Monday, March 16, 2015

ಅರೆಕೊಪ್ಪ ಮತ್ತು ಹೆಮ್ಮಲಗನ ಬೇಟೆ

ಅಂದು ಭಾನುವಾರ. ಬಟ್ಟೆ ಒಗೆಯಲು ಹೊಳೆಗೆ ಹೋಗುತ್ತೇವೆ ಎಂದು ಹೊರಟೆವು - ಸುಬ್ಬಣ್ಣ, ಮಾನಪ್ಪ, ತಿಮ್ಮು, ನಾನು, ಧರ್ಮು ಇತ್ಯಾದಿ. ಈ ನಾವು ಹೋಗುತ್ತಿದ್ದ ಹೊಳೆ ಕುಶಾವತಿಯಾಗಿರಲಿಲ್ಲ, ತುಂಗೆ! ಕುಶಾವತಿ ನಮ್ಮ ಭಾಗಕ್ಕೆ ಆಗೆ ’ಹಳ್ಳ’ ಅಥವಾ ಹೆಚ್ಚು ಎಂದರೆ ’ದೊಡ್ಡಹಳ್ಳ’ವಾಗಿ ಬಿಟ್ಟಿತ್ತು. ಅಷ್ಟರಮಟ್ಟಿಗೆ ಮುಂದುವರಿದಿತ್ತು ನಮ್ಮ ಈಜುವ ಪ್ರವೀಣತೆ.
ಸಾಬೂನು ಕೊಳ್ಳಲು ನಮಗೆ ಕೊಟ್ಟಿದ್ದ ಆರುಕಾಸಿನಲ್ಲಿಯೆ ಸೋಸಲು ಗಾಳಗಳನ್ನೂ ಒಮದೆರಡು ಕಾಸಿಗೆ ಕೊಂಡುಕೊಂಡು ಹೋದೆವು. ಒಂದು ಗಾಳಕ್ಕೆ ಬಗನಿ ಜವಿಯ ನೇಣು ಕಟ್ಟಿದೆವು. ಬಂಡೆಬಂಡೆಗಳು ಹಿಂಡು ಹಿಂಡು ಮಲಗಿದ್ದ ಹೊಳೆಯಂಚಿನ ನೀರಿನಲ್ಲಿ ಬಟ್ಟೆಬಿಚ್ಚಿ ಕೌಪೀನಧಾರಿಗಳಾಗಿ ನೀರಿಗಿಳಿದೆವು. ನಮ್ಮ ಸುತ್ತಮುತ್ತ, ಬಳಿಯೆ, ಹೆಂಗಸರೂ ಗಂಡಸರೂ ಬಟ್ಟೆ ಒಗೆಯುತ್ತಿದ್ದರು. ಆದರೆ ನಮಗೆ ನಾಚಿಕೆ ಮರ್ಯಾದೆ ಯಾವ ಪರಿವೆಯೂ ಇರದಿದ್ದ ಕಾಲವದು!

ಗಾಳಕ್ಕೆ ಎರಡಹಾಕಲೆಂದು ಒಂದು ಪಂಚೆಯನ್ನೆ ಬಲೆ ಮಾಡಿ ಗೋರಿ ಒಂದೆರಡು ಸಣ್ಣ ಮಿಡಿಮೀನುಗಳನ್ನು ಹಾಕಿದೆವು. ಆ ಮೀನನ್ನು ಗಾಲಕ್ಕೆ ಚುಚ್ಚಿ, ನಾವು ಬಟ್ಟೆ ಒಗೆಯುತ್ತಿದ್ದ ಹಾಸುಬಂಡೆಯ ಸಂದಿಯ ನೀರಿಗೆ ಇಳಿಬಿಟ್ಟೆವು. ಗಾಳದ ನೇಣಿನ ಈ ತುದಿಗೆ ಕಟ್ಟಿದ್ದ ಕೋಲನ್ನು ಒಂದು ಕಲ್ಲಿನ ಮೇಲಿಟ್ಟು, ಬಟ್ಟೆಗೆ ಸಾಬೂನು ಹಚ್ಚುವ ಶಾಸ್ತ್ರಕ್ಕೆ ಕೈಹಾಕಿದೆವು.
ಅಷ್ಟರಲ್ಲಿ ಅರೆಕೊಪ್ಪನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಲೆಂದು ನಾವಿದ್ದಲ್ಲಿಗೆ ಬಂದನು. ನಮ್ಮೊಡನೆ ಲೋಕಾಭಿರಾಮವಾಗಿ ಏನೇನೊ ಗಳಹುತ್ತಾ ಅವನೂ ನೀರಿಗಿಳಿದು ತನ್ನ ಕೆಲಸಕ್ಕೆ ಶುರುಮಾಡಿದನು.
ಗಾಳದ ಕೋಲು ಅಲ್ಲಾಡಿತು! ಬಂಡೆಯಿಂದ ನೀರಿಗೆ ಬಿತ್ತು! ಬೇಗಬೇಗಬೆ ಕೋಲನ್ನು ಹಿಡಿದು, ನೇಣಿಗೆ ಕೈಹಾಕಿ, ಎರೆಕಚ್ಚಿದ್ದ ಮೀನನ್ನು ಎಳೆದೆವು. ನೇಣು ತುಂಡಾಯಿತು. ನೋಡಿದರೆ, ನೇಣಿನ ತುದಿಯ ಗಾಳವೆ ಗೈರು ಹಾಜರು! ಕೈಯಲ್ಲಿದ್ದ ಮತ್ತೊಂದು ಗಾಳವನ್ನು ನೇಣಿಗೆ ಕಟ್ಟಿ, ಪುಡಿ ಮೀನೊಂದನ್ನು ಎರೆಸಿಕ್ಕಿಸಿ, ಮತ್ತೆ ಅದೇ ಜಾಗಕ್ಕೆ ನೀರಿನಲ್ಲಿ ಇಳಿಬಿಟ್ಟೆವು. ಬಿಡುವುದೆ ತಡ, ಮತ್ತೆ ಮೀನು ಕಚ್ಚಿ ಎಳೆಯತೊಡಗಿತು. ಈ ಸಾರಿ ಸಿಕ್ಕಿತು ಎಂದುಕೊಂಡು ನೇಣನ್ನು ಬಲವಾಗಿ, ಹಿಡಿದೆಳೆಯಲು, ಮತ್ತೆ ಮೊದಲಿನಂತೆಯೆ ನೇಣು ತುಂಡಾಗಿ, ಗಾಳ ಮಂಗಮಾಯವಾಗಿತ್ತು! ಎರೆ ಕಚ್ಚುವ ಮೀನು ಸ್ವಲ್ಪ ದೊಡ್ಡದಿರಬೇಕು, ಇಲ್ಲವೆ ಆಮೆ ಇರಬೇಕು ಎಂದು ತೀರ್ಮಾನಿಸಿದೆವು. ಏನಾದರಾಗಲಿ ಎಂದು ಮತ್ತೊಂದು ಬಲವಾದ ದಾರಕ್ಕೆ ಕೈಲಿದ್ದ ಮತ್ತೊಂದು ಗಾಳವನ್ನು ಕಟ್ಟಿ, ಎರೆಚುಚ್ಚಿ ಹಾಕಿದರೆ! ಮತ್ತೆ ಅದೇ ಗತಿಯಾಯ್ತು!
ತಿಮ್ಮು ಓಬಯ್ಯ ಸುಬ್ಬಣ್ಣ ಮೂವರನ್ನು ಓಡಿಸಿದೆವು ಮನೆಗೆ, ಕೆರೆಕೇರಿ ಅಮ್ಮಗೆ ಹೇಳಿ ಮೂರು ಕಾಸು ಈಸಿಕೊಂಡು ಪೇಟೆಗೆ ಹೋಗಿ ದೊಡ್ಡದಾದ ಒಂದೇ ಗಾಳವನ್ನು ಅದಕ್ಕೆ ತಕ್ಕ ದಪ್ಪದ ಬಲವಾದ ದಾರವನ್ನೂ ತರಲು ಅಜ್ಞಾಪಿಸಿ. ಓಡುತ್ತಾ ಹೋಗಿ ಏದುತ್ತಾ ಹಿಂತಿರುಗಿದರು: ಭಾರಿ ದೊಡ್ಡ ಗಾಳವೂ ಬಲವಾದ ಹಗ್ಗವೂ ಅವರ ಕೈಲಿತ್ತು. ಅರೆಕೊಪ್ಪನ ಕೈಯಲ್ಲಿಯೆ ಗಾಳವನ್ನು ಭದ್ರವಾಗಿ ಆ ದಪ್ಪ ನೇಣಿಗೆ ಬಿಗಿಸಿ, ತಕ್ಕಮಟ್ಟಿನ ದೊಡ್ಡದೊಂದು ಸೋಸಲನ್ನು ಪಂಚೆಬಲೆ ಬೀಸಿ ಹಿಡಿದು, ಗಾಳಕ್ಕೆ ಸಿಕ್ಕಿಸಿ, ಮತ್ತೆ ಮೊದಲಿನ ಜಾಗಕ್ಕೇ ಇಳಿಬಿಟ್ಟೆವು, ಈ ಸರಿ ಲೌಡಿಮಗನದು ಎಲ್ಲಿಗೆ ಹೋಗುತ್ತದೆ ನೋಡಿಯೆ ಬಿಡುತ್ತೇವೆ ಎಂದು!
ನೇಣನ್ನು ನಾನೆ ಹಿಡಿದಿದ್ದೆ. ಗಾಳವನ್ನು ಇಳಿಬಿಟ್ಟೊಡನೆಯೆ ಹಿಂದಿನಂತೆಯೆ ಈ ಸಾರಿಯೂ ಸ್ವಲ್ಪವೂ ವಿಳಂಬ ಮಾಡದೆ ಆ ಜಲಜಂತು ಎರೆಯನ್ನು ಕಚ್ಚಿ ನೇಣನ್ನು ಎಳೆಯತೊಡಗಿತು. ನಾನು ನೇನನ್ನು ಬಲವಾಗಿ ಹಿಡಿದೆಳೆದರೂ ನನ್ನ ಕೈಯಿಂದಾಗಲಿಲ್ಲ, ಅದರ ಎಳೆದಟವನ್ನು ತಡೆಯಲು. ನಾನು ನೇಣನ್ನು ಬಿಡಬೇಕು, ಇಲ್ಲವೆ ನೀರಿಗೆ ಬೀಲಬೇಕು! ಪಕ್ಕದಲ್ಲಿ ಬಟ್ಟೆ ಒಗೆಯುತ್ತಿದ್ದ ಸುಬ್ಬಣ್ಣಗೆ ಕೂಗಿದೆ “ಬಾರೋ! ಬೇಗ ಬಾರೋ! ಎಂಥದೋ ಹಿಡಿದು ಎಳೀತದೆ! ನನ್ನೊಬ್ಬನ ಕೈಇಂದಾಗೋದಿಲ್ಲ!” ಅವನೂ ಬಂದು ನನ್ನ ಜೊತೆಯೆ ನೇಣನ್ನು ಹಿಡಿದು ನಿಂತ. ಇಬ್ಬರೂ ಎಳೆದರೂ ನೇಣು ನಮ್ಮ ಕಡೆ ಬರುವ ಬದಲು ನೀರಿನ ಕಡೆಯೇ ಜಗ್ಗತೊಡಗಿತು. ನಮಗಂತೂ ದಿಗ್ಭ್ರಮೆ, ಭಿತಿ! ಇದೆಂಥ ಮೀನು? ಕಡೆಗೆ ಮೊzಸಳೆಗಿಸಳೆಯೋ? ನಮ್ಮಿಬ್ಬರಿಂದಲೂ ನೇಣನ್ನು ಎಳೆಯಲಾಗದಿರಲು ಅರೆಕೊಪ್ಪನನ್ನು ಕೂಗಿಕರೆದೆವು. ಅವನು ತುಸು ಅನುಮಾನಪಟ್ಟುಕೊಂಡೆ ಓಡಿಬಂದು ನೇಣಿಗೆ ಕೈಹಾಕಿ, ತನ್ನೆರಡೂ ಕೈಗಳಿಂದ ಭದ್ರಮುಷ್ಟಿ ಹಿಡಿದು ಕಾಲನ್ನು ಕಲ್ಲಿಗೆ ಆಪುಕೊಟ್ಟುಕೊಂಡು ಜಗ್ಗಿಸಿ ಎಳೆಯತೊಡಗಿದನು.
ಮೊದಮೊದಲು ಅವನ ಬಲಕ್ಕೂ ಶರಣಾಗದ ಅದು ಒಂದೆರಡು ನಿಮಿಷಗಳಲ್ಲಿಯೆ ನಮ್ಮತ್ತ ಮೆಲ್ಲಮೆಲ್ಲನೆ ಬರತೊಡಗಿತು. ಅವನೂ ಎಳೆದ! ಎಳೆದ! ಎಳೆದ! ಬಂತು! ಬಂತು! ಬಂತು! ನಾವೆಲ್ಲ ಗುಂಪುಕಟ್ಟಿ ಅವನ ಹಿಂದೆ ಹಾಸುಬಂಡೆಯ ಮೇಲೆ ನಿಂತು ನೀರಿನ ಕಡೆ ಒಂದೇಸಮನೆ ನೋಡುತ್ತಿದ್ದೆವು. ಏನು ಬರುತ್ತದೆ ಎಂದು!
ನೋಡುತ್ತಿದ್ದಂತೆಯೆ ನೇಣಿನ ತುದಿ ನೀರಿನ ಮಟ್ಟಕ್ಕೆ ಸಮೀಪಿಸಿತು. ಏನದು? ಏನದು? ದೊಡ್ಡ ಬಾಯಿ ಕಾನಿಸಿತು! ನಮಗೆಲ್ಲ ಆನಂದವೋ ಆನಂದ! ಅರೆಕೊಪ್ಪನಿಗೂ ಬೆರಗು! ಎಳೆಯೋ ಎಳೆಯೋ ಎಳೆಯೋ ಎಂದು ಒಟ್ಟಿಗೆ ಕೂಗಿ ಹುರಿದುಂಬಿಸಿದೆವು. ಅವನೂ ಎಳೆದ ಎಳೆದಾ ಎಳೆದಾ ಎಳೆದೇ ಎಳೆದ! ನೀರಿನ ಮೇಲಕ್ಕೆ ಬಂತು ಮೀನಿನ ತಲೆ, ಮೈ, ಆದರೆ ಮುಗಿಯಲೆ ಒಲ್ಲದು! ಎಳೆದಷ್ಟೂ ಬರುತ್ತಿದೆ. ಎರಡು ಅಡಿ ಎತ್ತರಕ್ಕೆ ನೀರಿನ ಮೇಲಕ್ಕೆ ಎಳೆದ ಅರೆಕೊಪ್ಪನಿಗೆ ಅದರ ಗಾಥ್ರ ರೂಪಗಳನ್ನು ಕಂಡು ದಿಗಿಲಾಗತೊಡಗಿತು. ಅವನಾಗಲಿ ನಾವಾಗಲಿ, ಅಂತಹ ಮೀನನ್ನು ನೋಡಿರಲಿಲ್ಲ. ’ಹಾವೇನೋ’ ಎಂದು ದೂರದಲ್ಲಿ ಬಟ್ಟೆ ಒಗೆಯುತ್ತಿದ್ದು ಇದನ್ನೆಲ್ಲ ನೋಡುತ್ತಿದ್ದ ಒಬ್ಬ ಅಪರಿಚಿತ ವ್ಯಕ್ತಿ ಕೂಗಿದನು. ಅರೆಕೊಪ್ಪ ಅಯ್ಯಯ್ಯೋ ಎನ್ನುತ್ತಲೇ ತನ್ನೆರಡು ಕೈಗಳನ್ನೂ ತನ್ನ ತಲೆಯ ಮೇಲಿನಮಟ್ಟದವರೆಗೂ ಎತ್ತಿ, ತನಗಿಂತಲೂ ಉದ್ದವಾಗಿದ್ದ ಆ ಪ್ರಾಣಿಯನ್ನು, ಹೆದರಿ ಕೂಗಿಕೊಂಡೆ ನೇಣು ಸಹಿತ ದಡದ ಹಾಸುಬಂಡೆಗೆ ಬಲವಾಗಿ ಎಸೆದ. ಸುಮಾರು ಮೂರುನಾಲ್ಕು ಅಡಿಗಳುದ್ದದ, ಒಂದು ಅಡಿಯಷ್ಟಾದರೂ ಸುತ್ತಳತೆಯ ದಪ್ಪದ ಆ ವಿಚಿತ್ರ ಜಲಜಂತು ದಡದ ಬಂಡೆಯ ಮೇಲೆ ಹಾವು ಹೊರಳುವಂತೆ ಅಂಕುಡೊಂಕಾಗಿ ಹೊರಳುತ್ತಾ ನೀರಿನ ಕಡೆ ಧಾವಿಸಲು ಪ್ರಯತ್ನಿಸತೊಡಗಿತು. ನಾವೆಲ್ಲ ದಪ್ಪದಪ್ಪ ಬಂಡೆಗಲ್ಲುಗಳನ್ನು ಎತ್ತಿ ತಂದು ಅದರ ತಲೆಯ ಮೇಲೂ ಮೈಯ ಮೇಲೂ ಹಾಖಿದೆವು. ನಮ್ಮ ಕಲ್ಲುಗಳು ಅದರ ಮೈಗೆ ತಾಗಿ ರಬ್ಬರು ಚೆಂಡುಗಳಮತೆ ಪುಟನೆಗೆದು ಬಿದ್ದುವು! ಆದರೆ ಅದಕ್ಕೇನೂ ಪೆಟ್ಟಾದಂತೆ ತೋರಲಿಲ್ಲ. ಕಡೆಗೆ ಅರೆಕೊಪ್ಪನೆ ಒಂದು ದೊಡ್ಡ ಬಡಿಗೆಯನ್ನು ಆ ಬಳಿಯ ಮರದಿಂದ ಮುರಿದು ತಂದು ತಲೆಗೂ ಮೈಗೂ ಬಡಿದು ಬಡಿದು ಅದನ್ನು ನಿಶ್ಚಲಗೊಳಿಸಿದನು, ಅಷ್ಟೆ. ಆದರೆ ಅದು ಸಾಯಲೆ ಇಲ್ಲ.
ಅದು ಹಾವೂ ಅಲ್ಲ, ಮೀನೂ ಅಲ್ಲ, ನಮಗೆ ಗೊತ್ತಿರದ ಯಾವುದೊ ಜಾತಿಯ ಹಾವು ಮೀನಿರಬೇಕು ಎಂದು ನಿಶ್ಚಯಿಸಿದೆವು. ಅದನ್ನು ಮನೆಗೆ ತೆಗೆದುಕೊಂಡು ಹೋಗುವುದು ಹೇಗೆ? ನಮ್ಮಲ್ಲಿ ಇಬ್ಬರು ಮನೆಗೆ ಹೋಗಿ ದೊಡ್ಡದೊಂದು ಗೋಣಿಚೀಲ ತಂದರು. ಅದರೊಳಗೆ ಅರೆಕೊಪ್ಪನ ನೆರವಿನಿಂದ ಅದನ್ನು ಮುದುರಿಸಿ ತೂರಿಸಿದೆವು. ಹೊತ್ತು ನಡೆದೆವು ಮನೆಗೆ, ಮಹಾ ಬೇಟೆಯಾಡಿದ ಹೆಮ್ಮೆಯಿಂದುಬ್ಬಿ!
ದೊಡ್ಡ ಗಾಳ ಕೊಂಡುತರಲು ಕೆರೆಕೇರಿ ಅಮ್ಮನ ಹತ್ತಿರ ದುಡ್ಡು ಈಸಿಕೊಂಡು ಬರಲು ಸುಬ್ಬಣ್ಣ ಇತರರು ಮನೆಗೆ ಹೋದಾಗಲೆ ಗುಲ್ಲುಸುದ್ದಿ ಸುತ್ತಮುತ್ತ ಹಬ್ಬಿ ಜನ ಕುತೂಹಲಭರಿತರಾಘಿದ್ದರು. ಮೂಟೆಯಲ್ಲಿ, ಇನ್ನೂ ಸಾಯದೆಯೆ ಆಗಾಗ ನಿಗುರಿ, ಹೊತ್ತಿದ್ದರನ್ನು ತಲ್ಲಣಗೊಳಿಸುತ್ತಿದ್ದ, ಮೀನನ್ನು ಸುತ್ತಿ ಹೊತ್ತು ತಂದುದನ್ನು ನೋಡಿ, ಪಕ್ಕದ ಕಿರುಗುಡಿಸಲಿನ ಸೆಟ್ಟಿ ಮತ್ತು ಸೆಟ್ಟಿಗಿತ್ತಿ, ಮನೆಯ ಪಕ್ಕದೊಂದು ಕೊಟಡಿಯಲ್ಲಿಯೆ ಸಂಸಾರ ಮಾಡಿದ್ದ ಮೋಸಸ್ ಮೇಷ್ಟರು ಮತ್ತು ಅವರ ಹೆಂಡತಿ ಎಲ್ಲ ಬೆರಗಾಗಿ ನೆರೆದರು. ಕೆರೆಕೇರಿ ಅಮ್ಮನೂ ಮಕ್ಕಳು ಎಂಥ ಸಾಹಸ ಮಾಡಿ ಎಷ್ಟು ದೊಡ್ಡ ಮೀನನ್ನು ತಂದರಲ್ಲಾ ಎಂದು ಹೆಮ್ಮೆಯಿಂದ ಮನೆಯ ತೆಣೆಗೆ ಬಂದು ನಿಂತು ನಿರೀಕ್ಷಿಸುತ್ತಿದ್ದರು. ನಾವು ವಿಜಯಗರ್ವದಿಂದ ಮೂಟೆಯನ್ನು ಇಳಿಸಿ, ಚೀಲದ ಒಂದು ತುದಿಯನ್ನು ಹಿಡಿದು ಎತ್ತಿ ಮೀನನ್ನು ಹೊರಗೆ ಬೀಳಿಸಿದೆವು.
ಕೆರೆಕೇರಿ ಅಮ್ಮ ಚೀತ್ಕರಿಸಿ ಹೌವ್ವನೆ ಹಾರಿ ಹಿಂದಕ್ಕೋಡಿ ದೂರ ನಿಂತು ಬೆರಗು ಭಯಗಳಿಂದ ನೋಡುತ್ತಾ “ಅಯ್ಯಯ್ಯೋ! ಇದನ್ಯಾಕೆ ತಂದಿರೊ? ಇದು ‘ಹೆಮ್ಮಲಗ’ ಕಣ್ರೋ!” ಎಂದು ಕೂಗಿದರು. ಆದರೆ ಸೆಟ್ಟಿ ಮತ್ತು ಸೆಟ್ಟಿಗಿತ್ತಿ “ಇದು ಹೆಮ್ಮಲಗ ಹೌದು. ಬಹಳ ಪಸಂದಾಗಿರುತ್ತದೆ ಪಲ್ಯ ಮಾಡಿದರೆ!” ಎಂದರು. ಅಮ್ಮ ‘ಹಾಂಗಾದ್ರೆ ನೀವೆ ತಗೊಂಡು ಹೋಗಿ. ನಮ್ಮಿಂದಾಗಲ್ಲ. ಅಸಹ್ಯ!’ ಎಂದುಬಿಟ್ಟರು. ಆದರೆ ಬೇಟೆಯಾಡಿ ತಂದ ನಮಗೆ ನಿರಾಶೆಯೋ ನಿರಾಶೆ! ಸೆಟ್ಟಿಗೆ ಕೊಡಬೇಕಾಯಿತಲ್ಲಾ ಎಂದು ಹೊಟ್ಟೆಕಿಚ್ಚು! ಆದರೆ, ಏನು ಮಾಡುವುದಕ್ಕೂ ತೋರದೆ, ಆ ಮೀನು ನುಂಗಿರುವ ನಮ್ಮ ಗಾಳಗಳನ್ನೆಲ್ಲ ಅದರ ಹೊಟ್ಟೆಯಿಂದ ತೆಗೆದು ನಮಗೆ ಒಪ್ಪಿಸಬೇಕು ಎಂಬ ಕರಾರಿನ ಮೇಲೆ ಅದನ್ನು ಸೆಟ್ಟಿಗೆ ಬಿಟ್ಟುಕೊಟ್ಟೆವು.
ಎಷ್ಟೋ ದಿನಗಳ ತನಕ ಆ ಹೆಮ್ಮಲಗನ ಮೈಯನ್ನು ಮುಟ್ಟಿದ್ದ ನಮ್ಮ ಕೈಗಳನ್ನು ಬಿಸಿನೀರು, ಸೀಗೆ, ಸಆಬೂನು ಎಲ್ಲವನ್ನೂ ಉಪಯೋಗಿಸಿ ಎಷ್ಟು ಕಲ್ಲುಮಣ್ಣುಗಳಿಗೆ ತಿಕ್ಕಿದರೂ ಅದರ ಅಸಹ್ಯವಾಸನೆಯೂ ಲೋಳೆ ಲೋಳೆಯಾಗಿದ್ದ ಒಂದು ತರಹದ ಜಿಗುಟಿನ ಅಂಟೂ ಹೋಗಲೊಲ್ಲದೆ ಹೋದುವು. ಊಟಮಾಡುವಾಗಲೂ ಜುಗುಪ್ಸೆಯಿಂದ ವಾಕರಿಕೆ ಬರುವಂತಾಗುತ್ತಿತ್ತು. ಸ್ಕೂಲಿಗೆ ಹೋದಾಗಲೂ ನಮ್ಮ ಪಕ್ಕದ ಹುಡುಗರು ನಾವು ಕುಳಿತಿದ್ದ ಬೆಂಚನ್ನು ಬಿಟ್ಟು ಪಕ್ಕದ ಬೆಂಚಿನಲ್ಲಿ ಕಿಕ್ಕಿರಿಯುತ್ತಿದ್ದರು. ಮೇಷ್ಟರು “ಯಾಕ್ರೋ ಒಂದೇ ಬೆಂಚಿನ ಮೇಲೆ ಅಷ್ಟೊಂದು ಜನ ಕೂರ್ತಿರಿ? ಇಬ್ಬರು ಮೂವರಾದರೂ ಬನ್ರೋ ಪಕ್ಕದ ಬೆಂಚಿಗೆ!” ಎಂದು ಗದರಿಸಿ ಬೆತ್ತ ಆಡಿಸಿದಾಗ ಆ ಹುಡುಗರು “ಸಾರ್, ಅವರ ಹತ್ರ ಕೆಟ್ಟವಾಸ್ನೆ!” ಎಂದು ಮೂಗು ಮುಚ್ಚಿಕೊಂಡರು. ನಿಜಾಂಶವನ್ನು ಪರೀಕ್ಷಿಸಲೆಂದು ಮೇಷ್ಟರು (ಪಾಪ! ಹಾರುವರು!) ನಮ್ಮ ಬಳಿಸಾರಿ ಮೈಕೈ ಮೂಸಿ, ‘ಥೂ ತೂ ಥೂ ಶೂದ್ರ ಮುಂಡೇವು’ ಎಂದು ದೂರ ಓಡಿ, ಬೆತ್ತದಿಂದಲೆ ನಮ್ಮನ್ನು ನೂಕಿ, ‘ತೊಳೆದುಕೊಂಡು ಬನ್ನಿ’ ಎಂದು ಮನೆಗೆ ಕಳಿಸಿದರು. ನಮಗೋ ಖುಷಿಯೋ ಖುಷಿ! ಸುಲಭದಲ್ಲಿ ರಜಾ ಸಿಕ್ಕಿತಲ್ಲಾ ಎಂದು! ಆದರೆ ಜವಾನ ಅರೆಕೊಪ್ಪ ಹೊರಗೆ ಬಂದ ನಮ್ಮನ್ನು ತಡೆದು ’ಯಾಕ್ರೋ ಹೊರಗೆ ಹೋಗ್ತೀರಿ? ಮೀನಿನ ವಾಸನೆ ಆ ಹಾರುವಯ್ಯಗೆ ಅಸಹ್ಯವಾದರೆ ಅವನೇ ಮೂಗಿಗೆ ಬಟ್ಟೆ ಕಟ್ಟಿಕೊಳ್ಳಲಿ! ನೀವು ಮನೆಗೆ ಹೋಗಿ ತೊಳಕೊಂಡು ಬಂದರೆ ಆ ವಾಸನೆ ಹೋಗ್ತದೇನು? ವಾಸನೆ ಇದೆ ಅಂಥಾ ಕ್ಲಾಸಿಗೆ ನಿಮ್ಮನ್ನು ಸೇರಿಸದಿರುವುದಕ್ಕೆ ಅವನಿಗೇನು ಅಧಿಕಾರ? ನಿಮ್ಮನ್ನು ಮೂಸಿ ನೋಡುವುದಕ್ಕೋ ಪಾಠ ಹೇಳುವುದಕ್ಕೊ ಅವನನ್ನು ಸರ್ಕಾರ ಸಂಬಳಕೊಟ್ಟು ನೇಮಿಸಿರುವುದು?’ ಎಂದು ರ್ಧೈ ಹೇಳಿದನು. ನಾವು ಸ್ವಲ್ಪ ಹೊತ್ತು ಬಿಟ್ಟು ‘ತೊಳಕೊಂಡು ಬಂದೆವು’ ಎಂದು ಸುಳ್ಳು ಹೇಳಿ ಒಳಗೆ ಹೋಗಿ ಕೂತೆವು!
***
ಅರೆಕೊಪ್ಪ ಸ್ವಲ್ಪಮಟ್ಟಿಗೆ ಸ್ವತತ್ರಾಭಿಮಾನಪನ್ನನಾಗಿ ತಾನು ಜವಾನ ಎಂಬುದನ್ನು ಮರೆತು ವರ್ತಿಸುತ್ತಿದ್ದನೆಂದು ತೋರುತ್ತದೆ. ಆದ್ದರಿಂದಲೆ ಎಷ್ಟೋ ಮೇಷ್ಟರುಗಳನ್ನು ಮೈಮೇಲೆ ಹಾಕಿಕೊಂಡಿರಬೇಕು. ಅದರಿಂದಾಗಿ ತೊಂದರೆಗೂ ಒಳಗಾಗಿರಬೇಕು. ಸುಮಾರು ಮೂವತ್ತೈದು ವರ್ಷಗಳ ತರುವಾಯ ನಾನು ಮೈಸೂರು ವಿಶ್ವವಿದ್ಯಾನಿಲಯದ ವೈಸ್ ಛಾನ್ಸಲರ್ ಆಗಿ ತೀರ್ಥಹಳ್ಳಿಯ ಯಾವುದೋ ಒಂದು ಭಾಷಣ ಕಾರ್ಯಕ್ರಮಕ್ಕೆ ಅಲ್ಲಿಗೆ ಹೋಗಿದ್ದಾಗ ನನ್ನ ಮಿತ್ರರೊಬ್ಬರು ಅವನನ್ನು ಬಳಿಗೆ ಕರೆತಂದು ‘ಇವನು ಯಾರು ಗೊತ್ತಾಯ್ತೆ? ನಮ್ಮ ಸ್ಕೂಲು ಜವಾನ ಆಗಿದ್ದನಲ್ಲಾ ಆ ಅರೆಕೊಪ್ಪ! ಈಗ ಶಿವಮೊಗ್ಗದಲ್ಲಿ ಅಟೆಂಡರ್ ಆಗಿದ್ದಾನೆ. ಅವನು ಮತ್ತೆ ಇಲ್ಲಿಗೆ ಬರಬೇಕು ಅಂತಾ ಬಹಳ ಪ್ರಯತ್ನಿಸುತ್ತಿದ್ದಾನೆ. ಮೇಲಿನ ಅಧಿಕಾರಿಗಳಿಗೆ ನೀವು ಒಂದು ಮಾತು ಹೇಳಿದರೆ ನಡೆಯುತ್ತದೆ ಎಂದು ಅವನ ಆಶೆ’ ಎಂದರು.
ವ್ಯಕ್ತಿಯನ್ನು ದೃಷ್ಟಿಸಿ ನೋಡಿದೆ. ಅದೇ ‘ಅರೆಕೊಪ್ಪ!’ ಅದೇ ನಗೆ! ಅಂದಿನ ಹಾಗೆಯೆ ನಕ್ಕು ಹಲ್ಲು ಬಿಡುತ್ತಿದ್ದಾನೆ! ವಯಸ್ಸು ದೇಹದ ಮೇಲೆ ತುಸು ಪರಿಣಾಮ ಮಾಡಿದ್ದರೂ ಈಗಲೂ ಗೋಲಿ ಕಸಿದು ತಾರಸಿಯ ಮೇಲೆ ಎಸೆಯುವ ಮನೋಧರ್ಮದಿಂದ ಹೆಚ್ಚೇನೂ ಸೂರವಾಗಿಲ್ಲ ಎಂಬಂತೆ ಅಂದಿನ ಭಂಗಿಯಲ್ಲೆಯೆ ನಿಂತಿದ್ದಾನೆ!
“ಮತ್ತೆ ಇಲ್ಲಿಗೆ ಬಂದರೆ ನಿನಗೆ ಅಟೆಂಡರ್ ಕೆಲಸ ಸಿಗುತ್ತದೆಯೆ?” ಎಂದು ಕೇಳಿದೆ.
“ಇಲ್ಲ” ಎಂದು ತುಸು ತಲೆ ತಗ್ಗಿಸಿದ.
“ಮತ್ತೆ? ಕಡಿಮೆ ಸಂಬಳದ ಜವಾನಗಿರಿಗೇ ಬರ್‍ತೀಯಾ?”
“ಜವಾನಿಕೇನೇ ಸಾಕು ಈ ಊರಿನಲ್ಲಿ!”
ನನಗೆ ಆಶ್ಚರ್ಯವಾಯಿತು ಮತ್ತೆ ಮೆಚ್ಚಿಗೆಯೂ ಆಯಿತು. ನಾವೆಲ್ಲ ಹೆಚ್ಚಿಗೆ ಸಂಬಳಕ್ಕೆ ಬಡ್ತಿ ಪಡೆಯುವುದಕ್ಕಾಗಿ ಏನೆಲ್ಲ ಪಾಡು ಪಡುತ್ತಿರುವ ಈ ಕಾಲದಲ್ಲಿ ಇಲ್ಲೊಬ್ಬ ಇದಾನಲ್ಲಾ ನಮ್ಮನ್ನು ಮೂದಲಿಸುವಂತೆ! ಅಲ್ಲದೆ ಹಳ್ಳಿಯಿಂದ ಪೇಟೆಗೆ ಸಣ್ಣ ಊರಿನಿಂದ ದೊಡ್ಡ ಊರಿಗೆ ತೀರ್ಥಹಳ್ಳಿಯಿಂದ ಶಿವಮೊಗ್ಗೆಗೆ, ಶಿವಮೊಗ್ಗೆಯಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಹೊಸದೆಹಲಿಗೆ ಏರಿ ಹಾರಬೇಕೆಂದು ಅಧಿಕಾರಲಾಲಸೆಯ ಮತ್ತು ಸ್ಥಾನಮಾರ್ಗದ ಮೇಲಾಟದ ಈ ಕಾಲದಲ್ಲಿ ಶಿವಮೊಗ್ಗೆಯಿಂದ ತೀರ್ಥಹಳ್ಳಿಗೆ ಇಳಿಯಲು ಹಾತೊರೆಯುತ್ತಿದ್ದಾನಲ್ಲಾ ಈ ಅರೆಕೊಪ್ಪ?

No comments: