ಅಡಿಗರು ಏಕಾಏಕಿ ಕುವೆಂಪು ಅವರ ಮನೆಗೆ ಬಂದದ್ದೇಕೆ ಎಂದು ತಿಳಯಲಿಲ್ಲ. ಅಡಿಗರು ಕುವೆಂಪು ಅವರಿಗೆ “ನಮಸ್ಕಾರ” ಹೇಳಿದರು. ಕುವೆಂಪು ಅಡಿಗರನ್ನು ತಮ್ಮ ಸಹಜ ಮಂದಸ್ಮಿತದಿಂದ ಸ್ವಾಗತಿಸಿದರು. ಅಡಿಗರು “ಏನೋ ಹುಡುಗ ತಿಳಿಯದೆ ಮಾಡಿಬಿಟ್ಟ, ಅವನನ್ನ ಬಿಡಿಸಿ ಬಿಡಿ” ಎಂದರು. ಕುವೆಂಪು “ಆಗಲಿ, ಈಗಲೇ ಪೋಲೀಸ್ ಸ್ಟೇಷನ್ನಿಗೆ ಫೋನ್ ಮಾಡಿ ಹೇಳುತ್ತೇನೆ, ನೀವು ನಿಶ್ಚಿಂತರಾಗಿ ಮನೆಗೆ ಹೋಗಿ” ಎಂದರು. ಅಡಿಗರು “ತುಂಬಾ ಥ್ಯಾಂಕ್ಸ್” ಎಂದತರು. ಅವರು ಹೊರಡುವ ಮುನ್ನ ಕುವೆಂಪು ಹೇಳಿದರು: “ಅದರೂ ಹುಡುಗ ನಿಮ್ಮ ನವ್ಯವನ್ನೂ ಹಳೆಯದನ್ನಿಸುವಷ್ಟರ ಮಟ್ಟಿಗೆ ನವ್ಯಾತಿನವ್ಯವಾಗಿ ಮಾಡಿದ್ದಾನೆ” ಎಂದು ಹೇಳಿ ಜೋರಾಗಿ ನಕ್ಕರು. ಅಡಿಗರೂ ನಗುತ್ತಾ ಹೊರಟು ಹೋದರು. ಇದು ಯಾವುದರ ಹಿಂದೂ ಮುಂದೂ ತಿಳಿಯದ ನಾನು ಸುಮ್ಮನೆ ಪಿಳಪಿಳನೆ ಕಣ್ಣು ಬಿಡುತ್ತಾ ಕುಳಿತಿದ್ದೆ. ಆನಂತರ ಕುವೆಂಪು ಅವರು ಅಂದು ಬೆಳಗ್ಗೆಯೋ ಮಧ್ಯಾಹ್ನವೋ ನಡೆದಿದ್ದ ಘಟನೆಯನ್ನು ತಿಳಿಸಿದರು.
ತರುಣರೊಬ್ಬರು ಬಂದು ತಾವು ಗೋಪಾಲಕೃಷ್ಣ ಅಡಿಗರ ಮಗನೆಂದೂ, ತಮ್ಮ ತಂದೆ ಐವತ್ತು ರೂಪಾಯಿ ಬೇಕೆಂದು ಹೇಳಿಕಳುಹಿಸಿದ್ದಾರೆಂದೂ ಹೇಳಿದ. ಕುವೆಂಪು ಅವರಿಗೆ ಎರಡು ಕಾರಣಗಳಿಗಾಗಿ ಅನುಮಾನ ಮೂಡಿತಂತೆ. ಒಂದು ಅಡಿಗರಿಗೆ ಅಷ್ಟು ದೊಡ್ಡ ಮಗ ಇರುವುದು ಸಾಧ್ಯವಿಲ್ಲ ಎಂಬುದು. ಎರಡನೆಯದು ಅಡಿಗರು ತಮ್ಮ ಮನೆಗೆ ಹಣಕ್ಕಾಗಿ ಹೇಳಿ ಕಳುಹಿಸುತ್ತಾರೆಯೇ ಎಂದು. ಆದ್ದರಿಂದ ಅವರು ಒಂಟಿಕೊಪ್ಪಲು ಪೋಲೀಸ್ ಸ್ಟೇಷನ್ನಿಗೆ ಫೋನ್ ಮಾಡಿದರು. ಪೋಲೀಸಿನವರು ಬಂದು ತರುಣನನ್ನು ಕರೆದುಕೊಂಡು ಹೋಗಿ ವಿಚಾರಿಸಿದ್ದರಲ್ಲಿ ಆತ ಅಡಿಗರ ಮಗನಲ್ಲ, ದೂರದ ಬಂಧು ಎಂದು ತಿಳಿಯಿತು. ಅಡಿಗರು ಬಂದು ಹೇಳಿಹೋದ ಮೇಲೆ ಕುವೆಂಪು ಪೋಲೀಸ್ ಸ್ಟೇಷನ್ನಿಗೆ ಫೋನ್ ಮಾಡಿದರು. ತರುಣನ ಬಿಡುಗಡೆಯಾಯಿತು.
* * *
ಡಾ. ಹಾ.ಮಾ.ನಾಯಕರು “ದಯವಿಟ್ಟು ಬೇಡಿ” ಎಂದರು. ಈ ಅನಿರೀಕ್ಷಿತವಾದ ಆಕ್ಷೇಪಣೆಯಿಂದ ಸಮಿತಿಯ ಸದಸ್ಯರು ಚಕಿತರಾದರು. ಶ್ರೀ ಕುವೆಂಪು “ಏಕೆ, ನಾಯಕರೆ, ಏಕೆ ಬೇಡ” ಎಂದು ಕೇಳಿದರು. ನಾಯಕರು “ಅದರ ಲೇಖಕರಾದ ಡಾ. ಈಶ್ವರ್ ನನ್ನ ತಮ್ಮ. ನಾನು ಸದಸ್ಯನಾಗಿದ್ದು ಅದನ್ನು ಪ್ರಕಟಿಸಲು ಒಪ್ಪುವುದು ನೈತಿಕ ದೃಷ್ಟಿಯಿಂದ ಸರಿಯಲ್ಲ” ಎಂದರು. ಕುವೆಂಪು ಮಂದಸ್ಮಿತರಾಗಿ “ನಾಯಕರೇ ನೀವು ಕೊಡುತ್ತಿರುವ ಕಾರಣ ಲಾಜಿಕಲ್ ಅಲ್ಲ, ಬಯಾಲಾಜಿಕಲ್” ಎಂದರು! ಇಡೀ ಸಮಿತಿ ಘೊಳ್ಳೆಂದು ನಕ್ಕಿತು. ನಾಯಕರ ಆಕ್ಷೇಪಣೆಯನ್ನು ತಳ್ಳಿಹಾಕಿ ಕೃತಿಯನ್ನು ಪ್ರಕಟಿಸಲಾಯಿತು.
[ಕೃಪೆ: ಹೀಗಿದ್ದರು ಕುವೆಂಪು - ಡಾ. ಪ್ರಭುಶಂಕರ, ಡಿ.ವಿ.ಕೆ. ಮೂರ್ತಿ ಪ್ರಕಾಶಕರು, ಮೈಸೂರು. ೨೦೦೨]
No comments:
Post a Comment