದಾಗಿ ಹೇಳಿಕೊಳ್ಳುತ್ತಿದ್ದುದನ್ನು ಕಂಡಾಗ ನನಗೂ ಧೈರ್ಯವಾಗುತ್ತಿತ್ತು, ಇಂಥಾ ಭಕ್ತೆಯಾಗಿರುವ ನನ್ನ ಅವ್ವನ ಅಹವಾಲನ್ನು ದೇವರುಗಳು ಮನ್ನಿಸದೆ ಇರುತ್ತಾರೆಯೆ ಎಂದು!

No comments: