Friday, January 30, 2015

ಅಪ್ಪಯ್ಯನನ್ನು ಮನೆಬಿಡಿಸಿದ ಎಮ್‍ಡನ್ ಸಬ್‍ಮೆರೀನ್!

ಸಾಹಸಪ್ರಿಯರಾದ ನಮ್ಮ ದೊಡ್ಡ ಚಿಕ್ಕಪ್ಪಯ್ಯ ರಾಮಣ್ಣಗೌಡರು ಲಾಭ ಸಂಪಾದಿಸಿ ಶೃಈಮಂರಾಗುವ ಆಶೆಯಿಂದ ಅಡಕೆ ಮಾರಾಟದ ಸಾಹುಕಾರ ಉದ್ಯಮಕ್ಕೆ ಕೈಯಿಟ್ಟಿದ್ದರು. ತಾವೇ ಸಾಲಮಾಡಿ ಹಣತಂದು, ಇತರೆ ಬೆಳೆಗಾರರಿಗೆ ಮುಂಗಡವಾಗಿ ಸಾಲಕೊಟ್ಟು, ಅಡಕೆ ತುಂಬಿ, ಮೂಟೆಗಳನ್ನು ಬೀರೂರಿಗೆ ಸಾಗಿಸಿ, (ಆಗ ಶಿವಮೊಗ್ಗಕ್ಕೆ ರೈಲು ಬಂದಿರಲಿಲ್ಲವಂತೆ) ಮಂಡಿಗಳ ಮುಖಾಂತರ ಮಾರುತ್ತಿದ್ದರು. ಆ ಕ್ರಮದ ವ್ಯಾಪಾರದಿಂದ ಬರುತ್ತಿದ್ದ ಲಾಭ ಸಾಲದೆಂದು ತೋರಿ, ಇನ್ನೂ ಹೆಚ್ಚು ಹಣ ಸಂಪಾದಿಸುವ ಉಪಾಯ ಕಂಡುಹಿಡಿದರು. ಬೀರೂರಿಗಂತೂ ಅಡಕೆ ಮೂಟೆಗಳನ್ನು ಗಾಡಿಗಳಲ್ಲಿ ಸಾಗಿಸುತ್ತಿದ್ದರಷ್ಟೆ? ಅಲ್ಲಿಂದ ಮದರಾಸಿಗೆ ರೈಲು ರಸ್ತೆ ಏರ್ಪಟ್ಟಿತ್ತು. ರೈಲಿನಲ್ಲಿ ಮದರಾಸಿಗೇ ತಾನೇ ಸಾಗಿಸಿ ಮಾರಿದರೆ ಹೆಚ್ಚಿನ ಬೆಲೆಯ ದಳ್ಳಾಳಿಯ ಜೊತೆಗೆ ಲಾಭವೂ ತಮಗೇ ದೊರೆಯುವುದೆಂದು ತರ್ಕಿಸಿದರು. ಮೂಟೆಗಳನ್ನೆಲ್ಲ ರೈಲಿನಲ್ಲಿ ಮದರಾಸಿಗೆ ಸಾಮಾನು ಗಾಡಿಯಲ್ಲಿ ಕಳುಹಿಸಿ, ತಾವೂ ಹೊರಟರು., ಆಗ ಅವರಿಗೆ ಆಪ್ತರಾಗಿದ್ದು ಅವರ ಉದ್ಯಮಕ್ಕೆ ಸಹಾಯವಾಗಿರುತ್ತಿದ್ದ ವಾಟಗಾರು ಮಂಜಪ್ಪಗೌಡರನ್ನು ಜೊತೆಗೆ ಕೂಡಿಕೊಂಡು. ಮದರಾಸಿನಲ್ಲಿ ಮೂಟೆಗಳನ್ನು ಇಳಿಸಿ, ಮಾರಾಟಕ್ಕೆ ಏರ್ಪಾಡು ಮಾಡುವ ಕಾರ್ಯದಲ್ಲಿ ವ್ಯಾಪಾರಿಗಳೊಡನೆ ವ್ಯವಹಾರದಲ್ಲಿ ತೊಡಗಿ, ಒಂದು ಹೋಟಲಿನಲ್ಲಿ ಇಳಿದುಕೊಂಡರು.
ಅದೇ ರಾತ್ರಿ ಜರ್ಮನಿಯ ಸಮರನೌಕೆ, ಜಲಾಂತರ್ಗಾಮಿಯಾದ ಸಬ್ ಮೇರಿನ್ -’ಎಮ್‌ಡನ್’ ಹೆಸರಿನಿಂದ ಮುಂದೆ ಜಗದ್ ವಿಖ್ಯಾತವಾಯಿತು! -ಮದರಾಸಿನ ಲೈಟ್ ಹೌಸಿಗೆ ಗುರಿಯಿಟ್ಟು ಬಂಗಾಳಕೊಲ್ಲಿಯಿಂದ ಭಯಂಕರವಾಗಿ ಫಿರಂಗಿ ಗುಂಡುಗಳ ದಾಳಿ ನಡೆಸಿಬಿಟ್ಟಿತು!

ಹಕ್ಕಿ ಹಿಂಡಿಗೆ ಕವಣೆಕಲ್ಲು ಬಿದ್ದಂತಾಯಿತು! ಬ್ರಿಟಿಷರ ಕೃಪೆಯಿಂದ ಬಹುಕಾಲ ಪ್ರತ್ಯಕ್ಷ ಯುದ್ಧದ ಕೋಟಲೆಯಿಂದ ಪಾರಾಗಿ ಪ್ರಶಾಂತ ದಾಸ್ಯಜೀವನ ನಡೆಸುತ್ತಿದ್ದ ಪುಕ್ಕಲೆದೆಯ ಜನರು, ವ್ಯಾಪಾರಿಗಳು, ಚಾಕರರು, ನೌಕರರು, ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿ ಲಾಯರಿಗೀಯರಿ ಮಾಡಿಕೊಂಡಿದ್ದ ಬಿಳಿಕಾಲರಿನ ನಾಗರಿಕರು -ಊರುಬಿಟ್ಟು ಓಡಲು ತೊಡಗಿದರು, ಹೇಗಾದರೂ ತಮ್ಮ ಪ್ರಾಣ ಉಳಿಸಿಕೊಂಡರೆ ಸಾಕು ಎಂದು. ಎಲ್ಲೆಲ್ಲಿಯೂ ಹಾಹಾಕಾರ ಗಡಿಬಿಡಿ! ಇನ್ನು, ಆ ಷಹರಿಗೆ ತಮ್ಮ ಜೀವಮಾನದಲ್ಲೇ ಮೊತ್ತಮೊದಲಾಗಿ ಹೋಗಿದ್ದು, ದೂರದ ಸಹ್ಯಾದ್ರಿಯ ನಿಃಶಬ್ದ ಕೊಂಪೆಹಳ್ಳಿಯ ನಿರಾತಂಕ ನಿರುದ್ವಿಗ್ನ ವಾತಾವರಣದಲ್ಲಿಯೆ ಹುಟ್ಟಿ ಬೆಳೆದು ಬದುಕಿದ್ದ ಕುಪ್ಪಳಿ ರಾಮಣ್ಣಗೌಡರು ಮತ್ತು ವಾಟಗಾರು ಮಂಜಪ್ಪಗೌಡರು ಇವರ ಪಾಡು? ಅಡಕೆಯನ್ನೆಲ್ಲ ಯಾವನೊ ಒಬ್ಬ ಶೆಟ್ಟಿ ವ್ಯಾಪಾರಗೆ ಅವನು ಕೇಳಿದ ಬೆಲೆಗೆ ಒಪ್ಪಿಸಿ, ಬದುಕಿದೆಯಾ ಬಡಜೀವ ಎಂದು ಮದರಾಸಿನಿಂದ ಕಾಲುಕಿತ್ತರು! ಪರಿಣಾಮ ಕುಪ್ಪಳಿ ಮನೆತನಕ್ಕೆ ಕೆಲವು ಸಹಸ್ರ ರೂಪಾಯಿಗಳ ನಷ್ಟವಾಯಿತು.
ಅಡಕೆ ತುಂಬಿ ಸಾಹುಕಾರಿಕೆ ಮಾಡುತ್ತಿದ್ದವರು ಚಿಕ್ಕಪ್ಪ ರಾಮಣ್ಣಗೌಡರಾದರೂ ಮನೆಯ ಯಜಮಾನಿಕೆ ನೋಡಿಕೊಳ್ಳುತ್ತಿದ್ದವರು ನನ್ನ ತಂದೆ ವೆಂಕಟಪ್ಪಗೌಡರು. ಅಡಕೆ ವ್ಯಾಪಾರದಲ್ಲಿ ಬಂದ ಲಾಭಕ್ಕೆ ವಿಶೇಷವಾಗಿ ಭಾದ್ಯರಾಗುತ್ತಿದ್ದವರು ರಾಮಣ್ಣಗೌಡರಾದರೂ ಅದರಿಂದ ಈಗ ಒದಗಿದ್ದ ಮಹಾನಷ್ಟಕ್ಕೆ ಅವರೊಬ್ಬರೆ ಹೊಣೆಯಾಗಲು ಸಿದ್ಧರಿರಲಿಲ್ಲ. ಮನೆತನವೆ ಆ ಹೊರೆಯನ್ನು ಹೊರಬೇಕಾಗಿ ಬಂದಿತು.
ನಷ್ಟ ತುಂಬುವ ಮತ್ತು ಸಾಲ ತೀರಿಸುವ ವಿಚಾರವಾಗಿ ಅಣ್ಣತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಮನಸ್ತಾಪಕ್ಕೂ ತಿರುಗಿತಂತೆ, ಮನೆತನದ ಕೆಲವು ಜಮೀನುಗಳನ್ನು ಮಾರಿ ಸಾಲ ತೀರಿಸಬಹುದು ಎಂದು ಅಡಿಕೆ ಸಾಹುಕಾರ ತಮ್ಮನೂ; ಹಿರಿಯರಿಂದ ಬಂದ ಆತಿಯನ್ನು ಮಾರುವುದು ಬೇಡ, ಹೇಗಾದರೂ ಮಾಡಿ ಆ ಜಮೀನಿನಲ್ಲಿಯೆ ದುಡಿದು ಸಂಪಾದಿಸಿ ಸಾಲ ತೋರಿಸಬಹುದು ಎಂದು ಮನೆಯ ಯಜಮಾನ ಅಣ್ಣನೂ ವಾದಿಸಿ ಹಟಹಿಡಿದಿದ್ದರಂತೆ. ಅಂತೆ ಏಕೆಂದರೆ, ಮಕ್ಕಳಾಗಿದ್ದ ನಮಗೆ ಆ ವಿಚಾರಗಳೊಂದೂ ತಿಳಿಯುತ್ತಲೂ ಇರಲಿಲ್ಲ; ಯಾರೂ ತಿಳಿಸುತ್ತಲೂ ಇರಲಿಲ್ಲ; ಆಟ ಅಲೆದಾಟಗಳಲ್ಲಿಯೆ ಮುಳುಗಿರುತ್ತಿದ್ದ ನಮಗೆ ಅದೊಂದು ಬೇಕಾಗಿಯೂ ಇರಲಿಲ್ಲ.
’ಅಪ್ಪಯ್ಯ’ ಮನೆಯ ಯಜಮಾನರಾಗಿದ್ದರೂ ಮನೆಯ ಖರ್ಚಿಗೆ ಬೇಕಾಗುತ್ತಿದ್ದ ಹಣ ಅಡಕೆ ವ್ಯಾಪಾರದ ಲೇವಾದೇವಿ ಮಾಡುತ್ತಿದ್ದ ’ದೊಡ್ಡ ಚಿಕ್ಕಪ್ಪಯ್ಯ’ನ ಮುಖಾಂತರವೆ ಬರುತ್ತಿತ್ತು. ಮನೆ ಖರ್ಚಿಗೆ ಹಣ ಬೇಕೆಂದು ಅಪ್ಪಯ್ಯ ಕೇಳಲು ಕೈಯಲ್ಲಿ ಹಣದ ಕೊರತೆ ಇದ್ದುದರಿಂದಲೂ ಇರಬಹುದು, ’ಕೊಡಲು ಸಾಧ್ಯವಿಲ್ಲ’ ಎಂದು ಹೇಳಿದುದ.ರ ಜೊತೆಗೆ ಮನೆಯ ಜಮಾಖರ್ಚಿನ ಲೆಖ್ಖ ತೋರಿಸಲು ಕೇಳಿದರೆಂದು ತೋರುತ್ತದೆ. ಏಕೆಮದರೆ ನನಗೆ ನೆನಪಿರುವಂತೆ, ’ಕೊಮಾರೇಗೌಡರು’ ಎಂಬುವವರನ್ನು ಕುಪ್ಪಳಿಗೆ ಕರೆತಂದು ಅವರಿಂದ ಅಪ್ಪಯ್ಯ ಲೆಖ್ಖ ಬರೆಯಿಸಲು ಪ್ರಯತ್ನಿಸುತ್ತಿದ್ದುದನ್ನು ನೋಡಿದ್ದೇನೆ. ಆತ ದೊಡ್ಡಚಿಕ್ಕಪ್ಪಯ್ಯನ ಪರವಾಘಿದ್ದು, ಅವರಿಗೂ ಕರಣಿಕ ಕಾರ್ಯದಲ್ಲಿ ನೆರವಾಗಿದ್ದನಾದ್ದರಿಂದ, ಆತ ನಿಜವಾಗಿಯೂ ಮನೆಯ ಲೆಖ್ಖ ಬರೆದು ಮುಗಿಸಬೇಕೆಂದು ಬಂದಿರಲಿಲ್ಲ ಎಂದು ತೋರುತ್ತದೆ. ಆತ ಹೇಗಾದರೂ ದಿನಗಳನ್ನು ಕಳೆದು ಮನೆಯ ಲೆಖ್ಖದ ಅವ್ಯವಸ್ಥೆಯನ್ನೆಲ್ಲ ಅರಿತುಕೊಂಡು ದೊಡ್ಡಚಿಕ್ಕಪ್ಪಯ್ಯಗೆ )ಆಗ ಅವರು ಕುಪ್ಪಳಿಗೆ ಎರಡು ಮೈಲಿ ದೂರದಲ್ಲಿದ್ದ ’ಹಿಲಿಕೇರಿ’ಯ ಗದ್ದೆ ತೋಟಗಳನ್ನು ನೋಡಿಕೊಂಡು ಅಲ್ಲಿಯೂ ಹೊಸದಾಗಿ ಕಟ್ಟಿದ್ದ ಮನೆಯಲ್ಲಿ ಇರುತ್ತಿದ್ದರು) ತಿಳಿಸಲೆಂದೇ ಬಂದಿದ್ದರೂ ಇರಬಹುದು. ತನಗೆ ಕಜ್ಜಿ ಎಂದೂ ಮೈ ಸ್ವಸ್ಥವಿಲ್ಲೆಂದೂ ಹೇಳಿ ಆಗಾಗ್ಗೆ ಊರಿಗೆ ಹೋಗಿಬರುತ್ತೇನೆ ಎಂದೂ ಹೋಗುತ್ತಿದ್ದುದೂ ಉಂಟು. ಪಾಪ! ಸ್ವಲ್ಪಮಟ್ಟಿಗೆ ಮುಗ್ಧಜೀವಿಯಾಗಿ, ಅಷ್ಟೇನೂ ಲೌಕಿಕತೆ ಇರದಿದ್ದ ಅಪ್ಪಯ್ಯ ಆ ಕರಣಿಕಗೆ ಕಜ್ಜಿ ಹೋಗಲು ಔಷಧಿ ಹಚ್ಚಿ ಅಭ್ಯಂಜನ ಮಾಡಿಸಿದುದೂ ಎಲ್ಲ ವ್ಯರ್ಥವಾಯಿತು! ಮನೆಯ ಆದಾಯದ ಹಣವನ್ನು ಮುಚ್ಚಿಟ್ಟು, ಲೆಖ್ಖವನ್ನು ಸರಿಯಾಗಿ ತೋರಿಸದೆ, ಮನೆ ಖರ್ಚಿಗೆ, ದುಡ್ಡುಕೊಡು ಎಂಬುದಾಗಿ ದೊಡ್ಡಚಿಕ್ಕಪ್ಪಯ್ಯನನ್ನು ಪೀಡಿಸುತ್ತಿದ್ದಾರೆ ಎಂಬರ್ಥದ ಆಪಾದನೆಗೆ ಅಪ್ಪಯ್ಯ ಒಳಗಾಗಬೇಕಾಯಿತೆಂದು ಊಹಿಸುತ್ತೇನೆ. ಮನೆಖರ್ಚಿಗೆ ಹಣವಿಲ್ಲದೆ ಮನೆಯ ಯಜಮಾನಿಕೆ ಮಾಡುವುದು ಹೇಗೆ? ಕಡೆಗೆ ಉಪ್ಪು, ಬೇಳೆ, ಮೆಣಸಿನಕಾಯಿ, ಕೊಬ್ಬರಿ, ಬೆಲ್ಲ, ಕಾಫಿ ಭೀಜ, ಇತ್ಯಾ ದಿನದಿನದ ಸಾಮಾನುಗಳನ್ನಾದರೂ ತಬೇಕಲ್ಲ? (ಆಗ ಎಂಟು ಹತ್ತು ಜನರಿದ್ದರು!) ಬರ್ಷಕ್ಕೆ ಕೊಡುವ ಸೀರೆ ಕೊಡಬೇಕಲ್ಲ? ಮಳೆಗಾಲಕ್ಕೆ ಆಳುಕಾಳುಗಳಿಗೆ ಕಂಬಳಿ ಕೊಂಡು ತರಬೇಕಲ್ಲ? - ಇದನ್ನೆಲ್ಲ ನಿರ್ವಹಿಸುವುದು ಹೇಗೆ? ಮಾನಮರ್ಯಾದೆ ಉಳಿಸಿಕೊಳ್ಳುವುದು ಹೇಗೆ? ಕೈಯಲ್ಲಿ ಕಾಸಿಲ್ಲದ ಯಜಮಾನಿಕೆಯಿಂದ ಪಾರಾಗಲು ಅಪ್ಪಯ್ಯ ಮನೆಬಿಟ್ಟು ಹೊರಡಲು ಅನಿವಾರ್ಯವಾಗಿ ನಿಶ್ಚಯಿಸಿದರು ಎಂದು ತೋರುತ್ತದೆ. ಹಾ ವಿಧಿಯೆ! ಹೊರಟವರು ಮತ್ತೆ ಹಿಂತಿರುಗಲಿಲ್ಲ!

Thursday, January 29, 2015

ಮೊದಲ ಮಹಾಯುದ್ಧಕ್ಕೆ ತತ್ತರಿಸಿದ ಕುಪ್ಪಳಿ!

೧೯೧೮-೧೯೧೪ರ ಅವಧಿಯಲ್ಲಿ ನಡೆದ ಪ್ರಪಂಚದ ಮೊದಲನೆಯ ಮಹಾಯುದ್ಧ ಕಾಲದಲ್ಲಿ ನಾವು ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳಾಗಿದ್ದೆವು. ನಮಗೆ ಆ ಯುದ್ಧದ ವಾರ್ತೆ ಒಂದು ರೌಚಕವಿನೋದ ಮಾತ್ರವಾಗಿತ್ತು. ಅದರ ರೌದ್ರ, ಘೋರ, ಕ್ರೂರ ಮತ್ತು ವಿನಾಶಕರ ರಾಕ್ಷಸೀಯ ಕ್ರಿಯೆಗಳೆಲ್ಲ ನಮಗೆ ಎಂದೋ ನಡೆದ ಒಂದು ಪೌರಾಣಿಕ ಕಥೆಯ ವಸ್ತುವಿನಂತೆ ಸ್ವಾರಸ್ಯ ಸಂಗತಿಗಳಾಗಿದ್ದುವು. ಈಗಿನಂತೆ ಆಗ ಪತ್ರಿಕೆಗಳೂ ಇರಲಿಲ್ಲ; ಇದ್ದವೂ ಬರುತ್ತಿರಲಿಲ್ಲ. ಮಿಷನರಿಗಳು ಹೊರಡಿಸುತ್ತಿದ್ದ ವೃತ್ತಾಂತ ಪತ್ರಿಕೆಯೂ ಅಂಚೆಯ ಆಮೆಯ ಮೇಲೆ ಸವಾರಿ ಮಾಡಿ ಹಳ್ಳಿಮೆನಗಳನ್ನು ತಲುಪುವ ಹೊತ್ತಿಗೆ ಆ ಪತ್ರಿಕಾವಾರ್ತೆಗೆ ವಿಷಯವಾಘಿರಬಹುದಾಗಿದ್ದ ಸಂಗತಿಗಳು ಚರಿತ್ರೆಗೇ ಮೀಸಲಾಗಿ ಸೇರಿಬಿಟ್ಟಿರುತ್ತಿದ್ದುವೇನೊ! ನಮ್ಮಂತಹ ಮಕ್ಕಳಂತೂ, ಈಗಿನ ಮಕ್ಕಳಂತಲ್ಲದೆ, ಆಗ ಪತ್ರಿಕೆ ಓದುವ ತಂಟೆಗೇ ಹೋಗುತ್ತಿರಲಿಲ್ಲ. ಪಾಠ ಓದಿಕೊಳ್ಳುವುದೇ ಹರ್ಮಾಗಾಲವಾಗಿರುವಾಗ ಪತ್ರಿಕೆ ಓದುವ ವ್ಯರ್ಥ ಸಾಹಸಕ್ಕೆ ಯಾರು ಹೋಗುತ್ತಾರೆ? ಆಟಕ್ಕೆ ಸಮಯ ಸಾಲದಿರುವಾಗ! 

ಆದರೂ ಇಸ್ಕೂಲಿನ ಮಕ್ಕಳಾಗಿದ್ದ ನಮಗೆ ಜರ್ಮನಿಗೂ ಇಂಗ್ಲಿಷರಿಗೂ ಯುದ್ಧ ನಡೆಯುತ್ತಿದೆ ಎಂಬುದು ಗೊತ್ತಾಗಿತ್ತು.
ಏಕೆ ಎಂದು ಈಗ ನಾನು ಹೇಳಲಾರೆ, ನಾವೆಲ್ಲ -ನಮ್ಮಲ್ಲಿ ಅನೇಕರು ಜರ್ಮನಿಯ ಪರವಾಗಿರುತ್ತಿದ್ದೆವು. ಇಂಗ್ಲಿಷರಿಗೆ ಅಪಜಯವಾಯಿತೆಂದು ಸುದ್ದಿ ಹಬ್ಬಿದಾಗ, ನಮ್ಮ ಕಡೆಯವರಿಗೆ ಗೆಲುವೆಂದು ಭಾವಿಸಿ ಹಿಗ್ಗುತ್ತಿದ್ದೆವು. ಗೆಳೆಯರೆಲ್ಲ ಎರಡು ಗುಂಪಾಗಿ, ಒಂದು ಗುಂಪು ಜರ್ಮನಿಯವರೆಂದೂ ಮತ್ತೊಂದು ಇಂಗ್ಲಿಷಿನವರೆಂದೂ ಪೆಟ್ಲುಗಳನ್ನೇ ಕೋವಿಗಳನ್ನಾಗೊ ಮಡಿಕೊಂಡು ಯುದ್ಧದ ಆಟವಾಡುತ್ತಿದ್ದೆವು. ಆಗ ಬೀಳುತ್ತಿದ್ದ ಬಲವಾದ ಹೊಡೆತಗಳನ್ನೆಲ್ಲ ’ಜರ್ಮನ್ ಹೊಡೆತ’ ಎಂದೇ ಕೂಗಿ ಜಯಘೋಷ ಮಾಡುತ್ತಿದ್ದೆವು. ಗೋಲಿಯಾಡುವಾಗಲೂ ಎದುರಾಳಿಯ ಒಂದು ಗೋಲಿಗೆ ಯಾವ ವಿಧದ ತನ್ನ ಗೋಲಿಯಿಂದ ಬಲವಾಗಿ ಹೊಡೆದನೆಂದರೆ ಬಿತ್ತು ಜರ್ಮನ್ ಹೊಡೆತಾ! ಎಂದು ಕೇಕೆ ಹಾಕುತ್ತಿದ್ದೆವು. ಬಹುಶಃ ರಾಷ್ಟ್ರದಲ್ಲಿ ಆಗ ನಡೆಯುತ್ತಿದ್ದ ಕಾಂಗ್ರೆಸ್ ಚಳವಳಿಯ ದೂರ ಪ್ರಭಾವ ನಮ್ಮ ಮೇಲೆಯೂ ಆಗಿತ್ತೊ ಏನೊ! ನನಗೆ ಈಗ ನೆನಪಿಗೆ ಬರುವ ಮಟ್ಟಿಗೆ ಆಗಿನ ರೇಷನ್ ಪದ್ಧತಿ ಸೀಮೆಯೆಣ್ಣೆ ಹಂಚಿಕೆಗೆ ಮಾತ್ರ ಸೀಮಿತವಾಗಿ ನಮ್ಮ ನಿತ್ಯ ಜೀವನಕ್ಕೆ ಹೆಚ್ಚಿಗೆ ತೊಂದರೆ ಕೊಡದಿದ್ದುದರಿಂದ ಈಗಿನಂತೆ ಯುದ್ಧ ಮನೆಬಾಗಿಲಿಗೆ -ಅಡುಗೆಮನೆಗೂ- ಬಂದ ಅನುಭವವಾಗುತ್ತಿರಲಿಲ್ಲ.
ಏನು ವಿಡಂಬನೆ! ತೀರ್ಥಹಳ್ಳಿಯ ಎ.ವಿ.ಸ್ಕೂಲಿನ ಮಕ್ಕಳು, ನಾವು ಷೇಕ್ಸ್ಪಿಯರ್ ಮಹಾಕವಿಯ ’ದಿ ಮರ್ಚೆಂಟ್ ಆಫ್ ವೆನಿಸ್’ ನಾಟಕವನ್ನು ಮೂಲ ಇಂಗ್ಲಿಷಿನಲ್ಲಿಯೆ ಆಡಿ, ಬಂದ ಹಣವನ್ನು ಯುದ್ಧನಿಧಿಗೆ ಕಳುಹಿಸಿದ್ದೆವಲ್ಲ! ಆ ನಾಟಕದ ಮುಖ್ಯಪಾತ್ರ ಷೈಲಾಕ್‌ನ ಪಾತ್ರವನ್ನು ನನ್ನ ಮೇಲೆಯೇ ಹೊರಿಸಬೇಕೆ? ಆ ನಾಟಕದಲ್ಲೆಲ್ಲ ಅತಿ ದೀರ್ಘ ಸಂವಾದವಸ್ತು ಷೈಲಾಕನದೇ! ಅರ್ಥವಾಗದ ಅದನ್ನು ಬಾಯಿಪಾಠ ಮಾಡಲಾರದೆ ಅತ್ತೂ ಅತ್ತೂ, ಯಾಂತ್ರಿಕವಾಗಿ ಮಕ್ಕೀಕಾಮಕ್ಕಿಯಾಗಿ ಒಪ್ಪಿಸಿದುದೆ ನನ್ನ ಈಗಿನ ’ಇಂಗ್ಲಿಷ್ ವಿರೋಧಕ್ಕೆ ಗುಪ್ತಕಾರಣವಾಗಿರಬಹುದೇನೊ!
ಆ ಮೊದಲನೆಯ ಮಹಾಯುದ್ಧದ ಪರಿಣಾಮವಾಗಿ, ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ, ಲೋಕದ ಜನ ಹೇಗೆ, ಯಾವ ರೀತಿಗಳಲ್ಲಿ, ಸಂಕಟಪಟ್ಟು ಜಜ್ಜರಿತರಾದರೆಂಬುದು ಈಗ ಇತಿಹಾಸ ಪ್ರಸಿದ್ಧವಾಗಿದೆ. ನಮಗೀಗ ಪ್ರಕೃತವಾದುದು ಆ ಇತಿಹಾಸದಿಂದ ಸಂಪೂರ್ಣ ಅಲಕ್ಷಿತವಾಗಿ, ಅತ್ಯಂತ ಯಃಕಶ್ಚಿತವಾಗಿ, ಯಾರೂ ಗಮನಿಸದೆ ವಿಸ್ಕೃತವಾಗಿರುವ ಒಂದು ಸಂಗತಿ ಕುಪ್ಪಳಿ ಮನೆತನಕ್ಕೆ ಒದಗಿದ ಆರ್ಥಿಕ ಅಪಘಾತ, ಮತ್ತು ತತ್ಪರಿಣಾಮವಾಗಿ ಸಂಭವಿಸಿದ ಕೌಟುಂಬಿಕ ದುರಂತ ಘಟನಾವಳಿ!

Wednesday, January 28, 2015

ಕುಪ್ಪಳಿ ಮನೆಯ ಹುಡುಗರು!

ತೀರ್ಥಹಳ್ಳಿಯಲ್ಲಿ ಓದಲು ಬಂದಿದ್ದ ನಮ್ಮ ಗುಂಪು ತಕ್ಕಮಟ್ಟಿಗೆ ಕುಪ್ರಸಿದ್ಧವೆ ಆಗಿತ್ತು. ನಮ್ಮ ಹಳ್ಳಿಯ ಮನೆಯಲ್ಲಿ ಊರಿಗೆಲ್ಲ ನಾವೇ ಯಜಮಾನರು. ಸುತ್ತಮುತ್ತಣ ಗದ್ದೆ, ಅಡಕೆತೋಟ, ಕಾಡು, ಬಯಲು, ಗುಡ್ಡ ಎಲ್ಲವೂ ನಮ್ಮದೇ! ಪರರು ಮತ್ತು ಪರರಿಗೆ ಸೇರಿದ್ದು ಎಂಬುದು ನಮ್ಮ ಅನುಭವಕ್ಕೆ ಬಂದೇ ಇರಲಿಲ್ಲ. ಎಲ್ಲಿ ಹೋದರೂ ಎಲ್ಲಿ ಅಲೆದರೂ ಅನ್ಯರದ್ದು ಎಂಬುದಿರಲಿಲ್ಲ. ಆಗಿನ್ನೂ ನಮ್ಮದು ಅವಿಭಕ್ತ ಕುಟುಂಬವಾಗಿದ್ದರಿಂದ ಹಿಸ್ಸೆಯಾದ ಮನೆಗಳಲ್ಲಿ ನಡೆಯುತ್ತಿದ್ದ ಕಲಹಗಳಿಗೂ ಅವಕಾಶವಿರಲಿಲ್ಲ. ಯಾವ ಹಣ್ಣಿನ ಮರದ ಯಾವ ಹಣ್ಣಾದರೂ ನಮ್ಮದೇ ಆಗಿರುತ್ತಿತ್ತು. ’ಇದು ಅವರಿಗೆ ಸೇರಿದ್ದು; ನಾವು ಮುಟ್ಟಬಾರದು. ನಾವು ತೆಗೆದುಕೊಂಡರೆ ಕದ್ದಂತಾಗುತ್ತದೆ; ಜಗಳಕ್ಕೆ ಬರುತ್ತಾರೆ’ ಎಂಬ ಕೋಟಲೆಯನ್ನೇ ಅರಿಯದಾಗಿದ್ದೆವು. ಆದರೆ ತೀರ್ಥಹಳ್ಳಿಗೆ ಬಂದಮೇಲೆ ಹೆಜ್ಜೆ ಹಜ್ಜೆಗೆ ’ಇದು ಅವರ ಮನೆ’ ’ಇದು ಅವರ ಹಿತ್ತಲು’ ’ಈ ಮಾವಿನ ಮರ ಅವರಿಗೆ ಸೇರಿದ್ದು!’ ’ಚಕ್ಕೋತ ಮರವಿರುವ ಆ ಜಾಗಕ್ಕೆ ಅವರು ವಾರಸುದಾರರು!’ ’ಈ ಗೋಡೆ ಅವರ ಕಾಂಪೌಂಡು, ಅದರ ಮೇಲೆ ನೀವು ಹತ್ತಿ ಕೂರಬಾರದು!’ ಇತ್ಯಾದಿ ಅನುಲ್ಲಂಘನೀಯಗಳಿಗೆ ಒಳಗಾಗಬೇಕಾಯಿತು. ಆದರೆ ನಮ್ಮ ಹುಡುಗು ಚಾಳಿ ಅದನ್ನೆಲ್ಲ ಅಷ್ಟೊಂದು ಮನಸ್ಸಿಗೆ ಹಾಕಿಕೊಳ್ಳಲೆ ಇಲ್ಲ. ಯಾವುದಾದರೊಂದು ಮರದಲ್ಲಿ ಹಣ್ಣು ಬಿಟ್ಟಿದ್ದರೆ, ನೇರವಾಗಿ, ಯಾವ ಅಪರಾಧ ಭಾವನೆಯೂ ಇಲ್ಲದೆ, ಹತ್ತಿ ಕೀಳುತ್ತಿದ್ದೆವು. ಒಂದು ವೇಳೆ ವಾರಸುದಾದರರು ಕಂಡು ಅಟ್ಟಿಕೊಂಡು ಬಂದರೆ ಕಾಲಿಗೆ ಬುದ್ದಿ ಹೇಳುತ್ತಿದ್ದೆವು. ಮೊದಮೊದಲು ಯಾರೋ ಹುಡುಗರು ಎಂದು ಶಾಪ ಹಾಕಿ ಸುಮ್ಮನಾಗುತ್ತಿದ್ದರು. ಆದರೆ ಕ್ರಮೇಣ ನಮ್ಮ ಖ್ಯಾತಿ ಹಬ್ಬಿತು: ’ಕುಪ್ಪಳಿ ಮನೆ ಹುಡುಗರು’ ಎಂದು ಗೊತ್ತಾದ ಮೇಲೆ, ನಾವು ಜಯಪ್ರದರಾಗಿ ಲೂಟಿ ಮಾಡಿ, ತಿಂದು ಬಾಯಿ ಒರೆಸಿಕೊಂಡು ಮನೆಗೆ ಬರುವಷ್ಟರಲ್ಲಿ, ದೂರು ನಮಗಿಂತಲೂ ಮೊದಲೆ ನಮ್ಮ ಮನೆಗೆ ಸೇರಿರುತ್ತಿತ್ತು. ಸರಿ, ಮೋಸಸ್ ಮೇಷ್ಟರ ಛಡಿ ಏಟು ಅಂಗೈ ಊದಿಕೊಳ್ಳುವಂತೆ ಬೀಳುತ್ತಿತ್ತು. ಆದರೇನು? ಛಡಿ ಏಟಿನ ಭಯಕ್ಕಿಂತಲೂ ಕೊಳ್ಳೆ ಹೊಡೆಯುವ ಸಾಹಸದ ಆಕರ್ಷಣೆಯೆ ಅದಮ್ಯವಾಗಿ ಇರುತ್ತಿತ್ತು!

ನಮ್ಮ ಬಾಲ್ಯಕ್ರೀಡಾಶೀಲತೆಯಂತೂ ನಾನಾ ಕ್ಷೇತ್ರಗಳಲ್ಲಿ ನಾನಾ ರೂಪಗಳಲ್ಲಿ ಪಟ್ಟಣ ಜೀವನ ಪರಿಚಯ ಮುಂದುವರಿದಂತೆಲ್ಲ ಶಾಖೋಪಶಾಖೆಗಳಾಗಿ ಮುಂದುವರಿಯುತ್ತಿತ್ತು. ಸ್ಕೂಲಿನ ಆಟಗಳಲ್ಲಿ ಮುಖ್ಯವಾದುದೆಂದರೆ ಪುಟ್‌ಬಾಲ್, ಕ್ರಿಕೆಟ್, ಬ್ಯಾಡ್‌ಮೆಂಟನ್, ಉಳಿದ ಬೀದಿ ಆಟಗಳೆಂದರೆ ಗೋಲಿ, ಚಿಣ್ಣಿದಾಂಡು, ಬುಗುರಿ, ಜೊತೆಗೆ ಚಕ್ರಬಿಡುವುದು: ಸಾಮಾನ್ಯವಾಗಿ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಎರಡೊ ಮೂರೊ ಮೈಲಿಗಳೂ ಸ್ಪರ್ಧೆ ಹೂಡಿ ಚಕ್ರಬಿಡುತ್ತಾ ಓಡುತ್ತಿದ್ದೆವು; ಆದರೆ ಅದು ಬರಿಯ ಖಾಲಿ ಆಟವಾಗಿರಲಿಲ್ಲ; ಅಲ್ಲಲ್ಲಿ ಸಾಧ್ಯವಾದಲ್ಲೆಲ್ಲ ಲೂಟಿಯೂ ನಡೆಯುತ್ತಿತ್ತು; ಕಬ್ಬಿನ ಹಿತ್ತಲು ಕಂಡಾಗ, ದಾರಿಪಕ್ಕದ ಕಬ್ಬಗೋಲುಗಳನ್ನು ಮುರಿಯದೆ ಬಿಡುತ್ತಿರಲಿಲ್ಲ. ಯಾರಾದರೂ ತೋಡದಲ್ಲಿ ಚಕ್ಕೋತದ ಹಣ್ಣು ನೇತಾಡುತ್ತಿರುವುದನ್ನು ಕಂಡರೆ, ಒಬ್ಬನು ಮರ ಹತ್ತಿ ಹಣ್ಣು ಕೊಯ್ದು ಹಾಕಿದರೆ, ಮತ್ತೊಬ್ಬನು ಅದು ಕೆಳಗೆ ಬಿದ್ದು ಸದ್ದಾಗದಂತೆ ಬುತ್ತಿ ಹಿಡಿದು ಬೇಲಿಯಾಚೆಗೆ ಇದ್ದವರ ಕೈಗೆ ಎಸೆಯುತ್ತಿದ್ದು, ಮನೆಯವರಿಗೇನಾದರೂ ಸುಳಿವು ಹತ್ತಿ ಕೆಟ್ಟ ಬೈಗುಳಗಳ ಆಶೀರ್ವಾದ ಮಾಡುತ್ತಾ ಟ್ಟಿಸಿಕೊಂಡು ಬಂದರೆ, ಚಂಗನೆ ನೆಗೆದು, ಹಾರಿ, ವೇಗವಾಗಿ ತೀರ್ಥಹಳ್ಳಿ ಕಡೆಗೆ ಚಕ್ರ ಬಿಡುತ್ತಿದ್ದೆವು! ಇನ್ನೂ ಒಂದು ಆಟವೆಂದರೆ, ಕಳ್ಳ-ಪೋಲಿಸ್: ಒಂದು ಕಳ್ಳರ ಗುಂಪು, ಒಂದು ಪೋಲಿಸರ ಗುಂಪು. ಮೊದಲು ಕಳ್ಳರ ಗುಂಪು ಹಕ್ಕಲು ಕುರುಚಲು ಕಾಡು ದಟ್ಟ ಕಾಡುಗಳಲ್ಲಿ ಅಡಗಿದ ಮೇಲೆ, ಗೊತ್ತಾದ ಹೊತ್ತು ಕಳೆದು ಪೋಲಿಸರ ಗುಂಪು ಬೆನ್ನಟ್ಟುತ್ತಿತ್ತು! ಆ ಆಟವೂ ಕೂಡ ಖಾಲಿ ಆಟವಾಗಿರುತ್ತಿರಲಿಲ್ಲ, ಕಳ್ಳ ಪೋಲೀಸು ಇಬ್ಬರಿಗೂ! ಕಲ್ಲಸಂಪಗೆ ಹಣ್ಣು, ಬೆಮ್ಮಾರಲ ಹಣ್ಣು, ಕರ್ಜಿ ಹಣ್ಣು, ಕಾರೆಹಣ್ಣು, ಕಾಕಿಹಣ್ಣು, ಹುಳಿಚೊಪ್ಪಿನ ಹಣ್ಣು, ಇನ್ನೂ ಏನೇನೊ ಹೆಸರಿಲ್ಲದ ಆದರೆ ರುಚಿಯಿರುವ ಹಣ್ಣುಗಳು ಅಂಗಿಜೇಬಿಗೂ ಇಳಿಬೀಳುತ್ತಿದ್ದುವು ಹೊಟ್ಟೆ ತುಂಬಿದ ತರುವಾಯ! ಆಗ ನಮ್ಮ ಬದುಕಿನಲ್ಲಿ ಆಟಕ್ಕೇ ಪ್ರಥಮ ಸ್ಥಾನ, ಪ್ರಧಾನ ಸ್ಥಾನ; ಓದುವುದೂ ಮನೆಯವರ ಹೆದರಿಕೆಯಿಂದ; ಅವರಿಂದೊದಗಬಹುದಾದ ಪ್ರಹಾರಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ. ಓದು ಜೀವನೋಪಾಯಕ್ಕಾಗಿ ಎಂಬ ಭಾವನೆಯಂತೂ ನಮ್ಮ ಬಳಿ ಸುಳಿಯುತ್ತಿರಲಿಲ್ಲ. ಕುಪ್ಪಳಿಯಿದೆ, ಗದ್ದೆಯಿದೆ, ತೋಟವಿದೆ, ಅಪ್ಪಯ್ಯ, ಅಜ್ಜಯ್ಯ, ದೊಡ್ಡ ಚಿಕ್ಕಪ್ಪಯ್ಯ ಇದ್ದಾರೆ. ಮತ್ತೆ ನಮಗೇನು ಸಂಪಾದನೆಯ ತೆವಲು? ಬದುಕು ಚಿರಕಾಲವೂ ಹಾಗೆಯೇ ಇರುತ್ತದೆ ಎಂಬಂತೆ: ನಾವು ಯಾವಾಗಲೂ, ಬಾಲಕರಾಗಿ, ಮನೆಯವರ ಬಲತ್ಕಾಋದಿಂದ ಅವರ ತೃಪ್ತಿಗಾಗಿ ಓದುತ್ತಿರುವುದು, ರಜಾ ಬಂದಾಗ ಮನೆಗೆ ಹೋಗುತ್ತಿರುವುದು, ರಜ ಮುಗಿಯಲು ಮತ್ತೆ ತೀರ್ಥಹಳ್ಳಿಗೆ ಬಂದು ಇಸ್ಕೂಲಿಗೆ ಹೋಗುವುದು! ಇನ್ನು ವಿದ್ಯೆ, ಸಂಸ್ಕೃತಿ, ಹುದ್ದೆ, ಜ್ಞಾನಸಂಪಾದನೆ ಮುಂತಾದುವು ನಮ್ಮ ಭಾಗಕ್ಕೆ - ಅಂತೂ ನನ್ನ ಭಾಗಕ್ಕೆ - ಮೊಲದ ಕೊಂಬುಗಳಾಗಿದ್ದುವು!

Tuesday, January 27, 2015

ಗೆಳೆಯರಿಬ್ಬರನ್ನು ನುಂಗಿದ ಹೊಸ ಗೆಳೆಯ - ತುಂಗಾ ಹೊಳೆ!

ತೀರ್ಥಹಳ್ಳಿಗೆ ಓದಲು ಬಂದಮೇಲೆ ನನ್ನ ಬದುಕಿನಲ್ಲಿ ಪರಿಣಾಮಕಾರಿಯಾಗಿ ಪ್ರಭಾವ ಬೀರುವಂತೆ ಪ್ರವೇಶಿಸಿದ ?ಂದು ಹೊಸ ವಸ್ತು ಎಂದರೆ -ಹೊಳೆ! ತುಂಗಾ ಮತ್ತು ಅದರ ಸಣ್ಣ ಉಪನದಿ ಕುಶಾವತಿ. ತೀರ್ಥಹಳ್ಳಿಗೆ ಒಂಬತ್ತು ಮೈಲಿ ದೂರದಲ್ಲಿರುವ ಕುಪ್ಪಳಿಯಲ್ಲಿ ಕೆರೆಯಿದೆ, ತೊರೆಯಿದೆ; ಆದರೆ ನಾವು ಈಸಾಡಬಹುದಾದ ಹೊಳೆ ಇಲ್ಲ. ಮನೆಯ ಬಳಿಯ ಕೆರೆ ಆಳವಾಗಿದ್ದುದರಿಂದ ಹುಡುಗರು ಅತ್ತ ಕಡೆ ಸುಳಿಯಬಾರದೆಂದು ಹಿರಿಯರ ಕಟ್ಟಪ್ಪಣೆ; ಅಲ್ಲದೆ ಅದರ ನೀರೇ ಮನೆಯಕಡೆ ಬಾವಿಗೆ ಬರುತ್ತಿದ್ದು, ಅದನ್ನು ಕುಡಿಯಲು ಉಪಯೋಗಿಸುತ್ತಿದ್ದು, ಕೆರೆಯ ನೀರನ್ನು ಕಲುಷಿತಗೊಳಿಸುವುದು ನಿಷಿದ್ಧವಾಗಿತ್ತು. ಇನ್ನು ಹತ್ತಿರದ ಹಳ್ಳಗಳೋ? ಬೇಸಗೆಯಲ್ಲಿ ಕಪ್ಪೆಗಳಿಗೂ ಈಜಲು ಸಾಕಾಗುವಷ್ಟು ನೀರು ಇರುತ್ತಿರಲಿಲ್ಲ, ಮಳೆಗಾಲದಲ್ಲಿ ತುಂಬಿ ಭೋರ್ಗರೆದು ರಭಸದಿಂದ ಹರಿಯುತ್ತಿದ್ದುದರಿಂದ ಹತ್ತಿರ ಹೋಗಲೂ ಹೆದರಿಕೆಯಾಗುತ್ತಿತ್ತು. ಆದ್ದರಿಂದ ತೀರ್ಥಹಳ್ಳಿಗೆ ಬಂದಮೇಲೆ ಹೊಳೆ ಒಂದು ಮನಮೋಹಕ ಆಕರ್ಷಣೀಯ ಕೆಳೆ ಆಗಿತ್ತು.

ಆದರೆ ಆ ಆಕರ್ಷಣೆಯಲ್ಲಿಯೂ ಒಂದು ಭಯದ ಅಂಶ ಹುದುಗಿರುತ್ತಿತ್ತು. ಹೊಳೆಯಲ್ಲಿ ಮೊಸಳೆಗಳಿದ್ದು, ಆಗೊಮ್ಮೆ ಈಗೊಮ್ಮೆ ಮೀಯಲು ಹೋದ ಮನುಷ್ಯರನ್ನೊ ನೀರುಕುಡಿಯಲು ಹೋದ ದನಗಳನ್ನೊ ಎಳೆದುಕೊಂಡು ಹೋಗುತ್ತಿದ್ದ ವಾರ್ತೆ ಕಿವಿಗೆ ಬೀಳುತ್ತಿತ್ತು. ಹಗಲು ಹೊತ್ತು ಹತ್ತು ಹದಿನೈದು ಅಡಿಗಳಿಗೂ ಉದ್ದವಾಘಿದ್ದ ಕರ್ಕಶಕಾಯದ ಹೆಮ್ಮೊಸಳೆಗಳು ಹೊಳೆಯಂಚಿನ ವಿಸ್ತಾರವಾದ ಮಳಲ ಹರಹಿನ ಮೇಲೆಯೂ ಅಲ್ಲಲ್ಲಿ ಎದ್ದಿರುತ್ತಿದ್ದ ಬಂಡೆಗಳ ಮೇಲೆಯೂ ಬಿಸಿಲು ಕಾಯಿಸುತ್ತಾ ಮಲಗಿರುತ್ತಿದ್ದ ಭೀಕರ ದೃಶ್ಯದ ವಿಚಾರವಾಗಿ ಪ್ರತ್ಯಕ್ಷದರ್ಶಿಗಳೆಂದು ಹೇಳಿಕೊಳ್ಳುತ್ತಿದ್ದ ಹುಡುಗರು ವರ್ಣಿಸಿಉತ್ತಿದ್ದರು. ಆದರೆ ಅದೆಲ್ಲಕ್ಕಿಂತಲೂ ಹೆಚ್ಚಾಗಿ, ನಾನು ಓದುವುದಕ್ಕೆ ಹೋದ ಮೊದಲನೆಯದೊ ಅಥವಾ ಎರಡನೆಯದೊ ವರ್ಷದಲ್ಲಿ ನಡೆದ ಒಂದು ದುರ್ಘಟನೆ ನಮ್ಮ ಶಾಲೆಯ ಗೆಳೆಯರ ಮನದಲ್ಲಿ ಹೃದಯ ವಿದ್ರಾವಕವಾದ ದಿಗಿಲನ್ನೆಬ್ಬಿಸಿತ್ತು.
ಕೃಷ್ಣಮೂರ್ತಿ ಮತ್ತು ಶ್ರೀನಿವಾಸಯ್ಯ -ಯಾವಾಗಲೂ ನನ್ನ ಆ ಪಕ್ಕ ಈ ಪಕ್ಕಗಳಲ್ಲಿಯೆ ಕುಳಿತು ತುಂಬ ಆತ್ಮೀಯತೆಯಿಂದ ಹರಟೆ ಹೊಡೆಯುತ್ತಿದ್ದರು, ಹಳ್ಳಿ ಮುಗ್ಧನಾದ ನನ್ನ ಕೂಡೆ. ಅವರು ಪೇಟೆಯಲ್ಲಿ ಹುಟ್ಟಿ ಬೆಳೆದ ಹಾರುವರ ಮಕ್ಕಳಾದುದರಿಂದ ಅವರಿಗೆ ಕೋವಿ, ಕಾಡು, ಬೇಟೆ ಇತ್ಯಾದಿಗಳೆಂದರೆ ಅಗೋಚರವಾದ ಬಹುದೂರದ ಅದ್ಭುತ ವಿಷಯಗಳಾಗಿದ್ದುವು. ಆ ವಿಚಾರವಾಗಿದ್ದ ಅವರ ಅಜ್ಞಾನವನ್ನು ಕುತೂಹಲವನ್ನು ನಾನು ಚೆನ್ನಾಗಿ ಉಪಯೋಗಿಸಿಕೊಂಡು, ನನ್ನ ಸ್ವಂತ ಅನುಭವವೊ ಎಂಬಂತೆ ಹುಲಿಯ, ಹಂದಿಯ, ಮಿಗದ, ಕಾಡಿನ, ಕೋವಿಯ ಕಥೆಗಳನ್ನು ಹುಟ್ಟಿಸಿಕೊಂಡು ಹೇಳುತ್ತಿದ್ದೆ, ಅವರು ಬಾಯಿಬಿಟ್ಟುಕೊಂಡು ಕಣ್ಣರಳಿಸಿ ಕಿವಿ ನಿಮಿರಿ ಪುಲಕಿತರಾಗಿ ಆಲಿಸುತ್ತಿದ್ದರು!
ಒಂದು ದಿನ ಸ್ಕೂಲಿಗೆ ಹೋದಾಗ ನಮ್ಮ ಕ್ಲಾಸಿನ ಹುಡುಗರು ಸ್ವಲ್ಪ ಭಯಭೀತರಾದಂತೆ ಕೆಳದನಿಯಲ್ಲಿ ಮಾತಾಡಿಕೊಳ್ಳುತ್ತಿದ್ದುದನ್ನು ಕಂಡು ವಿಚಾರಿಸಲಾಗಿ ಕೃಷ್ಣಮೂರ್ತಿ ಶ್ರೀನಿವಾಸಯ್ಯ ಇಬ್ಬರೂ ಹೊಳೆಯಲ್ಲಿ ಮುಳುಗಿಹೋದರಂತೆ ಎಂದರೆ! ಕಳೆದ ದಿನ ಸಾಯಂಕಾಲ ಸ್ಕೂಲು ಬಿಟ್ಟಾಗ ಒಟ್ಟಿಗೆ ಮಾತಾಡುತ್ತಾ ವಿನೋದವಾಡುತ್ತಾ ನ್ನನ್ನು ಬೀಳುಕೊಂಡಿದ್ದ ಅವರು ಮರುದಿನವೆ ಇಲ್ಲವಾಗಿದ್ದಾರೆ ಎಂಬುದನ್ನು ಕೇಳಿ ನನಗೆ ಆ ಸುದ್ದಿಯನ್ನು ನಂಬಲಾರದ ಮತ್ತು ನಂಬಲೊಲ್ಲದ ಒಂದು ತರಹದ ದಿಗಿಲಿನ ಮನಃಸ್ಥಿತಿಯುಂಟಾಯಿತು. ದುಃಖಕ್ಕಿಂತಲೂ ಹೆಚ್ಚಾಗಿ ಏನೋ ಒಂದು ಪ್ರಾಣದ ತಲ್ಲಣಿಕೆ! ಜನರು ಸಾಯುತ್ತಾರೆ ಎನ್ನುವುದು ಹೊಸ ವಿಷಯವಾಗಿಲ್ಲದಿದ್ದರೂ ಸಾವು ನಮ್ಮ ಹೃದಯಕ್ಕೆ ಸಮೀಪವೆ ಬಂದು ನಿಂತಾಗ ಅದರ ಪರಿಣಾಮವೇ ಬೇರೆ. ನಿನ್ನೆ ಇದ್ದ ನನ್ನ ಎಳೆಯ ಗೆಳೆಯರು ಇದ್ದಕ್ಕಿದ್ದಂತೆ ಇಲ್ಲವಾಗಿದ್ದಾರೆ! ಬುದ್ಧಿ ತುಸು ತತ್ತರಿಸಿಕೊಂಡಿತೆಂದೆ ಹೇಳಬೇಕು. ಮೃತ್ಯುವನ್ನು ಕುರಿತು ಯಾವ ಸ್ಪಷ್ಟ ಆಲೋಚನೆಯೂ ಸಾಧ್ಯವಲ್ಲದ ಆ ಬಾಲ ವಯಸ್ಸಿನಲ್ಲಿ ಮನಸ್ಸು ಏನೋ ಒಂದು ಮೂಕ ಭಿಷೆಯನ್ನುಭವಿಸಿತ್ತು.
ಬಹುಶಃ ನನಗಾದಂತೆಯೆ ನನ್ನ ಇತರ ಗೆಳೆಯರಿಗೂ ಆಗಿತ್ತೆಂದು ಊಹಿಸುತ್ತೇನೆ. ಆದರೆ ನನ್ನಂತೆಯೆ ಅವರೂ ಅದನ್ನು ಮರೆಯಿಕ್ಕಿ -ಏಕೆ? ಹೇಗೆ? ಎಲ್ಲಿ? ಎಂತು? ಎಂಬ ವಿಚಾರವಾಗಿ ಮಾತನಾಡುವ ಸೋಗಿನಲ್ಲಿ ಅದನ್ನು ಮುಚ್ಚಿಕೊಂಡರೆಂದು ಭಾವಿಸುತ್ತೇನೆ.

ಶಾಲೆ ಬಿಟ್ಟಮೇಲೆ ಅವರಿಬ್ಬರೂ ತಮ್ಮ ತಮ್ಮ ಮನೆಗಳಿಗೆ ಹೋಗಿ, ತಿಂಡಿ ತಿಂದು, ಹೊಳೆಯಾಚೆಯಲ್ಲಿದ್ದ ಬಂಧುಗಳನ್ನು ನೋಡಲು ಹೋಗುತ್ತಿದ್ದರಂತೆ. ಮಳೆಗಾಲ ಮುಗಿದು ರಾಮತೀರ್ಥದೆಡೆಯ ಕಲ್ಲುಸಾರ ಆಗತಾನೆ ಬಿಟ್ಟಿತ್ತು. ಸಾರಗಳ ಮೇಲೆ ದಾಟುವ ಸ್ವಾರಸ್ಯಕ್ಕೆ ಒಳಗಾಗಿ ಹೊರಟರು. ಯಾವುದೊ ಒಂದೆಟೆಯ ಸಾರದಲ್ಲಿ ಇನ್ನೂ ತುಸು ತೆಳ್ಳೆನೀರು ಹರಿಯುತ್ತಿತ್ತಂತೆ. ಒಬ್ಬನು ಜಾರಿ ಹೊಳೆಗೆ ಬೀಳಲು ಇನ್ನೊಬ್ಬನು ಅವನನ್ನು ಹಿಡಿಯಲು ಹೋಗಿ ಇಬ್ಬರೂ ರಭಸದ ಹೊನಲಿನಲ್ಲಿ ಕೊಚ್ಚಿ ಹೋದರಂತೆ, ಹೆಣಗಳೂ ಇನ್ನೂ ಸಿಕ್ಕಿರಲಿಲ್ಲವಂತೆ!
ಗೆಳೆಯರು ನಾನಾ ರೀತಿಯಾಗಿ ಅವರಿಬ್ಬರ ಧೈರ್ಯವನ್ನು ಸ್ನೇಹಿತನಿಗಾಗಿ ತನ್ನ ಪ್ರಾಣವನ್ನೇ ಲಕ್ಷಿಸದೆ ತೆತ್ತ ಮಿತ್ರನ ತ್ಯಾಗಮಹಿಮೆಯನ್ನು ತಮ್ಮದೇ ಆ ರೀತಿಯಲ್ಲಿ ವರ್ಣಿಸಿ ಮಾತನಾಡಿಕೊಂಡರು.
ಸೃಷ್ಟಿ, ಜೀವ, ಜಗತ್ತು, ದೇವರು, ಸಾವು, ಹುಟ್ಟು, ಪಾಪ, ಪುಣ್ಯ, ಸ್ವರ್ಗ, ನರಕ ಇತ್ಯಾದಿ ವಿಷಯಗಳಲ್ಲಿ ಆಗಲೇ ತಡಕಾಡತೊಡಗಿದ್ದ ನನ್ನ ಚೇತನದ ಮೇಲೆ ಇಬ್ಬರು ಬಾಲಮಿತ್ರರ ಅಕಾಲಮರಣ ನನ್ನ ಸುಪ್ತಚಿತ್ತದಲ್ಲಿ ತನ್ನ ಗಂಭೀರ ಗುಪ್ತ ಪ್ರಭಾವವನ್ನು ಬೀರಿತೆಂದು ಬೇರೆ ಹೇಳಬೇಕಾಗಿಲ್ಲ.
ಹೊಳೆಯ ವಿಚಾರವಾಗಿಯೂ ಹಿಂದಿದ್ದ ಲಘುಭಾವನೆ ತೊಲಗಿತು. ಅದರೊಡನೆ ತುಂಬ ಎಚ್ಚರಿಕೆಯಿಂದಲೆ ವರ್ತಿಸಬೇಕೆಂಬ ಬುದ್ಧಿ ಬೆಳೆಯಿತು.

Thursday, January 22, 2015

ಹಾವುಗಳಿಗೆ ಕಲ್ಲು ಹೊಡೆದ ಧೀರರು!

ಒಂದು ಸಂಜೆ ಶಾಲೆ ಮುಗಿಯುವ ಘಂಟೆ ಹೊಡೆದೊಡನೆಯೆ ಕಟ್ಟೆಯೊಡೆದು ಕೆರೆಯ ನೀರು ಭೋರೆಂದು ಹೊರಗೆ ಧುಮುಕಿ ಹರಿದು ನುಗ್ಗುವಂತೆ ಬಾಳಕರೆಲ್ಲ ಸಂತೋಷ ಘೋಷಗೈಯುತ್ತಾ ತಂತಮ್ಮ ಮನೆಯ ಕಡೆಗೆ ಧಾಔಇಸತೊಡಗಿದರು. ಅಷ್ಟರಲ್ಲಿ ಎರಡು ದೊಡ್ಡ ಹಾವುಗಳು ಹಾದಿಯಲ್ಲಿ ದಾಟಿ ಬಂಗಲೆಯ ಬಯಲಿನತ್ತ ಹೋಗುತ್ತಿದ್ದುದು ಕಣ್ಣಿಗೆ ಬಿದ್ದು ಪೇಟೆಯ ಹುಡುಗರೆಲ್ಲ ಹೆದರಿ ಕೂಗಿಕೊಂಡು ಓಡಿದರು. ಆದರೆ ನಾವು -ನಾನು, ಕಡೆಮಕ್ಕಿ ಸುಬ್ಬಣ್ಣ, ಕುಪ್ಪಳಿ ಮಾಣಪ್ಪ- ದೊಡ್ಡ ದೊಡ್ಡ ಕಲ್ಲುಗಳನ್ನು ಕೈಗೆ ತೆಗೆದುಕೊಂಡು ಅವುಗಳನ್ನು ಅಡ್ಡಗಟ್ಟಿ ಹೊಡೆಯತೊಡಗಿದೆವು. ಅವು ಭಯದಿಂದ ಅತ್ತ ಇತ್ತ ನುಗ್ಗಿದುವು. ದೂರನಿಂತು ನೋಡುತ್ತಿದ್ದ ಹುಡುಗರು ನಮ್ಮನ್ನು ಕೂಗಿ ಕರೆದು ಅಪಾಯದಿಂದ ಪಾರುಮಾಡಲು ಬೊಬ್ಬೆ ಹಾಕುತ್ತಿದ್ದರು. ಈ ಗಲಭೆ ಶಾಲೆಗೂ ಮುಟ್ಟಿ ಉಪಾಧ್ಯಾರುಗಳೆಲ್ಲ ಹೊರ ಅಂಗಳದಲ್ಲಿ ನೆರೆದು ನಮ್ಮನ್ನು ಕರೆಯತೊಡಗಿದರು. ನಾವು ಕಾಡುಹಳ್ಳಿಯ ಬಾಳಕರಾದುದರಿಂದ ನಮಗೆ ಆ ಹಾವುಗಳು ಅಪರಿಚಿತವೂ ಆಗಿರಲಿಲ್ಲ, ಭಯಂಕರವೂ ಆಗಿರಲಿಲ್ಲ. ಅದೂ ಅಲ್ಲದೆ ಒಂದು ಬಗೆಯ ಬೇಟೆಯಂತಾಗಿ ನಮಗೆ ಉಲ್ಲಾಸವೋ ಉಲ್ಲಾಸ. ಅದೂ ಅಲ್ಲದೆ ನಮಗೆ ಅವು ಗಾತ್ರದಲ್ಲಿ ಬಹುದೊಡ್ಡದಾಗಿ ಕಂಡರೂ ನಾಗರಹಾವುಗಳಲ್ಲ ಕೇರೆ ಹಾವುಗಳು ಎಂಬುದೂ ಗೊತ್ತಾಗಿತ್ತು. ಆದ್ದರಿಂದ ನಾಔಉ ಹೆದರದೆ ನುಗ್ಗಿ ಕಲ್ಲು ಹೊಡೆದೇ ಹೊಡೆದೆವು. ಉಪಾಧ್ಯಾಯರ ಕೂಗಿಗೂ ಮನ್ನಣೆ ಕೊಡಲಿಲ್ಲ. ಕ್ಲಾಸಿನ ಹೊರಗೂ ಇವರದೇನು ಅಧಿಕಾರ? ಎಂಬುದು ನಮ್ಮ ಬುದ್ಧಿ. ಅಂತೂ ಆ ಹಾವುಗಳು ಏಟು ತಿಂದರೂ ಪೊದೆಗಳಲ್ಲಿ ನುಗ್ಗಿ ತಪ್ಪಿಸಿಕೊಂಡು ಕಣ್ಮರೆಯಾಗಿಬಿಟ್ಟವು. ನಾವು ’ಅಂಜುಬುರುಕ ಪೇಟೆಯ ಮಕ್ಕಳು’ ಎಂದು ಇತರ ಬಾಲಕರನ್ನು ಅಣಕಿಸಿ ಉಪಾಧ್ಯಾಯರುಗಳ ಕಡೆ ತಿರುಗಿಯೂ ನೋಡದೆ ಮನೆಗೆ ಹೋದೆವು. ಅದು ನಮಗೆ ಅತ್ಯಂತ ಸಾಮಾನ್ಯ ವಿಷಯವಾಗಿದ್ದುದರಿಂದ ಅದನ್ನು ಮರೆತೂಬಿಟ್ಟೆವು.

ಆದರೆ ಇತರ ಹುಡುಗರಿಗೂ, ಬಹುಮಟ್ಟಿಗೆ ಹಾರುವರೇ ಆಗಿದ್ದ ಉಪಾಧ್ಯಾಯವರ್ಗದವರಿಗೂ ಅದು ಅದ್ಭುತ ಸಾಹಸದ ವಿಷಯವಾಗಿ ತೋರಿತ್ತು! ನಮ್ಮ ಮನಸ್ಸಿನಿಂದ ಅದು ಸಂಪೂರ್ಣವಾಗಿ ಅಳಿಸಿಹೋಗಿದ್ದರೂ ಅವರೆಲ್ಲ ಅದರ ವಿಚಾರವಾಗಿಯೆ ಪ್ರಸ್ತಾಪಿಸುತ್ತಾ ಶ್ಲಾಘಿಸುತ್ತಾ ಟೀಕಿಸುತ್ತಾ ’ಶೂದ್ರರ ಮಕ್ಕಳೆ ಹಾಗೆ’ ಎಂದು ಮಾತಾಡಿಕೊಳ್ಳುತ್ತಾ ಮನೆ ಸೇರಿದ್ದರು.
ಮರುದಿನ ಕ್ಲಾಸಿನಲ್ಲಿ ’ಯಾರು ನಿನ್ನೆ ಹಾವುಗಳನ್ನು ಹೊಡೆಯುತ್ತಿದ್ದವರು ಎದ್ದು ನಿಂತುಕೊಳ್ಳಿ’ ಎಂದರು, ನಮ್ಮ ತರಗತಿಯ ಉಪಾಧ್ಯಾಯರು, ಬೆತ್ತದ ರಾಘವಾಚಾರ್ಯರು!
ನಮ್ಮ ಧೈರ್ಯವನ್ನು ಪ್ರಶಂಸಿಸುತ್ತಾರೋ ಏನೋ ಎಂದು ಭಾವಿಸಿ ನಾವು ಮೂವರೂ ಎದ್ದು ನಿಂತೆವು. ಆದರೆ ಪ್ರಶಂಸೆಗೆ ಬದಲಾಗಿ ನಮಗೆ ಕಾದಿದ್ದುದು ಬೆತ್ತದೇಟು.
***
ಏತಕ್ಕಾಗಿ ನಮ್ಮನ್ನು ಬಯ್ದು, ಎಚ್ಚರಿಕೆ ಹೇಳಿ, ಸಾದಾಶಿಕ್ಷೆ ಕೊಟ್ಟರೋ ನನಗಿನ್ನೂ ಅಥ್ವಾಗಿಲ್ಲ. (’ಸಾದಾಶಿಕ್ಷೆ’ ಎಂದರೆ, ಅಷ್ಟು ಬಲವಾಗಿ ಅಲ್ಲದೆ, ಮೆಲ್ಲನೆ, ಚಾಚಿದ ಅಂಗೈಗೆ ತುಸು ಬಿಸಿ ಮುಟ್ಟಿಸುವುದು. ’ಕಠಿಣ ಶಿಕ್ಷೆ’ ಎಂದರೆ ಬಾಸುಂಡೆ ಏಳುವಂತೆ ಬಡಿಯುವುದು.)
ಹುಡುಗರು ಅಪಾಯಕ್ಕೆ ಒಳಗಾಗುವ ಸಂಭವವಿರುವುದರಿಂದ ಅಂಥ ಕೆಲಸಕ್ಕೆ ಇನ್ನು ಮುಂದೆ ಹೋಗಬಾರದು ಎಂದೋ? ಉಪಾಧ್ಯಾಯರೆಲ್ಲ ಕೂಗಿ ಬೊಬ್ಬೆಯಿಟ್ಟು ಕರೆದರೂ ಲೆಕ್ಕಿಸದೆ ಹೋದುದು ’ಅವಿಧೇಯತೆ’ ಎಂದೋ? ಹಾವು ಪೂಜಾಯೋಗ್ಯವಾದ ಪವಿತ್ರ ಪ್ರಾಣಿ; ಹುತ್ತಕ್ಕೆ ಹತ್ತಿ ಹೂಮುಡಿಸಿ ಹಾಲೆರೆದು ಪೂಜಿಸುತ್ತಾರೆ; ಅಂಥ ನಾಗದೇವರುಗಳನ್ನು ಕೊಲ್ಲುವುದಕ್ಕೆ ಹೋದದ್ದು ಪಾಪವಾದ್ದರಿಂದ ಅಂತಹ ಪಾಪಕಾರ್ಯಗಳಿಂದ ನಮ್ಮನ್ನು ವಿಮುಖಗೊಳಿಸಲೆಂದೋ? ದೇವರೆ ಬಲ್ಲ!

Tuesday, January 20, 2015

ಭಗವಂತನ ನಿರಂಕುಶೇಚ್ಛೆಯ ವಿರುದ್ಧ ದಂಗೆಯೆದ್ದ ಬಾಲಕ!

ಒಂದು ಬೈಗು. ಸ್ಕೂಲಿನಿಂದ ಮನೆಗೆ ಬಂದು ಇತರರೊಡನೆ ತಿಂಡಿ ತಿಂದೆ. ಹೊರಗೆ ಅಲೆಯಲು ಹೋಗುವ ಮನಸ್ಸು ಕುದಿಯತೊಡಗಿತು. ಜೊತೆಯ ಸಹಪಾಠಿಗಳು ಯಾರೊಬ್ಬರೂ ನನ್ನೊಡನೆ ಬರಲೊಪ್ಪಲಿಲ್ಲ. ನಾನೊಬ್ಬನೆ ಹೊರಟೆ ರಬ್ಬರು ಬಿಲ್ಲನ್ನು ಕೈಯಲ್ಲಿ ಹಿಡಿದು, ಕಲ್ಲಿನ ಚೀಲವನ್ನು ಬಗಲಿಗೆ ಸಿಕ್ಕಿಸಿಕೊಂಡು, (ಆ ಕಲ್ಲಿನ ಚೀಲ ಅದರ ಹಿಂದಿನ ಅವತಾರದಲ್ಲಿ ನನ್ನದೆ ಇಜಾರದ ಒಂದು ಕಾಲಾಗಿತ್ತು. ಇಜಾರ ಮಂಡಿಯ ಹತ್ತಿರ ಸವೆದು ತೂತು ಬೀಳಲು ಅದನ್ನು ಅಲ್ಲಿಗೇ, ಹರಿದು ಚಡ್ಡಿಯನ್ನಾಗಿ ಮಾಡಿ ಹಾಕಿಕೊಂಡಿದ್ದೆ. ಉಳಿದ ಕತ್ತರಿಸಿದ ಎರಡು ಕಾಲಿನ ಅರ್ಧ ಭಾಗಗಳನ್ನು ಒಂದು ತುದಿ ಹೊಲಿದು ’ಚಾಟರ್ ಬಿಲ್ಲಿ’ಗೆ ಉಪಯೋಗಿಸಲು ಹರಳುಕಲ್ಲು ತುಂಬುವ ಚೀಲಗಳನ್ನಾಗಿಸಿದ್ದೆ. ಭಾರವಾಗಿದ್ದ ಚೀಲವನ್ನು ಬಗಲಿಗೆ ಸಿಕ್ಕಿಸಿಕೊಳ್ಳಲು ಅನುಕೂಲವಾಘುವಂತೆ ನೇಲುಹಗ್ಗಗಳನ್ನು ಪಟ್ಟಿಯಾಗಿ ಹೊಲೆದಿದ್ದೆ.)

ಸೂರ್ಯ ಆಗತಾನೆ ಪಶ್ಚಿಮದಿಕ್ಕಿನ ಕಾಡುಗಳಲ್ಲಿ ಕಣ್ಮರೆಯಾಗಿದ್ದ. ಸಂಧ್ಯಾರಾಗ ಹಸುರನ್ನೆಲ್ಲ ಮೀಯಿಸಿತ್ತು. ಗೂಡುಗೊತ್ತುಗಳೀಗೆ ಹಿಂತಿರುಗುತ್ತಿದ್ದ ಹಕ್ಕಿಗಳ ತರತರಹ ಉಲಿ ಬನದ ನೀರವತೆಗೆ ರಾಗರೋಮಾಂಚನವೀಯುತ್ತಿತ್ತು. ಅದು ಹೊರತು ಬೇರೆ ಯಾವ ಸದ್ದೂ ಇರಲಿಲ್ಲ. ನಾನು ಹೋಗುತ್ತಿದ್ದ ಕಾಡು ಒಂದು ಪೃಶಾಂತ ವಾತಾವರಣದಿಂದ ಧ್ಯಾನಮಯವಾಗಿತ್ತು. ನನ್ನ ಕೈ ಬಿಲ್ಲನ್ನು ಹಿಡಿದಿದ್ದರೂ, ಕಣ್ಣು ಗುರಿಯನ್ನು ಹುಡುಕುವ ಕಾರ್ಯದಲ್ಲಿ ಮಗ್ನವಾದಂತೆಯಿದ್ದರೂ ಮನಸ್ಸು ಏನೇನನ್ನೊ ಮೆಲುಕುಹಾಕುತ್ತಿತ್ತು. ಒಮ್ಮೊಮ್ಮೆ ಅದು ತುಂಬ ಗಹನವೂ ಉನ್ನತವೂ ಆದ ವಿಚಾರಗಳ ಕಡೆಗೂ ಏರಿ ಇಳಿಯುತ್ತಿತ್ತು. ಪಾಪ, ಪುಣ್ಯ, ದೇವರು, ಜಗತ್ತು, ಸೃಷ್ಟಿ, ವಿಧಿ, ಕಾಡು, ಬೆಟ್ಟ, ಸೂರ್ಯ, ಚಂದ್ರ -ಹೀಗೆಲ್ಲ ಅಲೆಯುತ್ತಿತ್ತು ಆಲೋಚನೆ, ಅಥವಾ ಅದರ ಅಂಬೆಗಾಲಿಕ್ಕುವ ಒಂದು ಮನಃಸ್ಥಿತಿ!
ಅಷ್ಟರಲ್ಲಿ ಬಾಯಲ್ಲಿದ್ದ ಪೆಪ್ಪರಮೆಂಟು ಕರಗಿ ಖರ್ಚಾಗಿತ್ತು. ಮತ್ತೆ ಕೈ ತನಗೆ ತಾನೆ ಸ್ವಯಂಚಾಲಿತವಾಗಿ ಜೇಬಿನೊಳಗೆ ತೂರಿ ಹುಡುಕಿತು. ಇಲ್ಲ, ಪೆಪ್ಪರಮೆಂಟೆಲ್ಲ ಮುಗಿದು ಹೋಗಿವೆ! ಆದರೆ, ತಿಂಡಿಯ ಕೊಸರಾಗಿ ಬಂದಿದ್ದ ಒಂದು ಬಾಳೆಯ ಹಣ್ಣು ಜೇಬಿನ ಆಶ್ರಯ ಪಡೆದಿತ್ತು. ಕೈ ಅದನ್ನು ಈಚೆಗೆ ಎಳೆಯಿತು. ಸಿಪ್ಪೆಯನ್ನು ಸ್ವಲ್ಪಸ್ವಲ್ಪವಾಗಿ ಸುಲಿಯುತ್ತಾ ಅಷ್ಟಷ್ಟೆ ಭಾಗವನ್ನು ಕಚ್ಚಿಕಚ್ಚಿ ತಿನ್ನತೊಡಗಿತು ಬಾಯಿ. ಇಷ್ಟೆಲ್ಲ ಅನೈಚ್ಛಿಕವೊ ಎಂಬಂತಹ ಕ್ರಿಯೆ ನಡೆಯುತ್ತಿದ್ದಾಗ ಕಾಲುಗಳು ನಡೆಯುವ ತಮ್ಮ ಕೆಲಸವನ್ನು ಮಾಡುತ್ತಲೆ ಇದ್ದುವು; ಕಣ್ಣುಗಳು ಪೊದೆ ಮರಗಳಲ್ಲಿ ದಿಟ್ಟಿನೆಟ್ಟು ಹುಡುಕುತ್ತಲೆ ಇದ್ದುವು; ಮನಸ್ಸೂ ತನ್ನ ಪಾಡಿಗೆ ತಾನು ಚಿಂತನ ಕಾರ್ಯದಲ್ಲಿ ತೊಡಗಿಯೆ ಇತ್ತು:
ಈ ಕಾಡು, ಈ ಗುಡ್ಡಸಾಲು, ಈ ಮೋಡ, ಈ ಆಕಾಶ ಇದನ್ನೆಲ್ಲ ಮಾಡಿದ್ದಾನಲ್ಲಾ ದೇವರು, ಅವನು ಎಂತಹ ಅದ್ಭುತ ಶಕ್ತಶಾಲಿಯಾಗಿರಬೇಕು? ಬಾವಿಸುತ್ತೇನೆ. ಎಲ್ಲ ಅವನ ಇಚ್ಛೆಯಂತೆಯೆ ಆಗಿದೆ. ಅವನ ಇಚ್ಛೆಗೆ ಎಲ್ಲವೂ ಅಧೀನ. ಈ ಪೊದೆಯ ಬಳಿ ಹಸುರಿನ ಮೇಲೆ ಅರ್ಧ ಕಾಣಿಸಿಕೊಂಡು ಇಲ್ಲಿ ಬಿದ್ದಿರುವ ಈ ಕಲ್ಲುಗುಂಡು ಇಲ್ಲಿಯೇ ಹೀಗೆಯೇ ಬಿದ್ದಿರಬೇಕೆಂದು ದೇವರು ನಿಯಮಿಸಿದ್ದಾನೆ. ಆದ್ದರಿಂದಲೆ ಅದು ಇಲ್ಲಿಯೇ ಬಿದ್ದಿದೆ, ಇಲ್ಲಿಂದ ಹಂದುವುದಿಲ್ಲ. ಎಲ್ಲ ಭಗವಂತನ ವಜ್ರನಿಯಮಕ್ಕೆ ಅಧೀನ. ಸ್ವತಂತ್ರೇಚ್ಛೆ ಎಲ್ಲಿಯೂ ಇಲ್ಲ. ಯಾರಿಗೂ ಇಲ್ಲ -ಇದ್ದಕ್ಕಿದ್ದ ಹಾಗೆ ಹುಡುಗನ ಮನಸ್ಸು ಸೆರೆಯಲ್ಲಿ ಸಿಕ್ಕಿಬಿದ್ದ ಸಿಂಹದಂತಾಗಿ ಕಂಬಿಗಳನ್ನೆಲ್ಲ ಕಿತ್ತು ಬಿಡುವಂತೆ ನುಗ್ಗತೊಡಗಿತು. ಛೆಃ ಇದೆಂತಹ ದಾಸ್ಯ?
ಅಷ್ಟು ಹೊತ್ತಿಗೆ ಬಾಳೆಯಹಣ್ಣು ತಿಂದು ಮುಗಿದು, ಸಿಪ್ಪೆ ಮಾತ್ರ ಕೈಯಲ್ಲಿತ್ತು. ಕೈ ಯಾಂತ್ರಿಕವಾಗಿ ಅದನ್ನು ಬಲವಾಗಿ ಎಸೆಯಿತು. ಅದು ತುಸುವೆ ದೂರದಲ್ಲಿದ್ದ ಒಂದು ಮುಳ್ಳುಪೊದೆಯ ಹರೆಗೆ ತಗುಲಿ ಒಂದೆರಡು ಕ್ಷಣ ಅಲ್ಲಿ ನೇತಾಡಿ, ಕೆಳಗೆ ನೆಲದ ಹಸುರಿಗೆ ಬಿತ್ತು. ಕಾಲು ತನ್ನ ಪಾಡಿಗೆ ತಾನು ಮುಂದುವರಿಯಿತು. ಹತ್ತಿಪ್ಪತ್ತು ಮಾರು.
ಭಗವಂತನ ನಿರಂಕುಶೇಚ್ಛೆಯ ಪ್ರಭುತ್ವದ ಮೇಲೆ ದಂಗೆಯೆದ್ದಿದ್ದ ನನ್ನ ಮನಸ್ಸು, ಒಡನೆಯೆ, ಆಗತಾನೆ ನಡೆದಿದ್ದ ನಿದರ್ಶನವನ್ನು ಆಶ್ರಯಿಸಿ ಪ್ರತಿಭಟಿಸಲು ಹೆಡೆಯೆತ್ತಿ ನಿಂತಿತ್ತು.
ನೋಡಿದೆಯಾ ದೇವರ ಇಚ್ಛೆಯನ್ನು ಉಲ್ಲಂಘಿಸಲು ಯಾರಿಗೂ ಎಂದಿಗೂ ಸಾಧ್ಯವಿಲ್ಲ. ಈ ಬಾಳೆಹಣ್ಣಿನ ಸಿಪ್ಪೆ ಇಲ್ಲಿಯೇ ಇಂಥ ಜಾಗದಲ್ಲಿಯೆ ಬೀಳಬೇಕೆಂದು ಅವನು ನಿಯಮಿಸಿಬಿಟ್ಟಿದ್ದ. ಆದ್ದರಿಂದ ಅದು ಅಲ್ಲಿಯೇ ಬೀಳಬೇಕಾಯಿತು. ಅದು ಯಾರ ತೋಟದ್ದೊ? ಯಾರು ಯಾರಿಗೆ ಮಾರಿದ್ದೊ? ಅದನ್ನು ನಮ್ಮ ಮನೆಯವರು ತಂದು, ನೀನು ತಿಂದು, ಅದರ ಸಿಪ್ಪೆಯನ್ನು ಇಲ್ಲಿಗೇ ತಂದು ಹಾಕಬೇಕಾಯಿತು. ಆ ವಿಧಿಯ ಇಚ್ಛೆಗೆ ನೀನೆ ವಾಹಕ ಗುಲಾಮ! ನೀನು ಮನೆಯಲ್ಲಿಯೇ ಅದನ್ನು ತಿಂದು ಅಲ್ಲಿಯೆ ಎಸೆಯಬಹುದಾಗಿತ್ತು. ಆದರೆ ಅದರ, ಆ ನೂರಾರು ಗೊನೆಗಳಲ್ಲಿ ಒಂದು ಗೊನೆಯ ನೂರಾರು ಹಣ್ಣುಗಳಲ್ಲಿ ಒಂದು ಯಃಕಶ್ಚಿತ್ ಹಣ್ಣಿನ ಆ ಸಿಪ್ಪೆ ಇಲ್ಲಿಯೇ ಬೀಳಬೇಕೆಂದು ವಿಧಿ ಇಚ್ಛಿಸಿದ್ದುದರಿಂದ ನೀನು ಇಂದು ಸಂಜೆ ಶಾಲೆಯಿಂದ ಬಂದು ತಿಂಡಿಯ ನೆವದಿಂದ ಅದನ್ನು ಇಲ್ಲಿಗೆ ತಂದು ತಿಂದು ಇಲ್ಲಿಯೆ ಹಾಕಬೇಕಾಯಿತು. ಹಾಗಿದೆ ಭಗವಂತನ ಅಲುಗಾಡದ ಕಟ್ಟಳೆ.
ಹುಡುಗನ ಮನಸ್ಸು ರೇಗಿತು. ನಾನೇನು ವಿಧಿಯ ಗುಲಾಮನಲ್ಲ. ವಿಧಿಯ ಇಚ್ಛೆಗೆ ಭಂಗ ತರಲೇಬೇಕು.
ಸೂರ್ಯ ಚಂದ್ರ ಪೃಥ್ವಿ ನಕ್ಷತ್ರಾದಿಗಳನ್ನು ಸೃಷ್ಟಿಸಿ ನಿಯಮ ಬಂಧನದಲ್ಲಿಟ್ಟಿರುವ ಆ ದುಷ್ಟವಿಧಿಯನ್ನು ಭಂಗಿಸುವ ದೃಢಛಲದಿಂದ, ಸಿಪ್ಪೆಯನ್ನೆಸೆದು ಅಷ್ಟು ದೂರ ಹೋಗಿದ್ದ ನಾನು, ಮತ್ತೆ ಹಿಂದಕ್ಕೆ ಬಂದೆ! ಸಿಪ್ಪೆ ಬಿದ್ದಿದ್ದ ಸ್ಥಳಕ್ಕೆ ಧಾವಿಸಿ ಹುಡುಕಿದೆ. ಅದು ಹಸರು ಹುಲ್ಲಿನಲ್ಲಿ ಅಡಗಿ ಬಿದ್ದಿತ್ತು. (ಪಾಪ! ಆ ಸೆರೆಮನೆಯ ಭಯಂಕರ ಶಿಕ್ಷೆಗೆ ಗೋಳಿಡುತ್ತಾ!) ಸೆರೆ ಬಿಡಿಸುವವನಂತೆ ಅದನ್ನು ಎತ್ತಿಕೊಂಡೆ! ಮತ್ತೆ ಸ್ವಲ್ಪ ದೂರ ನಡೆದು ಅದನ್ನು ಬೇರೊಂದು ಕಡೆಗೆ ಎಸೆದು, ವಿಜಯಿಯ ಹೆಮ್ಮೆಯಿಂದ ಮುಂದುವರಿದೆ.
ಆದರೆ ಆ ಹೆಮ್ಮೆ ಅಲ್ಪಾಯುವಾಗಿ ಬಿಟ್ಟಿತು! ಹಾಳು ವಿಧಿ ಮೂದಲಿಸತೊಡಗಿತು. ಆ ಬಾಳೆಹಣ್ಣಿನ ಸಿಪ್ಪೆ ನಾನು ಮತ್ತೆ ಎಸೆದು ಈಗ ಅದು ಬಿದ್ದಿರುವ ಜಾಗದಲ್ಲಿಯೆ ಅದು ಬೀಳಬೇಕೆಂದು ವಿಧಿಯ ಇಚ್ಛೆಯಿದ್ದುದರಿಂದಲೆ ನಾನು ಪುನಃ ಅದರ ದಾಸನಂತೆ ಹಿಂದಕ್ಕೆ ಹೋಗಿ ಅದನ್ನು ತಂದು ಇಲ್ಲಿ ಎಸೆಯಬೇಕಾಯಿತಲ್ಲಾ! ನನಗೆ ತಲೆ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತು. ನನ್ನ ಅಸಹಾಯಕತೆಗೆ ನಾನೆ ದುಃಖಿಸಿ ಕಣ್ಣು ಹನಿತುಂಬಿತು. ಸೋಲಿಗೂ ಅವಮಾನಕ್ಕೂ ಅಳು ಬರುವಂತಾಯ್ತು. ಈ ಬಿದ್ದಿರುವ ಜಾಗದಿಂದಲೂ ಅದನ್ನು ತೆಗೆದು ಬೇರೆ ಕಡೆಗೆ ಬಿಸಾಡಬೇಕು ಎಂದೆನಿಸಿತು. ಆದರೆ ಏನು ಪ್ರಯೋಜನ? ಮತ್ತೆ ವಿಧಿಯ ದಾಸನಾಗಿಯೆ ಕೆಲಸ ಮಾಡಿದಂತಾಗುತ್ತದೆ. ಥೂ! ಹಾಳು ವಿಧಿಯ ಬಾಯಿಗೆ ಮಣ್ಣು ಹಾಕಲಿ! ಏನಾದರೂ ಸಾಯಲಿ! ನನಗೇಕೆ? ಎಂದೆಲ್ಲ ಶಪಿಸಿಬಿಟ್ಟು, ಮನಸ್ಸಿನಿಂದ ಅದನ್ನು ತಳ್ಳಿ, ರಬ್ಬರುಬಿಲ್ಲಿಗೆ ಕಲ್ಲುಹರಳು ಹಾಕಿಕೊಂಡು, ಬೇಗಬೇಗೆ ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳಲು ಧಾವಿಸಿದೆ! ಹೊತ್ತುಮೀರಿ ಹೋದರೆ, ಹಾಳುವಿಧಿ, ಮನೆ ಮೇಷ್ಟರ ಕೈಲಿ ಛಡಿ ಏಟು ಹಾಖಿಸುವ ಹುನಾರು ಮಾಡಿದೆಯೋ ಏನೋ ಯಾಋಉ ಬಲ್ಲರು?
***
ಬೆಟ್ಟಕಾಡುಗಳಲ್ಲಿ, ತಿರುಗಾಡುವ ನನ್ನ ಆಜನ್ಮಚಪಲತೆಗೆ ’ಪ್ರಕೃತಿ ಪ್ರೇಮ’ ’ನಿಸರ್ಗಸೌಂದಾರ್ಯಆಭಿರುಚಿ’ ಎಂದು ನಾಮಕರಣ ಮಾಡಿಸಿಕೊಳ್ಳುವಷ್ಟು ಯೋಗ್ಯತೆಗೆ ಅರ್ಹವಾಗಿತ್ತೆಂದು ನಾನು ನಂಬಲಾರೆ. ಅದು ಒಂದು ತರಹ ಐಂದ್ರಿಯ ಸುಖಾನುಭವವಾಗಿತ್ತೆ ಹೊರತು ಬುದ್ಧಿಪೂರ್ವಕವಾದ ಸೌಂದರ್ಯಪ್ರಜ್ಞೆಯ ಆಸ್ವಾದವಾಗಿರಲಿಲ್ಲ. ಹಸಿದ ಪ್ರಾಣಿಗೆ ಹಸುರು ಮೇಯುವಾಗ ಒಂದು ಸುಖಾನುಭವವಾಗುತ್ತದೆ; ಅದಕ್ಕೆ ಹಸುರಿನ ಬಣ್ಣದ ಚೆಲುವಾಗಲಿ ಅದರ ಕೋಮಲತೆಯಾಗಲಿ ಬುದ್ಧಿಗಮ್ಯವಲ್ಲ. ಹಸುರಿನ ಚೆಲುವೂ ಕೋಮಲತೆಯೂ ಹುಲ್ಲು ಮೇಯುವ ಪ್ರಾಣಿಯ ಅಂತಃಪ್ರಜ್ಞೆಗೆ ಸಂಪೂರ್ಣ ಅಗಮ್ಯವೇನಲ್ಲ. ಸಂವೇದನೆ ಸಂಪೂರ್ಣ ಅಗಮ್ಯವಾಗಿ ಇದ್ದಿದ್ದರೆ ಅದು ಹುಲ್ಲು ಅಷ್ಟು ಹಸನಾಗಿ ಬೆಳೆದಿರದಿದ್ದ ಸ್ಥಳವನ್ನು ತಿರಸ್ಕರಿಸಿ ಈ ’ಸುಂದರ ಕೋಮಲ’ ಸ್ಥಾನಕ್ಕೇ ನುಗ್ಗಿ ಬರುತ್ತಿರಲಿಲ್ಲ. ಆದರೆ ಈ ಸೌಂದರ್ಯ ಈ ಕೋಮಲತೆಗೆಳು ಆ ಪ್ರಾಣಿಗೆ ತನ್ನ ಆಹಾರದ ಸಾರದ ಮತ್ತು ಸ್ವಾದುತ್ವದ ಅಂಗಗಳಾಗಿ ಇಂದ್ರಿಯಗೋಚರವಾಗಿ ಅದನ್ನು ಆಹ್ವಾನಿಸುತ್ತವೆ. ಅದು ’ಅಭಿರುಚಿ’ಗಿಂತಲೂ ಹೆಚ್ಚಾಗಿ ’ರುಚಿ’ಯಾಗಿರುತ್ತದೆ. ಅಂತಹ ಅಬುದ್ಧಿಪೂರ್ವಕವಾದ ಜೀವಪೌಷ್ಠಿಕ ಸಾಮಗ್ರಿಯಾಗಿತ್ತೆಂದು ತೋರುತ್ತದೆ, ನನಗೆ ಅಂದು ಆ ’ಪ್ರಕತಿ ಸೌಂದರ್ಯ!’ ನಾನು ’ಪ್ರಕೃತಿ’ಯನ್ನು ಸವಿಯುತ್ತಿದ್ದೆ ಎನ್ನುವುದಕ್ಕೆ ಬದಲಾಗಿ ’ಪ್ರಕೃತಿ’ಯೆ ನನ್ನನ್ನು ಸವಿಯುತ್ತಿದ್ದಳು ಎನ್ನಬಹುದಾಗಿತ್ತೇನೊ?! ಎಂತೂ ಸಹ್ಯಾದ್ರಿಯ ನೈಸರ್ಗಿಕ ರಮಣೀಯತೆಯ ಸುವಿಶಾಲ ಸರೋವರದಲ್ಲಿ ನನ್ನ ಬಾಲಚೇತನ ಮರಿಮೀನಾಗಿ ಓಲಾಡಿ ತೇಲಾಡುತ್ತಿತ್ತು.

Monday, January 19, 2015

ಕದ್ದವರು ಯಾರೊ? ಒಪ್ಪಿಕೊಂಡರು ಇವರು!

ಕುಪ್ಪಳಿಯ ನಮ್ಮ ಉಪ್ಪರಿಗೆಯ ಶಾಲೆಯಲ್ಲಿ ಮೋಸಸ್ ಅವರು ಮೇಷ್ಟರಾಗಿದ್ದಾಗ ನಡೆದದ್ದು.
ಅವರು ತೀರ್ಥಹಳ್ಳಿಗೆ ಪ್ರತಿ ಭಾನುವಾರವೂ ಪ್ರಾರ್ಥನೆಗೆ ಅವರ ಪ್ರಾಟೆಸ್ಟೆಂಟ್ ಚರ್ಚಿಗೆ ಹೋಗುತ್ತಿದ್ದರು. ಚರ್ಚು ಎಂದರೆ ಆಗ ಇದ್ದುದ್ದು ಉಪದೇಶಿ ಜ್ಞಾನಮಿತ್ರಯ್ಯನವರ ಮನೆಗೆ ಸೇರಿದಂತಿದ್ದ ಒಂದು ಉದ್ದ ಕೋಣೆಯಷ್ಟೆ. ಪೇಟೆಗೆ ಹೋದಾಗಲೆಲ್ಲ ಅವರು ತಮ್ಮ ಸ್ವಂತ ಉಪಯೋಗಕ್ಕೆಂದು ಏನನ್ನಾದರೂ ತಿಂಡಿ ಸಾಮಾನು ತಂದಿಟ್ಟುಕೊಳ್ಳುತ್ತಿದ್ದರು. ಅದನ್ನರಿತಿದ್ದು, ನಮ್ಮ ಮನೆಯಲ್ಲಿ ಓದುವುದಕ್ಕಿದ್ದ ನಮ್ಮ ನೆಂಟರ ಮಕ್ಕಳು, ನನಗಿಂತಲೂ ಅವರೆಲ್ಲ ತುಸು ದೊಡ್ಡವರೆ, ಒಮ್ಮೆ ಅವರು ತಂದಿಟ್ಟಿದ್ದ ಬಿಸ್ಕತ್ತಿನ ಇಡೀ ಡಬ್ಬವನ್ನೆ ಎಗರಿಸಿಬಿಟ್ಟರು. ಯಾರನ್ನು ವಿಚಾರಿಸಿದರೂ ನಾನಲ್ಲ ನಾನಲ್ಲ ಎಂದುಬಿಟ್ಟರು. ಬಹುಶಃ ನನಗೆ ಅರಿವಾಗುವಂತೆ ಅವರಲ್ಲಿ ಕೆಲವರಿಗೆ ಹೆದರಿಸಿ ಬೆದರಿಸಿ ಶಿಕ್ಷೆ ವಿಧಿಸಿದರೆಂದು ತೋರುತ್ತದೆ. ಆದರೂ ಯಾರು ಹಾರಿಸಿದವರೆಂಬುದು ಪತ್ತೆಯಾಗಲಿಲ್ಲ.
ನಾನು ಅವರೆಲ್ಲರಿಗೂ ಚಿಕ್ಕವನಾಗಿದ್ದುದರಿಂದಲೂ ಬಹುಶಃ ನನ್ನ ನೇರ ನಡೆಯ ಮುಗ್ಧತೆಯ ಅರಿವು ಇದ್ದುದರಿಂದಲೂ ಆ ಕೆಲಸ ಮಾಡಿದವನು ಎಂದಿಗೂ ನಾನು ಆಗಿರಲಾರನೆಂದು ನನ್ನನ್ನು ವಿಚಾರಿಸಲೇ ಇಲ್ಲವೆಂದು ತೋರುತ್ತದೆ. ಆದರೆ ನಾನು ಆ ಕೆಲಸ ಮಾಡಿರದಿದ್ದರೂ ಯಾರು ಮಾಡಿದವರು ಎಂಬುದು ಗೊತ್ತಿರಬಹುದಲ್ಲ. ಹುಡುಗರು ತಮ್ಮತಮ್ಮಲ್ಲಿಯೆ ಗುಟ್ಟನ್ನು ಹಂಚಿಕೊಂಡಿರುವುದು ಸಂಭವ! ಅಥವಾ ಅಷ್ಟೊಂದು ಬಿಸ್ಕತ್ತನ್ನು ಕಬಳಿಸುವಾಗ ನನಗೂ ಒಂದು ಬಿಸ್ಕತ್ತು ಕೊಟ್ಟಿರಬಾರದೇಕೆ? ಆದ್ದರಿಂದ ನನ್ನನ್ನು ಕೇಳಿದರೆ -ನಾನು ಯಾವುದನ್ನೂ ಮುಚ್ಚುಮರೆ ಮಾಡುವುದಿಲ್ಲ, ಸುಳ್ಳು ಹೇಳುವುದಿಲ್ಲ ಎಂದು ನಂಬಿ -ವಿಷಯದ ಪತ್ತೆಗೆ ಸುಳಿವು ದೊರೆಯಬಹುದು ಎಂದು ನಮ್ಮ ಐಯಪ್ಪ ಚಿಕ್ಕಯ್ಯ -ಮೈಸೂರಿನಲ್ಲಿ ಓದು ಪೂರೈಸಿ ಹಿಂತಿರುಗಿದ್ದ ತರುಣರು -ನನ್ನನ್ನು ’ಅಪ್ರೂವರ್’ ಆಗಿ ತೆಗೆದುಕೊಳ್ಳುವ ಉದ್ದೇಶದಿಂದ ವಿಚಾರಿಸಿದರು. ನನಗೆ ಏನೂ ಗೊತ್ತಿರಲಿಲ್ಲವಾದ್ದರಿಂದ ಹಾಗೆಂದೇ ತಿಳಿಸಿದೆ. ಆದರೆ ಅವರು ಮತ್ತೆ ಮತ್ತೆ ಪುಸಲಾಯಿಸುವಂತೆ ಕೇಳತೊಡಗಿದರು. ನನಗೆ ಗೊತ್ತಿದ್ದೂ ಮರೆಮಾಚುತ್ತಿದ್ದೇನೆ ಎಂದು ಊಹಿಸಿ, ನನ್ನನ್ನು ಮುದ್ದು ಮಾಡುವಂತೆ ಎತ್ತಿಕೊಂಡು ಹೋಗಿ ಸ್ನಾನದ ಮನೆಯ ಅರೆಗೋಡೆಯ ಮೇಲೆ ಕೂರಿಸಿಕೊಂಡು, ಪುಸಲಾಯಿಸಿ ಕೇಳತೊಡಗಿದರು. ಅಲ್ಲಿ ಇತರರು ಯಾರೂ ಇರಲಿಲ್ಲ. ಮೊದಮೊದಲು ನಾನು ನಿಜವನ್ನೆ ಹೇಳಿದೆ, ನನಗೆ ಗೊತ್ತಿಲ್ಲ ಎಂದು. ಯಾರು ಕದ್ದರೋ? ಯಾವಗ ಕದ್ದರೋ? ಯಾರು ಯಾರು ಹಂಚಿಕೊಂಡು ತಿಂದರೋ? ಯಾವುದೂ ತಿಳಿಯದು ಎಂದೆ. ಆದರೆ ಅವರು ನನ್ನನ್ನು ಇನ್ನೂ ಮುದ್ದಾಗಿ ಮಾತಾಡಿಸುತ್ತಾ ಮತ್ತೇ ಮತ್ತೇ ಕೇಳತೊಡಗಿದರು.
ಯಾರಾದರೊಬ್ಬರ ಹೆಸರನ್ನು ಹೇಳಿ ಪೀಡೆ ತಪ್ಪಿಸಿಕೊಳ್ಳಬಹುದಾಗಿತ್ತು ನಾನು. ಅವರೂ ನನ್ನಿಂದ ಅಷ್ಟನ್ನೇ ನಿರೀಕ್ಷಿಸುತ್ತಿದ್ದರು. ಆದರೆ ಯಾರ ಹೆಸರನ್ನು ಹೇಳುವುದು? ನಿಜವಾಗಿಯೂ ಕದ್ದಿದ್ದವರ ಹೆಸರನ್ನು ಹೇಳಿದರೆ ಸರಿಹೋಯ್ತು. ಆದರೆ ನಿರಪರಾಧಿಯಾದವನ ಹೆಸರನ್ನು ಹೇಳಿ, ಅವನಿಗೆ ಬಾಸುಂಡೆ ಬರುವಂತೆ ಹೊಡೆಸಿದರೆ!? ನನಗಂತೂ ಯಾರು ಏನು ಒಂದೂ ಗೊತ್ತಿಲ್ಲ. ಆದರೆ ಚಿಕ್ಕಯ್ಯ ಇಷ್ಟು ವಿಶ್ವಾಸದಿಂದ ನನ್ನಿಂದ ಅವರು ಅನ್ವೇಷಿಸುತ್ತಿದ್ದ ವಿಷಯ ಸಿಕ್ಕುತ್ತದೆ ಎಂದು ಪ್ರಶ್ನಿಸುತ್ತಿದ್ದಾರಲ್ಲಾ. ಅವರನ್ನು ನಿರಾಶೆಗೊಳಿಸುವುದು ಹೇಗೆ?
ಕಡೆಗೆ ಬಹಳ ಹೊತ್ತು ಅವರು ಪುಸಲಾಯಿಸಿದ ಮೇಲೆ ನನಗೂ ಬೇಸರವಾಗಿ ಒಂದು ನಿರ್ಧಾರಕ್ಕೆ ಬಂದೆ. ಅವರಿವರ ಹೆಸರನ್ನು ಹೇಳಿ, ಯಾರು ಯಾರನ್ನೊ ತಪ್ಪು ಮಾಡದವರನ್ನು ಕಷ್ಟಕ್ಕೆ ಸಿಕ್ಕಿಸುವುದೇಕೆ? ಚಿಕ್ಕಯ್ಯನನ್ನೂ ನಿರಾಶೆಗೊಳಿಸಬಾರದು; ಇತರರನ್ನೂ ತೊಂದರೆಗೆ ಸಿಕ್ಕಿಸಬಾರದು; ಎಂದು, ಕಡೆಗೆ ’ನಾನೇ ಅದನ್ನು ಕದ್ದು ತಿಂದವನು’ ಎಂದುಬಿಟ್ಟೆ!
ಅವರು ಕೇಳಿದ ಪ್ರಶ್ನೆಗಳಿಗೆ -’ಅದು ಎಲ್ಲಿತ್ತು?’ ’ಹೇಗೆ ತೆಗೆದೆ?’ ’ಕಾಗದದ ಡಬ್ಬಿಯೋ ಟಿನ್ನಿನ ಡಬ್ಬಿಯೋ?’ ’ನೀನೊಬ್ಬನೆ ತಿಂದೆಯೋ?’ ’ಯಾರು ಯಾರಿಗೆ ಕೊಟ್ಟೆ?’ - ನಾನು ಹೇಳುತ್ತಿದ್ದ ಉತ್ತರಗಳೆಲ್ಲ ಬರಿಯ ಸುಳ್ಳಿನ ಕಂತೆಯೆಂಬುದು ಅರಿವಾಗಲು ಅವರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ.
ಅಂತೂ ಅವರು ಎಂದೂ ನಿರೀಕ್ಷಿಸದೆ ಇದ್ದ ನಿರಾಶೆಯಿಂದ ನನ್ನನ್ನು ಗೋಡೆಯಿಂದಳಿಸಿದರು! ನನಗಂತೂ ಆ ಕೇಸು ಹೇಗೆ ಇತ್ಯರ್ಥವಾಯಿತು? ಹೇಗೆ ಕೊನೆಗೊಂಡಿತು? ಒಂದೂ ಗೊತ್ತಾಗಲಿಲ್ಲ. ಗೊತ್ತಾಗಲಿಕ್ಕೆ ಆ ವಿಚಾರ ಮತ್ತೆ ನನ್ನ ತಲೆಗೆ ಬಂದಿದ್ದರೆ ತಾನೆ!
***
ಈ ಘಟನೆಯ ಬಗ್ಗೆ, 'ನೆನಪಿನ ದೋಣಿಯಲ್ಲಿ' ಕವಿಯ ಮಾತು: "ಅದು ನನ್ನ ಸ್ವಭಾವದ ಮೇಲೆ ಬೆಳಕು ಬೀರುವ ಸಂಭವ ಉಂಟು."

Friday, January 16, 2015

ತನ್ನನ್ನು ತಾನೇ ಕಂಡುಕೊಂಡ ಒಂದು ದಿನ!

1924 ಜನವರಿ 16 ಬುಧವಾರದ ದಿನಚರಿ:
ಬೆಳಿಗ್ಗೆ ಎದ್ದವನೆ ವ್ಯಾಯಾಮ ಮಾಡಿದೆ. ಸ್ನಾನದ ತರುವಾಯ ಹೆಡ್ಮಾಸ್ಟರ ಮನೆಗೆ ಹೋದೆ. ಏನೂ ಫಲವಾಗಲಿಲ್ಲ. ಹಸ್ತಪ್ರತಿಯೊಡನೆ ಹಿಂತಿರುಗಿದೆ. ಕೆ.ಮಲ್ಲಪ್ಪನವರೊಡನೆ ಆತ್ಮ ಬ್ರಹ್ಮ ಕುರಿತು ಮಾತಾಡಿದೆ. ಅವರು ತುಂಬ ಬಿಸಿಯಾದರು, ತಣ್ಣೀರೆರಚಿ ಬಂದೆ. ರೂಮಿಗೆ ಬಂದಾಗ ಪಿ. ಮಲ್ಲಯ್ಯ ಬಂದಿದ್ದರು. ಅವರಿಗೆ ನನ್ನ ಕವನಗಳನ್ನು ತೋರಿಸಿದೆ. ನಾವಿಬ್ಬರೂ ಕೋದಂಡರಾಮ ಮುದ್ರಣಾಲಯಕ್ಕೆ ಹೋಗಿ ನನ್ನ ಚಿಕ್ಕ ಕಥೆ 'ಅಮಲನಕಥೆ'ಯನ್ನು ಅವನು ಪ್ರಕಟಿಸಲು ಸಾಧ್ಯವೆ ಎಂದು ವಿಚಾರಿಸಿದೆವು. ಅವನು ಸಾಧ್ಯವಿಲ್ಲ ಎಂದನು. ತರುವಾಯ ಪಬ್ಲಿಕ್ ಲೈಬ್ರರಿಗೆ ಹೋದೆವು. ನಾನು ಕೆಲವು ಮಾಸಪತ್ರಿಕೆಗಳನ್ನು ನೋಡಿದೆ.
ಹೊರಗಡೆಯ ಪ್ರಪಂಚದ ಕಡೆ ಕಣ್ಣು ಹಾಯಿಸಿದಾಗ ಅದೆಂತಹ ಗಲಿಬಿಲಿಯನ್ನು ಅದು ಎದುರುಗೊಳ್ಳುತ್ತದೆ: ರಣಭೇರಿ. ವೀಣಾವಾದ್ಯ, ನಾನಾ ಕಲೆಗಳ ಬಣ್ಣಬಣ್ಣದ ಸಂತೆ, ಅವರೊಡನೆಲ್ಲ ಬೆರೆಯಬೇಕೆಂದು ಮನಸ್ಸಾಗುತ್ತದೆ. ಈ ಮಹಾಜಗತ್ತಿನ ಬೃಹಜ್ಜೀವನ ಜಟಿಲಜಾಲದಲ್ಲಿ ನಾನೊಂದು ಅಣುವಿಗಿಂತಲೂ ಅಣುವಾಗಿ ಶೂನ್ಯವಾಗಿ ಬಿಡುತ್ತೇನೆ. ಈ ಅಪಾರ ರಣರಂಗದಲ್ಲಿ, ಎಲ್ಲಿ ಒಬ್ಬೊಬ್ಬನೂ ತಾನೆ ಸೇನಾಧಿಪತಿಯಾಗಲು ಹೆಣಗುತ್ತಾನೆಯೋ ಅಲ್ಲಿ, ನಾನೇನು ಮಹಾ? ಒಂದು ಕಃಪದಾರ್ಥ! ಆದರೂ ನನಗೊಂದು ಮಹದಾನಂದ ಉಂಟಾಗುತ್ತಿದೆ. ನನ್ನನ್ಯಾರು ಲೆಕ್ಕಿಸುತ್ತಾರೆ? ಆಗ ಕಣ್ಣು ಅಂತರ್ಮುಖವಾಗುತ್ತದೆ. ಕಣ್ಣು ಒಳಕಡೆಗೆ ಹೊರಳಿದಾಗ, ನನ್ನನ್ನು ಲೆಕ್ಕಿಸುವ ವ್ಯಕ್ತಿ ನೀನೊಬ್ಬನೆ! ಈ ವಿಷಯವಾಗಿ ಒಂದು ಕವನ ಬರೆಯಬೇಕೆಂದಿದ್ದೇನೆ. ರಾತ್ರಿ ಒಂಬತ್ತು ಗಂಟೆಯಲ್ಲಿ 'The Wreck of Titanic' 'ಟೈಟಾನಿಕ್ ಮಹಾನೌಕೆ' ಮುಳುಗಿಹೋದ ವಿಚಾರ ಓದಿದೆ. ಅದರ ನಾವಿಕರು ಸಾವನ್ನಪ್ಪಿದ ಧೈರ್ಯದಿಂದ ಪ್ರಚೋದಿತನಾಗಿ ಒಂದು ವೀರಕವನವನ್ನು ಬರೆಯಲು ಆಶೆಯಾಗಿದೆ. ರಾತ್ರಿ ಮಲಗಿದಾಗ ರಚಿಸುತ್ತೇನೆಂದು ತೋರುತ್ತದೆ. ದೇವದೇವ, ನೀನೊಬ್ಬನೆ ನನ್ನನ್ನು  ಲೆಕ್ಕಿಸುವವನು; ನೀನೊಬ್ಬನೆ ಸತ್ಯ, ಉಳಿದವರೆಲ್ಲ ಮಿಥ್ಯೆ. ಕೃಷ್ಣ! ಕೃಷ್ಣ! ಕೃಷ್ಣ!
***
ಜೇಮ್ಸ್ ಕಸಿನ್ಸ್ ಅವರನ್ನು ಭೇಟಿಯಾಗುವ ಮುಂಚೆಯೇ ಅಮಲನ ಕಥೆ ಪ್ರಕಟಣೆಗೆ ಸಿದ್ಧಗೊಂಡಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

Wednesday, January 14, 2015

ಕವಿಯ ಒಂದು ನೆನಪು : ಮಲೆಗಳಲ್ಲಿ ಮದುಮಗಳಲ್ಲಿ ಅದರ ಛಾಯೆ!

ಮೊದಲು ಇದನ್ನು ಓದಿಕೊಂಡುಬಿಡಿ: ಇನ್ನು ನೆನಪಿರುವ ಚಿತ್ರ -ುಳಿದೆಲ್ಲ ಮರೆತು ಆ ಚಿತ್ರ ಏಕೆ ನೆನಪಿದೆಯೋ ನನಗೆ ತಿಳಿಯದು. ಅದೇನೂ ಅಂತಹ ಅಸಾಮಾನ್ಯದ ದೃಶ್ಯವೂ ಅಲ್ಲ. ಅದನ್ನು ಕುರಿತು ಏಕೆ ಬರೆಯುತ್ತಿದ್ದೇನೆಯೋ ಅದೂ ತಿಳಿಯದಾಗಿದೆ. ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಇದು ಅತ್ಯಂತ ಅಪ್ರಕೃತ, ಅಸ್ವರಸ, ನೀರಸ! -ನಾನಿದ್ದ ಮಳಿಗೆಯ ಬಳಿಗೆ, ಒಂದು ಎತ್ತರದ ಪ್ರಾಕಾರದ ಒಳಗೆ ಇದ್ದ ಅಂಗಳವನ್ನು ಸುತ್ತುಗಟ್ಟಿ ಕೋಣೆಗಳಿದ್ದುವು. ಅವಕ್ಕೆ ಬಾಗಿಲೂ ಇರಲಿಲ್ಲ. ಇಡೀ ಕಟ್ಟಡ ಸರ್ವರಿಗೂ ತೆರೆದಂತೆ ತೆರೆದೇ ಇತ್ತು. ಅದನ್ನು 'ಮುಸಾಫರ್ ಖಾನೆ' ಎಂದು ಎಲ್ಲರೂ ಕರೆಯುತ್ತಿದ್ದರು. ನಮಗೆ ಅದರ ಅರ್ಥವೂ ಗೊತ್ತಿರದಿದ್ದುದರಿಂದ ಅದರ ವಿಚಾರವಾಗಿ ಏನೇನೊ ಭಯಂಕರ ಕಲ್ಪನೆಗಳನ್ನು ಕಟ್ಟಿಕೊಂಡಿದ್ದೆವು. ಅಲ್ಲಿ ಯಾವಾಗಲೂ ಗಡ್ಡ ಬಿಟ್ಟುಕೊಂಡವರು, ಉದ್ದ ನಿಲುವಂಗಿಯವರು, ಕೊಳಕಿನ ಮುದ್ದೆಯಾಗಿರುವವರು, ಭಿಕ್ಷುಕರಂಥವರು - ಒಟ್ಟಿನಲ್ಲಿ ನಮ್ಮ ಭಾಗಕ್ಕೆ ನಾವು ದೂರವೇ ಇರಬೇಕಾಗಿರುವಂತಹ ರಹಸ್ಯ ವ್ಯಕ್ತಿಗಳು -ಇರುತ್ತಿದ್ದರು. ನಾವು ಅದರೊಳಗೆ ಅಂಗಳಕ್ಕೆ ಹೋಗಲೂ ಹೆದರುತ್ತಿದ್ದೆವು. ನಮ್ಮನ್ನು ಕದ್ದುಕೊಂಡು ಹೋಗುತ್ತಾರೆ ಎಂದು ಭಯ! ನಮ್ಮನ್ನು ಯಾವುದಾದರೂ ಒಂದು ಪ್ರಾಣಿಯನ್ನಾಗಿ ಮಂತ್ರಶಂಕ್ತಿಯಿಂದ ಪರಿವರ್ತಿಸಿ ದೂರ ದೂರಕ್ಕೆ ಕೊಂಡೊಯ್ದು, ಮತ್ತೆ ಮನುಷ್ಯರನ್ನಾಗಿ ಮಾಡಿ ಮಾರತ್ತಾರೆ ಎಂದು ಹೆದರಿಕೆ! ಎಳೆಮಕ್ಕಳನ್ನು ಕೊಯ್ದು ಮಾಂಸ ಬೇಯಿಸಿ ತಿಂದೇ ಬಿಡುತ್ತಾರೆ ಎಂಬ ದಿಗಿಲು!

ಆ ಮುಸಾಫರ್ ಖಾನೆಯ ಹಿಂಭಾಗದಲ್ಲಿ ಒಂದು ಕೆರೆಯಿತ್ತು. ಅದೇನು ಅಂತಹ ದರ್ಶನೀಯ ಸ್ಥಾನವಾಗಿರಲಿಲ್ಲ. ಅದೊಂದು ಹೊಟ್ಟುಗೆರೆ, ಬೇಸಿಗೆಯಲ್ಲಿ ಕೆಸರೇ ನೀರು! ಊರುಹಂದಿಗಳು ಎಮ್ಮೆಗಳು ಮಗ್ಗುಲು ಬೀಳುತ್ತಿದ್ದುವು. ಜನರು ಮಲಬಾಧೆ ತೀರಿಸುವುದಕ್ಕೂ ಧಾರಾಳವಾಗಿ ಉಪಯೋಗಿಸುತ್ತಿದ್ದರು. ನನಗೆ ನೆನಪಿರುವಂತೆ ನಾವು ಅಲ್ಲಿಗೆ ಹೋಗುತ್ತಿದ್ದುದು, ಮಗ್ಗುಲು ಬಿದ್ದಿರುತ್ತಿದ್ದ ಊರುಹಂದಿಗಳಿಗೆ ಕಲ್ಲು ಹೊಡೆದೆಬ್ಬಿಸಿ ಅಲ್ಲಿದ್ದ ಕುರುಚಲು ಕಾಡಿನಲ್ಲೆಲ್ಲಾ ಅಟ್ಟುವುದಕ್ಕಾಗಿ. ಕುಪ್ಪಳಿಯಲ್ಲಿ ನಮ್ಮ ಹಿರಿಯರು ಹೆಗ್ಗಾಡಿನಲ್ಲಿ ಬೇಟೆಯಾಡುತ್ತಿದ್ದುದನ್ನು ಅನುಕರಿಸಿ ಆಟವಾಡುತ್ತಿದ್ದೆವಷ್ಟೆ: ಹಳು ನುಗ್ಗಿ, ಬಿಲ್ಲಿಗೆ ನಿಂತು! -ಬಹುಶಃ ಆಗ ನಾನು ಓದಲು ಹೋಗುತ್ತಿದ್ದುದು ಪೇಟೆಯಲ್ಲಿರುತ್ತಿದ್ದ ಒಂದು ಪ್ರಾಥಮಿಕ ಶಾಲೆ ಇರಬಹುದೆಂದು ತೋರುತ್ತದೆ. ಆಗ ನನ್ನ ಪ್ರಜ್ಞೆ ಇನ್ನೂ ಸ್ಮೃತಿಯಲ್ಲಿ ಸ್ಥಾಯಿಯಾಗಿ ನಿಲ್ಲಲಾರದೆ, ಅಂಬೆಗಾಲಿಕ್ಕಿಯೋ ತಿಪ್ಪತಿಪ್ಪ ಹೆಜ್ಜೆಯಿಟ್ಟೋ ತತ್ತರಿಸುತ್ತಿದ್ದಿರಬೇಕು!
***
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ, ತಿರುಪತಿ ಯಾತ್ರೆಗೆಂದು ಹೋಗಿದ್ದ ಹಳೆಮನೆ ದೊಡ್ಡಣ ಹೆಗ್ಗಡೆಯನ್ನು ಹೋಲುವ ಮೂಕ ಗೋಸಾಯಿಯೊಬ್ಬ ಗೋಸಾಯಿಗಳ ಗುಂಪಿನಲ್ಲಿ ಕಂಡುಬರುವ ಚಿತ್ರಣವಿದೆ. ಅಲ್ಲಿನ ವಿವರಣೆಯನ್ನು ಗಮನಿಸಿದರೆ, ಬಾಲ್ಯದಲ್ಲಿ ಕವಿ ಕಂಡ ಮುಸಾಫರ್ ಖಾನೆಯಯಲ್ಲಿ ಬೀಡು ಬಿಡುತ್ತಿದ್ದ, ಗಡ್ಡಬಿಟ್ಟುಕೊಂಡವರು, ಉದ್ದ ನಿಲುವಂಗಿಯವರು, ಕೊಳಕಿನ ಮುದ್ದೆಯಾಗಿರುವವರು, ಭಿಕ್ಷುಕರಂಥವರು - ಒಟ್ಟಿನಲ್ಲಿ ನಮ್ಮ ಭಾಗಕ್ಕೆ ನಾವು ದೂರವೇ ಇರಬೇಕಾಗಿರುವಂತಹ ರಹಸ್ಯ ವ್ಯಕ್ತಿಗಳು -ಇರುತ್ತಿದ್ದರು.ಎಂಬ ಮಾತಿನ ಪ್ರಭಾವವನ್ನು ಮನಗಾಣಬಹುದು. ಮುಸಾಫರ್ ಖಾನೆಯ ಆ ಚಿತ್ರಣದಿಂದ ಬಾಲಕನ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದ, ಮದ್ದು, ಮಾಟ, ವಶೀಕರಣ ಮೊದಲಾದ ಭಯೋತ್ಪಾದಕ ವಿಚಾರಗಳೂ ಕಾದಂಬರಿಯ ವಿವರಗಳಲ್ಲಿ ತಳುಕು ಹಾಕಿಕೊಂಡಿರುವುದನ್ನು ಕಾಣಬಹುದು.
ನೆನಪಿನ ದೋಣಿಯಲ್ಲಿ ಕವಿ ಬರೆದಂತೆ, ಈ ನೆನಪಿನ ಚಿತ್ರ ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಅಪ್ರಕೃತವೂ ಅಸ್ವರಸವೂ ನೀರಸವೂ ಅಲ್ಲ! ಪ್ರಕೃತವೂ ಸ್ವರಸವೂ ರಸವೂ ಆಗಿದೆ ಎನ್ನಲಡ್ಡಿಯಿಲ್ಲ.

Tuesday, January 13, 2015

1924 ಜನವರಿ 13ರ ಕವಿತೆ : The Noble Path

Speak not to me, though learned friend,
Of things beyond our power;
For man is born not to contend
And mar the joy of life's flower,

Vain, vain is the pride pf lore
For the path is not the goal;
Tho' thou art knowledge's mighty store
Yet higher is the soul.

ಹೀಗೆ ಆರಂಭವಾಗುವ ಈ ಕವಿತೆಯಲ್ಲಿ ನಾಲ್ಕು ನಾಲ್ಕು ಸಾಲುಗಳ ಹದಿನಾಲ್ಕು ಪದ್ಯಗಳಿವೆ. The Poets Rhyme ಎಂಬುದು ಮೊದಲಿಟ್ಟ ಹೆಸರು; ನಂತರ ಕೊಟ್ಟಿದ್ದು The Noble Path. ಆ ದಿನಗಳಲ್ಲಿ ಎಳೆಯ ಕವಿಗೆ ಆಗಾಗ ದರ್ಶನವೀಯುತ್ತಿದ್ದ ಕೃಷ್ಣ ಈ ಕವಿತಯೆಯಲ್ಲೂ ಬಿಂಬಿತವಾಗಿದ್ದಾನೆ; Cowherd Boy ಎಂದು: ಗೋಪಾಲರೂಪಿಯಾಗಿ.
ಕೊನೆಯ ಪದ್ಯ:
Then let us hear the poetic words
And lead a life of joy;
And thro' the chimes of harbinger birds
Let's gain the Cowherd Boy.

ಕವಿತೆಯ ಬಗ್ಗೆ ಕವಿಯ ಮಾತು: ಕವನದಲ್ಲಿ ಜ್ಞಾನದ ಮಿತಿಯನ್ನೂ ಭಕ್ತಿಮಾರ್ಗದ ಹೆಚ್ಚಳವನ್ನೂ ಒತ್ತಿ ಹೇಳಿದೆ. ಬುದ್ದಿಯ ಗರ್ವ ನಮ್ಮನ್ನು ಅಂತಃಪರಕ್ಕೆ ಕೊಂಡಯ್ಯಲಾರದು; ಭಕ್ತಿಯ ನಮ್ರತೆಗೆ ಅದು ಸಾಧ್ಯ.

ಈ ಮೂರೂ ದಿನಗಳ ದಿನಚರಿಯಲ್ಲಿ ಗಮನಿಸಬೇಕಾದರ (ಮುಖ್ಯವಾಗಿ ಸಾಹಿತ್ಯ ಚರಿತ್ರಕಾರರು) ಅಂಶವೆಂದರೆ, ಅಮಲನ ಕಥೆಯ ಬರವಣಿಗೆ. ಸಣ್ಣದಾಗಿ ಶುರುವಾದ ಅಮಲನ ಕಥೆ ಹಸ್ತಪ್ರತಿಯಲ್ಲೆ ಬೆಳೆಯುತ್ತಾ ಹೋಗುತ್ತದೆ. ಈ ಪದ್ಯದ ಮಾರನೆಯ ದಿನವೂ ಏಳು ಪದ್ಯಗಳನ್ನು ಬರೆದು ಅಮಲನ ಕಥೆಗೆ ಸೇರಿಸಲಾಗಿದೆ. ಆಗ್ಗೆ ಕವಿಯ ಮನಸ್ಸು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಅಭಿವ್ಯಕ್ತಿಗೆ ತಹತಹಿಸುತ್ತಿತ್ತು ಎಂಬುದು ಗಮನಾರ್ಹ!  ಗಮನಿಸಬೇಕು; ಇದು ಜೇಮ್ಸ್ ಕಸಿನ್ಸ್ ಅವರನ್ನು ಭೇಟಿಯಾಗುವ ಮುನ್ನಿನ ಬೆಳವಣಿಗೆ. 
ನೆನಪಿನ ದೋಣಿಯಲ್ಲಿರುವ ಅಡಿಟಿಪ್ಪಣಿ: ಇದರಿಂದ ಒಂದು ವಿಷಯ ಗೊತ್ತಾಗುತ್ತದೆ. ನಾನು ಕನ್ನಡದಲ್ಲಿ ಬರೆಯತೊಡಗಿದುದು ಶ್ರೀಯುತ ಕಸಿನ್ಸ್ ಅವರನ್ನು ಕಂಡಮೇಲೆಯೆ ಎಂಬುದು ಪೂರ್ತಿ ನಿಜವಲ್ಲ. ಅಮಲನ ಕಥೆಯನ್ನು ಅದಕ್ಕೆ ಮುಂಚೆಯೆ 1924ರಲ್ಲಿ ಬರೆದಿದ್ದೇನೆ.


Monday, January 12, 2015

'ಕುಪ್ಪಳಿ'ಯಿಂದ 'ತೀರ್ಥಹಳ್ಳಿ'ಗೆ ಶಿಪ್ಟ್!


ಕುಪ್ಪಳಿ, ವಾಟಗಾರು, ದೇವಂಗಿ, ಬಳಗಟ್ಟೆ ಮೊದಲಾದ ಒಂದೆ ಮನೆಯ ಹಳ್ಳಿಗಳಿಂದ ಈ ಮೊದಲೆ, ಕ್ರೈಸ್ತ ಮಿಷನರಿಗಳ ಪ್ರಭಾವ ಪ್ರೋತ್ಸಾಹ ಸಹಾಯಗಳಿಗೆ ಸಿಲುಕಿ, ಕೆಲವು ಹುಡುಗರು ಮೈಸೂರು ಬೆಂಗಳೂರುಗಳಿಗೆ ಓದಲು ಹೋಗಿದ್ದರಷ್ಟೆ. ನನ್ನ ಲೋಕಪ್ರಜ್ಞೆ ತನ್ನ ಬುದ್ಧಿ ನೇತ್ರಗಳನ್ನು ತೆರೆದು ಸುತ್ತಣ ಘಟನೆಗಳನ್ನು ಗ್ರಹಿಸಲು ಕಲಿಯುವುದಕ್ಕೆ ಪೂರ್ವದಲ್ಲಿಯೆ, ಹಾಗೆ ಓದಲು ಹೋಗಿದ್ದು, ಮೈಸೂರಿನ ಹಾರ್ಡ್ವಿಕ್ ಕಾಲೇಜಿನಲ್ಲಿ ಓದುತ್ತಿದ್ದು, (ಹೆಸರಿಗೆ ಮಾತ್ರ ಕಾಲೇಜು, ವಾಸ್ತವವಾಗಿ ಸ್ಕೂಲು) ಹಾರ್ಡ್ವಿಕ್ ಹಾಸ್ಟೆಲ್ ಎಂಬ ಆ ಕಾಲೇಜಿಗೆ ಸೇರಿದ್ದ ಕ್ರಿಶ್ಚಿಯನ್ ಹಾಸ್ಟೆಲಿನಲ್ಲಿ ಬಿಟ್ಟಿ ಊಟ ವಸತಿ ಗಿಟ್ಟಿಸುತ್ತಿದ್ದು, ಓದು ಸಾಕಾಗಿ ಹಿಂತಿರುಗಿಯೂ ಬಿಟ್ಟಿದ್ದರು. ನನಗೆ ನೆನಪಿರುವಂತೆ ಅವರಲ್ಲಿ ಮೂವರೆಂದರೆ: (ಆಗ ನಾನು ಕರೆಯುತ್ತಿದ್ದಂತೆ) ವಾಟಗಾರು ವೆಂಕಟಣ್ಣಯ್ಯ, ಕುಪ್ಪಳಿ ಐಯಪ್ಪ ಚಿಕ್ಕಪ್ಪಯ್ಯ, ದೇವಂಗಿ ತಿಮ್ಮಯ್ಯ ಮಾವ. ಹಾಗೆ ತುಸು ಇಂಗ್ಲಿಷ್ ಯೆಸ್, ಪುಸ್, ಕೆಸ್ ಕಲಿತು ಬಂದ ತಮ್ಮ ಹುಡುಗರನ್ನು ನೋಡಿ ವಯಸ್ಸಾದ ಹಿರಿಯರಿಗೂ ಇಂಗ್ಲಿಷ್ ಕಲಿಯಲು ಮನಸ್ಸಾಗಿ, ಮೋಸಸ್ ಬರುವುದಕ್ಕಿಂತ ಮೊದಲೆ 'ಹುಚ್ಚು ವ್ಯಾಸರಾಯ'ರನ್ನು ನಮ್ಮ ಉಪ್ಪರಿಗೆ ಶಾಲೆಗೆ ನೇಮಿಸಿಕೊಂಡಿದ್ದರು. ನಮ್ಮ ಹಿರಿಯರಿಗೆ ಇಂಗ್ಲಿಷ್ ಅಕ್ಷರಗಳ ಪರಿಚಯ ಮಾತ್ರದಲ್ಲಿಯೆ ಅವರ ವಿದ್ಯಾಭ್ಯಾಸ ಪರಿಸಮಾಪ್ತವಾಯಿತೆಂದು ತೋರುತ್ತದೆ. ಅದನ್ನವರು ಉಪಯೋಗ ಮಾಡಿಕೊಂಡಿದ್ದನ್ನು ನಾನು ನೋಡಿದ್ದೇನೆ: ಮುಂದೆ, ನಮ್ಮ ದೊಡ್ಡ ಚಿಕ್ಕಪ್ಪಯ್ಯ -ಕುಪ್ಪಳಿ ರಾಮಣ್ಣಗೌಡರು) ಅಡಕೆ ವ್ಯಾಪಾರದ, ಸಾಹುಕಾರಿಕೆ ಕೈಕೊಂಡಾಗ, ಅಡಕೆ ತುಂಬಿದ್ದ ರವಾನೆ ಚೀಲಗಳ ಮೇಲೆ 'K.R.G.' ಎಂದು ದೊಡ್ಡದಾಗಿ ಕೆಂಪು ಮಸಿಯಲ್ಲಿ ವಿಳಾಸ ಹಾಕುತ್ತಿದ್ದರು., ತುಂಬ ಹೆಮ್ಮೆಯಿಂದ, ಇತರ ಹಳ್ಳಿಗರಿಗೆ ತಿಳಿಯದ ಇಂಗ್ಲಿಷ್ ತಮಗೊಬ್ಬರಿಗೇ ತಿಳಿಯುವುದು ಎಂಬ ಠೀವಿಯಲ್ಲಿ!

ಇಂಗ್ಲಿಷ್ ಕಲಿಯಬೇಕೆಂಬ ಆಕಾಂಕ್ಷೆಯ ಪರಿಣಾಮ ಅವರ ಮಟ್ಟಿಗೆ ಅಷ್ಟರಲ್ಲಿಯೆ ಪರ್ಯವಸಾನವಾಗಿದ್ದರೂ, ಮಕ್ಕಳಾಗಿದ್ದ ನಮ್ಮ ಬದುಕಿನ ಮೇಲೆ ಅವರವಕೈಗೂಡದ ಆಕಾಂಕ್ಷೆ ಮಹತ್ ಪ್ರಭಾವಕಾರಿಯಾಗಿ ಪರಿಣಮಿಸಿತು: ಮಕ್ಕಳನ್ನು ಓದುವುದಕ್ಕೆ ಹಾಕಬೇಕು ಎಂಬ ಪ್ರಜ್ಞೆ ಅವರಲ್ಲಿ ಉದಿಸುವಂತೆ ಮಾಡಿತ್ತು. ಅವರಿಗೆ ಬುದ್ಧಿ ಸ್ಪಷ್ಟವಾಗಿರದಿದ್ದರೂ, ಬ್ರಿಟಿಷರ ಆಳ್ವಿಕೆಯಲ್ಲಿ, ಮುಂದೆ, ಅವರ ಭಾಷೆಯಾಗಿದ್ದ ಇಂಗ್ಲಿಷನ್ನು ಕಲಿಯದಿದ್ದರೆ, ತಮ್ಮ ಮಕ್ಕಳು ಮುಂದುವರಿಯುವುದು ಸಾಧ್ಯವಿಲ್ಲ ಎಂಬ ಭಾವನೆ ಅವರ ಹೃದಯದಲ್ಲಿ ಮೂಡಿ ಮನವರಿಕೆಯಾಘಗಿತ್ತು. ತತ್‍ಫಲವಾಗಿ ನಾವು ತೀರ್ಥಹಳ್ಳಿಯ ಪೇಟೆಯ ಇಸ್ಕೂಲಿಗೆ ಸೇರುವಂತಾಯಿತು.

ತೀರ್ಥಹಳ್ಳಿ ನಮ್ಮ ಮನೆಗೆ -ಕುಪ್ಪಳಿಗೆ- ಒಂಬತ್ತು ಮೈಲಿ ದೂರದಲ್ಲಿದೆ, ಭೌಗೋಲಿಕವಾಗಿ. ಮಾನಸಿಕವಾಗಿ ಆಗ ಒಂಬೈನೂರು ಮೈಲಿಗಳಾಚೆ ಇತ್ತು; ಈಗ ಒಂಬತ್ತು ಫರ್ಲಾಂಗು ಸಮೀಪದಲ್ಲಿದೆ! ಆಗ ನಮಗೆ ತೀರ್ಥಹಳ್ಳಿ ಎಂದರೆ ಯಾವುದೋ ಒಂದು ಪುರಾಣದ ಪತ್ತನವಿದ್ದಂತೆ: ಕ್ರೂರ ಮೃಗಗಳಿಂದಿಡಿದ ಕಾಡು ಕಣಿವೆ ಮಲೆಗಳಲ್ಲಿ ಸಂದಿಗೊಂದಿಗಳಲ್ಲಿ, ತೂರಿ ಹೋಗುವ ಪ್ರಯಾಣ ದುರ್ಗಮವಾದ ದಾರಿಯಲ್ಲಿ ಹಾದು, ಹಳ್ಳಕೊಳ್ಳ ಹೊಳೆಗಳನ್ನು ದಾಟಿದರೆ ಅದು ಸಿಕ್ಕುತ್ತದಂತೆ! ಬೇಸಗೆಯಲ್ಲಾದರೆ ಕಲ್ಲುಸಾರದ ಮೇಲೆ ದಾಟಬೇಕಂತೆ! ಅಲ್ಲಿ ಎಳ್ಳಾಮಾಸೆಯ ಜಾತ್ರೆಯಲ್ಲಿ ಅಲ್ಲಿಯೆ ಅಂತೆ ಸ್ನಾನ ಮಾಡಿಸುವುದು! ಅಲ್ಲಿ ಹೊಳೆಯ ಮರಳಿನ ಮೇಲೆ ಬುತ್ತಿಕಲ್ಲು ಬಂಡೆ ಬಿದ್ದಿದೆಯಂತೆ! ನಾಲ್ಕಾರು ಆನೆಯ ಗಾತ್ರ! ಭೀಮ ಬುತ್ತಿ ಉಣ್ಣುವಾಗ ಅನ್ನದಲ್ಲಿ ಸಿಕ್ಕಿದ ಕಲ್ಲು ಹರಳಂತೆ ಅದು! ಇನ್ನು ಅವನು ತಿನ್ನುತ್ತಿದ್ದ ಅನ್ನದ ರಾಶಿ ಅದೆಷ್ಟು ದೊಡ್ಡದಿರಬೇಕು? ಮಳೆ ಬಿದ್ದು ಹೊಳೆ ಕಟ್ಟಿದ ಮೇಲೆ ದೋಣಿಎಯ ಮೇಲೆ ಕೂತೇ ದಾಟಬೇಕಂತೆ! ಹೊಳೆಗೆ ನೆರೆ ಬಂದು ನೋಡುವುದಕ್ಕೆ ಹೆದರಿಕೆಯಾಗುತ್ತದಂತೆ ಪ್ರವಾಹ! ಅದುವರೆಗೂ ಹಳ್ಳಿಯಲ್ಲಿಯೆ ಬದುಕು ಸಾಗಿಸಿದ್ದ ಹುಡುಗನ ಜೀವ-ಹುಡುಗರು ಕಣಿಯೊಡ್ಡಿ ಹಿಡಿದಾಗ ಅವರ ಕೈಯಲ್ಲಿ ಸಿಕ್ಕ ಹಕ್ಕಿಯೆ ಎದೆಯಂತೆ- ಹೊಡೆದುಕೊಳ್ಳುತ್ತಿತ್ತು!
ಅಂತೂ ಕಡೆಗೂ ನಾವೆಲ್ಲ -ಐದಾರು ಹುಡುಗರು- ಕಮಾನುಗಾಡಿಯಲ್ಲಿ ಕುಳಿತು ಹೊಳೆಯನ್ನು ದಾಟಿ, ತೀರ್ಥಹಳ್ಳಿಯ ಒಂದು ಬಾಡಿಗೆಯ ಮಳಿಗೆ ಕೋಣೆಗೆ ಓದು ಸಾಗಿಸಲು ಹೋದೆವು.

Saturday, January 10, 2015

ಮೋಸಸ್ ಮೇಷ್ಟರು ಬಿತ್ತಿದ ಪ್ರಾರ್ಥನೆಯ ಕಿಡಿ - 3

ಕ್ರಿಸ್ತನ ಬೋಧೆಯಿಂದ ನನ್ನ ಸಹಪಾಂಶು ಸಹಪಾಠಿಗಳಿಗೆ ಏನಾಯಿತೆಂಬುದನ್ನು ನಾನು ನಿಜವಾಗಿ ಹೇಳಲಾರೆ; ನನ್ನ ಮೇಲಾದ ಪರಿಣಾಮವನ್ನು ಮಾತ್ರ ಹೇಳಬಲ್ಲೆ.
ಅದುವರೆಗೆ ದೇವರು ಜೀವಲೋಕ ಪರಲೋಕ ಇವುಗಳ ವಿಚಾರವಾಗಿ ನಾನು ಪ್ರಜ್ಞಾಪೂರ್ವಕ ಬುದ್ಧಿಯಿಂದ ಆಲೋಚಿಸಿದ್ದನೆಂದು ತೋರುವುದಿಲ್ಲ. ಧೂಳಾಡುವ ಎಂಟೊಂಬತ್ತು ವರ್ಷದ ಹಳ್ಳಿ ಮಕ್ಕಳೊಡನೆ ಅಂಥಾದ್ದನ್ನೆಲ್ಲ ಮಾತಾಡುವರಾರು? ಅಂಥಾದ್ದನ್ನೆಲ್ಲ ಆಲೋಚಿಸಿ ಮಾತನಾಡಬಲ್ಲ ಹಿರಿಯರು ಕೂಡ ಯಾರಿದ್ದರು ಅಲ್ಲಿ? ಬಹುಶಃ ಅಂತಹ ಗುರುವಿಷಯ ಜಿಜ್ಞಾಸೆಗೆ ಶೂದ್ರರೆಂದೂ ಅರ್ಹರಲ್ಲ; ಅದೆಲ್ಲ ಬ್ರಾಹ್ಮಣರಿಗೆ ಸೇರಿದ್ದು; ಅವರ ಪಾದಪೂಜೆ ಮಾಡಿ, ಅವರು ಶಾಸ್ತ್ರ ಹೇಳಿದಂತೆ ಕೇಳಿಕೊಂಡಿದ್ದರೆ ಸಾಕು - ಎಂಬ ಸಂಪ್ರದಾಯದ ಶ್ರದ್ಧೆಯೂ ಆ ಮೌಢ್ಯಕ್ಕೆ ಪೋಷಕವೂ ರಕ್ಷಕವೂ ಆಗಿತ್ತೆಂದು ತೋರುತ್ತದೆ.
ಮನೆಯಲ್ಲಿ ದೇವರ ಪೂಜೆ ನಡೆಯುತ್ತಿತ್ತು; ಭೂತದ ಬನದಲ್ಲಿ ವರ್ಷಕ್ಕೊಮ್ಮೆ ಬಲಿ, ಹರಕೆ ಜರುಗುತ್ತಿತ್ತು; ದೆಯ್ಯ, ಜಕ್ಕಿಣಿ, ಕಲ್ಕುಟಿಗ ಮುಂತಾದ ದೆವ್ವ ಪಿಶಾಚಿಗಳ ಭೀಕರ ಕಥನಗಳೂ ಕಿವಿಯ ಮೇಲೆ ಬಿದ್ದು, ಕತ್ತಲೆಯಾದ ಮೇಲೆ ಮನೆ ತುಂಬ ಅವುಗಳ ಓಡಾಟದ ಹೊಂಚಿಕೆಯನ್ನು ಊಹಿಸಿ ಭಾವಿಸಿ ಬೆವರಿ ಬೇಗುದಿಗೊಳ್ಳುತ್ತಿದ್ದೆವು.
ಅದೃಶ್ಯದಲ್ಲಿ, ಅಪ್ರಾಕೃತದಲ್ಲಿ, ಅತೀಂದ್ರಿಯದಲ್ಲಿ ನಂಬಿಕೆ ನಮಗೆ ಹುಟ್ಟುಗುಣವಾಗಿತ್ತು. ಆದರೆ ಆ ಅತೀಂದ್ರಿಯ ವಸ್ತು, ಅದರ ಸ್ವರೂಪ, ಅದರಿಂದ ನಮ್ಮ ಮೇಲಾಗುವ ಪ್ರಭಾವ-ಇವುಗಳೆಲ್ಲ ಬೀಭತ್ಸ ಮತ್ತು ಭಯಾನಕ ವಲಯಗಳದ್ದೇ ಆಗಿತ್ತು. ದೇವರೂ ಕೂಡ ಬೃಹದಾಕಾರಗೊಂಡ, ನಿರಂಕುಶಾಧಿಕಾರಿ ದೆವ್ವವೇ ಆಗಿದ್ದ!
ದೇವರು, ಜೀವ, ಜಗತ್ತು, ಪಾಪ, ಪುಣ್ಯ, ಕರ್ಮ ಮುಂತಾದ ವಿಷಯಗಳನ್ನು ಕುರಿತು ನಮ್ಮಂತಹ ಮಕ್ಕಳೊಡನೆ ಯಾರು ತಾನೆ ಪ್ರಸ್ತಾಪಿಸುತ್ತಾರೆ? ಅದನ್ನು ತಿಳಿದುಕೊಳ್ಳುವ ಸಾಮರ್ಥ್ಯ, ಇಚ್ಛೆ ಇರುತ್ತದೆಯೇ ಮಕ್ಕಳಿಗೆ? ಅಂತಹ 'ಗುರು' ವಿಷಯ 'ಲಘು'ಗಳಿಗೇಕೆ? ಆದರೆ ಕ್ರೈಸ್ತಮತ ಪ್ರಚಾರಕರ ಭೋಧೆಗೆ ಒಳಗಾಗಿ ಕ್ರಿಸ್ತಮತವನ್ನಪ್ಪಿದ ಯುವಕ ಮೋಸಸ್ ಮೇಷ್ಟರಿಗೆ ನಾವು ಅಷ್ಟು 'ಲಘು'ಗಳಾಗಿ ತೋರಲಿಲ್ಲ. ಅವರು ನಮಗೆ ಕನ್ನಡ ಇಂಗ್ಲಿಷ್ ಕಲಿಸುವುದರ ಜೊತೆಗೆ ಯೇಸುಕ್ರಿಸ್ತನ ಕಥೆಯನ್ನು ಹೇಳಿದರು. ಮತಪ್ರಚಾರಕ ಉದ್ದೇಶದಿಂದಿರಬಹುದು. ಕನ್ನಡದಲ್ಲಿ ಅಚ್ಚಾಗಿದ್ದ 'ಮಾರ್ಕನ ಸುವಾರ್ತೆ' ಎಂಬ ಕಿರುಹೊತ್ತಿಗೆಯನ್ನು ಬಿಟ್ಟಿಯಾಗಿ, ನಮನಮಗೇ ಕೊಟ್ಟರು! ನಮ್ಮ ಮೆದುಳಿನ ವಿಚಾರದಲ್ಲಿ ಅದುವರೆಗೆ ಯಾರೂ ತೋರಿಸದಿದ್ದ ಗೌರವವನ್ನು ಹೊಣೆಗಾರಿಕೆಯನ್ನು ಹೊರಿಸಿ, ಆ ಪುಟ್ಟ, ಮುದ್ದಾಗಿ ಅಚ್ಚು ಮಾಡಿದ್ದ, ಮಾರ್ಕನ ಸುವಾರ್ತೆಯನ್ನು ನಮನಮಗೇ ಕೊಟ್ಟುಬಿಟ್ಟರು! ಒಬ್ಬೊಬ್ಬರಿಗೆ ಒಂದೊಂದು! ನನ್ನ ಬದುಕಿಗೆ ಬಂದು ಹೊಸಬಾಗಿಲು ತೆರೆದಂತಾಯ್ತು. ಒಂದು ವಿಸ್ಮಯಕಾರಕ ನೂತನ ಪ್ರಪಂಚಕ್ಕೆ ಪ್ರವೇಶಿಸಿದಂತಾಯ್ತು ನನ್ನ ಪ್ರಜ್ಞೆ. ಯಾವುದು ಎಷ್ಟರಮಟ್ಟಿಗೆ ಬುದ್ಧಿ ಸ್ಪಷ್ಟವಾಗಿತ್ತೋ ನಾನೀಗ ಹೇಳಲಾರೆ. ಆದರೆ ಪ್ರಾರ್ಥನೆ ಮಾಡಿದರೆ ದೇವರು ಓಕೊಳ್ಳುತ್ತಾನೆ; ಇಷ್ಟಗಳನ್ನು ಸಲ್ಲಿಸುತ್ತಾನೆ; ಯೇಸುಸ್ವಾಮಿ ಗುಡ್ಡದ ನೆತ್ತಿಗೆ ಹೋಗಿ ಪ್ರಾರ್ಥನೆ ಮಾಡಿದನು. ಆ ಪ್ರಾರ್ಥನೆ ಮತ್ತು ಶ್ರದ್ಧೆ ಎರಡೂ ಸೇರಿದರೆ 'ಪವಾಡ'ಗಳಾಗುತ್ತವೆ; ರೋಗಿ ಗುಣ ಹೊಂದುತ್ತಾನೆ; ಕುರುಡ ಕಾಣುತ್ತಾನೆ; ಭಗವಂತನು ಭೂಮಿಗಿಳಿದು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಇತ್ಯಾದಿಗಳನ್ನು ಕೇಳಿ ನನ್ನ ಚೇತನ ಭಕ್ತಿದೀಪ್ತವಾಯಿತು. ಮೇಲಿನ ತತ್ವಗಳಿಗೆ ಹಿಂದೂ ಪುರಾಣ ಕಥೆಗಳಲ್ಲಿ ಬರಗಾಲವೇನಿಲ್ಲ. ಆದರೆ ಅವುಗಳನ್ನು ಕುರಿತು ಬುದ್ಧಿ ಗೋಚರವಾಗುವಂತೆ ನಮ್ಮೊಡನೆ ಯಾರೂ ಜಿಜ್ಞಾಸೆ ಮಾಡಿರಲಿಲ್ಲ. ಅಲ್ಲದೆ ಯೇಸು ಸ್ವಾಮಿಯಂತೆಯೇ ಐತಿಹಾಸಿಕವಾದ ಬುದ್ಧಾದಿ ವಿಭೂತಿಪುರುಷರ ಜೀವನ ಕಥೆಗಳನ್ನು ಹೇಳಿ, ಹೃದಯಸ್ಪರ್ಶಿಯಾದ ಆ ತತ್ವಗಳು ಬುದ್ಧಿಯಲ್ಲಿಯೂ ಬೆಳಗುವಂತೆ ನಮ್ಮವರು ಯಾರೂ ತಿಳಿಸುವ ಗೋಜಿಗೆ ಹೋಗಿರಲಿಲ್ಲ.
ಸರಿ, ಯೇಸುಸ್ವಾಮಿಯಂತೆ ನಾವೂ ಗುಡ್ಡದ ನೆತ್ತಿಗೆ ಹೋಗಿ ಪ್ರಾರ್ಥನೆ ಮಾಡಿದರೆ ನಮಗೂ...? ಏನು? ಏನಾಗುತ್ತದೆ? ಏಕೆ? ತಿಳಿಯದು! - ಅಂತೂ ಹಾಗೆ ಪ್ರಾರ್ಥನೆ ಮಾಡಬೇಕು ಎಂಬ ಪ್ರೇರಣೆ ಉತ್ಕಟವಾಯಿತು. ನನ್ನ ಜೊತೆ 'ಐಗಳ ಶಾಲೆ'ಯಲ್ಲಿ ಓದುವುದಕ್ಕಿದ್ದ, (ಕೆಲವರು ನನಗಿಂತಲೂ ವಯಸ್ಸಾದವರು), ಇತರ ಬಾಲಕರಿಗೆ ಅದನ್ನೆಲ್ಲ ಹೇಳಿ ಒಪ್ಪಿಸಿದೆ. ಎಲ್ಲರೂ ಸಂಜೆಯ ಹೊತ್ತು ನಮ್ಮ ಮನೆಯ ಹಿಂದಿರುವ ಗುಡ್ಡಕ್ಕೆ (ಎಷ್ಟೋ ವರ್ಷಗಳ ಆನಂತರ ಅದಕ್ಕೆ 'ಕವಿಶೈಲ' ಎಂದು ನಾಮಕರಣ ಮಾಡಿದವನು ನಾನೆ!) ಏರಿದೆವು.
ಸೂರ್ಯ ಇನ್ನೂ ಮುಳುಗಿರಲಿಲ್ಲ. ಸಾಯಂ ಸಮಯದ ಗೋಧೂಳಿಯ ಹೊಂಗಾಂತಿ ಪಿಪಾಸೆಗೆ ಮಾದಕೋದ್ದೀಪಕವಾಗಿತ್ತು. ಕಲ್ಲು ಬಂಡೆಗಳೇ, ಅದರಲ್ಲಿಯೂ ಹಾಸುಗಲ್ಲುಗಳೇ ಹೆಚ್ಚಾಗಿರುವ ಆ ಗುಡ್ಡದ ಪಶ್ಚಿಮ ಭಾಗದಲ್ಲಿ ಒಂದೆಡೆ ನಾವೆಲ್ಲ ಪ್ರಾರ್ಥನೆ ಮಾಡುವುದಕ್ಕೆ ಯೋಗ್ಯವಾದ ಭಾಗವನ್ನು ಆರಿಸಿಕೊಂಡೆವು. ಏಕೊ ಏನೊ ತಿಳಿಯದು: ಕಣೆ ಬಿದಿರು ಗಳುಗಳನ್ನು ಕಡಿದು ಸುತ್ತಲೂ, ಒಡ್ಡು ಹಾಕಿ, ಪ್ರಾರ್ಥನಾ ವಲಯವನ್ನು ಪ್ರತ್ಯೇಕವಾಗಿ ಗುರುತಿಸುವಂತೆ ಮಾಡಿಕೊಂಡೆವು. ದನ ಗಿನ ನುಗ್ಗಿ ಸೆಗಣಿ ಹಾಕಬಾರದು ಎಂದಿರಬಹುದು. ಎಲ್ಲರೂ ಮೊಳಕಾಲು ಮಂಡಿಯೂರಿ, ಕೈಮುಗಿದುಕೊಂಡು ಕ್ರೈಸ್ತರು ಕೂರುವ ಭಂಗಿಯಲ್ಲಿ ಕುಳಿತು ಬಾಯಿಪಾಠ ಮಾಡಿದ ಪ್ರಾರ್ಥನೆ ಮಾಡಿದೆವು:
"ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಲಿ. 
ನಿನ್ನ ರಾಜ್ಯವು ಬರಲಿ. 
ಪರಲೋಕದಲ್ಲಿ ನೆರವೇರುವಂತೆ ನಿನ್ನ ಇಚ್ಛೆ ಭೂಲೋಕದಲ್ಲಿಯೂ ನೆರವೇರಲಿ.
ನಮ್ಮ ದಿನದಿನದ ಆಹಾರವನ್ನು ಈ ದಿನವೂ ದಯಪಾಲಿಸು.
ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನೂ ನೀನು ಕ್ಷಮಿಸು.
ನಾವು ಪಾಪವಶರಾಗದಂತೆ ನಮ್ಮನ್ನು ಪಾಪಪುರುಷನಿಂದ ಪಾರು ಮಾಡು."
ಪ್ರಾರ್ಥನೆ ನಮಗೆ ತಿಳಿಯುವ ಭಾಷೆಯಲ್ಲಿತ್ತು. ತಿಳಿಯುವ ಧಾಟಿಯಲ್ಲಿತ್ತು. ಸಂಸ್ಕೃತದಲ್ಲಿರುವಂತೆ ಪ್ರೌಢಕಾವ್ಯರೀತಿಯಲ್ಲಿಯೇ ಅಗ್ರಾಹ್ಯವಾಗಿರಲಿಲ್ಲ. ಏನೋ ಒಂದು ಮಹತ್ತಾದುದನ್ನು ಸಾಧಿಸಿದ ಹಿಗ್ಗಿನಿಂದ ನಾವೆಲ್ಲ ಕಪ್ಪಾಗುತ್ತಿದ್ದ ಬೈಗಿನಲ್ಲಿ ಗುಡ್ಡವಿಳಿದೆವು. ಎದುರು ಗುಡ್ಡದ ದಟ್ಟವಾದ ಕಡು ಮರಮರದೆಲೆಯ ಮಸಿ ಮುದ್ದೆಯ ಗೋಡೆಯಾಗಿತ್ತು.

Friday, January 9, 2015

ಮೋಸಸ್ ಮೇಷ್ಟರು ಬಿತ್ತಿದ ಪ್ರಾರ್ಥನೆಯ ಕಿಡಿ - 2

ಮೋಸಸ್ ಅವರ ಆಗಮನದ ತರುವಾಯ 'ಐಗಳು' ಎಂಬ ನಾಮ ಸಂಪೂರ್ಣವಾಗಿ ಅಳಿಸಿಹೋಗಿ, 'ಮೇಷ್ಟರು' ಎಂಬ ಬಿರುದು ಪಟ್ಟಕ್ಕೇರಿತು ಮತ್ತು ಪಾಶ್ಚಾತ್ಯ ಪ್ರಭಾವದ ಆಧುನಿಕ ಪ್ರಪಂಚಕ್ಕೆ ಪ್ರವೇಶಿಸಿತು, ನಮ್ಮ ಉಪ್ಪರಿಗೆಯ ಶಾಲೆ.
ಮಕ್ಕಳೆಲ್ಲ ಅವರ ವ್ಯಕ್ತಿತ್ವದ ಪ್ರಭಾವಕ್ಕೆ ಬಹು ಸುಲಭವಾಗಿಯೆ ಒಳಗಾದೆವು. ಮೊದಲನೆಯದಾಗಿ, ಅವರ ವೇಷಭೂಷಣ ನಮ್ಮ ಹಳ್ಳಿಗರ ರೀತಿಯಿಂದ ಪ್ರತ್ಯೇಕವಾಗಿದ್ದು, ಪಟ್ಟಣದ ನಾಗರಿಕತೆಯ ಶೋಭೆಯಿಂದ ನಮ್ಮ ಶ್ಲಾಘನೆಗೆ ಒಳಗಾಗಿ ಆಕರ್ಷಣೀಯವಾಗಿತ್ತು. ಅವರು ಹಾಕಿಕೊಳ್ಳುತ್ತಿದ್ದ ಬಟ್ಟೆಗಳು ಅದೆಷ್ಟು ಬೆಳ್ಳಗೆ? ಅಷ್ಟು ಬೆಳ್ಳಗಿರುವ ಬಟ್ಟೆಗಳನ್ನು ನಾವು ಸಾಮಾನ್ಯವಾಗಿ ನೋಡಿಯೆ ಇರಲಿಲ್ಲ. ನಮ್ಮ ಅಪ್ಪಯ್ಯ ಚಿಕ್ಕಪ್ಪಯ್ಯ ಅಜ್ಜಯ್ಯ ಅವರು ತೀರ್ಥಹಳ್ಳಿಯ ಮಾರ್ವಾಡಿ ಅಂಗಡಿಯಿಂದ ಕೊಂಡು ತರುತ್ತಿದ್ದ ಪಂಚೆಗಳು, ತಂದಾಗ ಮಾತ್ರ ತಕ್ಕಮಟ್ಟಿಗೆ ಬೆಳ್ಳಗಿದ್ದು, ನಮ್ಮ ಕಣ್ಮೆಚ್ಚಿಗೆ ಪಡೆಯುತ್ತಿದ್ದುವು. ಆದರೆ ಉಪಯೋಗಿಸಲು ತೊಡಗಿದ ಮೇಲೆ ಅವು ಎಂದಿಗೂ ಆ ಧವಳಿಮತೆಯನ್ನು ಮತ್ತೆ ಪಡೆಯುತ್ತಿರಲಿಲ್ಲ. ಒಗೆ ಕಂಡಂತೆಲ್ಲ ಅವುಗಳ ಬಣ್ಣಗೇಡು ಮುಂದುವರಿಯುತ್ತಿತ್ತು! ಸಾಬೂನು, ಸೋಪು ಈ ಮಾತುಗಳೂ ಪರಕೀಯವೂ ಅಪರಿಚಿತವೂ ಆಗಿದ್ದ ಆ ಕಾಲದಲ್ಲಿ ಚಬಕಾರ, ಚೌಳು, ಸೀಗೆ, ಅಂಟುವಾಳಕಾಯಿ ಇವುಗಳು ಬಟ್ಟೆಗಳಿಗೆ ಅಚ್ಚ ಬಿಳಿಯ ಸುಣ್ಣದ ಶ್ವೇತತ್ವವನ್ನು ದಯಪಾಲಿಸಲು ಸಮರ್ಥವಾಗುತ್ತಿರಲಿಲ್ಲ. ಆದ್ದರಿಂದಲೆ ಎಂದು ತೋರುತ್ತದೆ, ಬಿಳಿ ಬಟ್ಟೆಯ ವಿಚಾರವಾಗಿ ನಮ್ಮವರಿಗೆ ಒಂದು ತಿರಸ್ಕಾರ ಭಾವನೆ ಹೃದ್ಗತವಾಗಿ ಬಿಟ್ಟಿತು! ಎಟುಕದ ದ್ರಾಕ್ಷಿ ಹುಳಿ ಎಂಬಂತೆ!
ಅವರು ಬೆಳ್ಳನೆಯ ಕಚ್ಚೆಯುಟ್ಟು, ಹೊಸ ನಮೂನೆಯ ಷರ್ಟು ಹಾಕಿ, ಮೇಲೆ ಕರಿಯ ಅಥವಾ ಗೀರುಗೀರಿನ ಅಥವಾ ಇನ್ನಾವುದೊ ಕಣ್ಣು ಸೆಳೆಯುವ ಬಣ್ಣದ ಕೋಟು ಹಾಕಿಕೊಳ್ಳುತ್ತಿದ್ದರು. ಎಲ್ಲಕ್ಕಿಂತಯಲೂ ಕಿರೀಟಪ್ರಾಯವಾಗಿದ್ದುದೆಂದರೆ ಅವರು ಬಿಟ್ಟಿದ್ದ ಕ್ರಾಪು! ಅವರು ಎಣ್ಣೆ ಹಾಕಿ ಬಾಚಿ ಬೈತಲೆ ತೆಗೆದರೆಂದರೆ, ಮುಂದಲೆ ಚೌರ ಮಾಡಿಸಿಕೊಂಡು ಹಿಂದಲೆ ಜುಟ್ಟು ಬಿಟ್ಟಿದ್ದ ನಮ್ಮ ತಲೆಗಳು ನಾಚಿ ಮೂಲೆ ಸೇರುವಂತಾಗುತ್ತಿತ್ತು. ಅವರ ಕ್ರಾಫನ್ನೇ ನೋಡಿ ನೋಡಿ ಕರುಬಿ, ನಮ್ಮ ತಲೆಗಳನ್ನೂ ಏತಕ್ಕೆ ಹೀಗೆ ಚೌರ ಮಾಡಿಸಿಕೊಳ್ಳಬಾರದು ಎಂಬ ಮತೀಯ ಕ್ರಾಂತಿಭಾವವೋ ಎಂಬಂತಹ, ಒಂದು ಭಯಂಕರ ಮನೋಧರ್ಮ ಇಣುಕುತ್ತಿತ್ತು.
ಆ ಬಾಹ್ಯದ ಅನುಕರಣದ ಆಶೆ ನಮ್ಮಲ್ಲಿ ಆಶಾಮಾತ್ರವಾಗಿಯೆ ಉಳಿಯಬೇಕಾಗಿತ್ತು. ಅದು ಕೈಗೂಡುವ ಸಂಭವ ಒಂದಿನಿತೂ ಇರಲಿಲ್ಲ. ನಮ್ಮ ತಲೆಯ ಮೇಲಣ ಕೂದಲು ನಮ್ಮದೇ ಆಗಿದ್ದರೂ ಅದರ ಹಕ್ಕೆಲ್ಲ ನಮ್ಮ ತಂದೆ ತಾಯಿಗಳಿಗೆ ಹಿರಿಯರಿಗೆ ಸೇರಿದ್ದಾಗಿತ್ತು. ನಮ್ಮ ತಲೆಯ ಮೇಲೆ ಆ ಕೂದಲು ಹೇಗಿರಬೇಕು? ಹೇಗಿರಬಾರದು? ಎಂಬುದರ ಮೇಲಣ ಅಧಿಕಾರ ನಮಗೆ ಸ್ವಲ್ಪವೂ ಇರಲಿಲ್ಲ. ನಮ್ಮ ಆ ತಲೆಯ ಕೂದಲು ನಮ್ಮ ಮಟ್ಟಿಗೆ ಬರಿಯ ಐಹಿಕದ ವಸ್ತುವಾಗಿದ್ದರೂ, ನಮ್ಮ ಹಿರಿಯರಿಗೆ ಅವರ ಆಮುಷ್ಮಿಕ ಕ್ಷೇಮಕ್ಕೆ ಕೊಂಡೊಯ್ಯುವ ಸೂತ್ರವಾಗಿತ್ತು. ಜುಟ್ಟನ್ನು ಕತ್ತರಿಸಿ ಮಂಡೆ ಬೋಳಿಸುವುದು ಅಪ್ಪ ಅಮ್ಮ ಸತ್ತದ್ದಕ್ಕೆ ಸಂಕೇತವಾಗುತ್ತಿತ್ತು. ಅಪ್ಪ ಅಮ್ಮ ಬದುಕಿರುವವರು ಯಾರಾದರೂ ತಲೆ ಬೋಳಿಸುವುದುಂಟೆ? ಅಂತಹ ಪಾಷಂಡಿಕರ್ಮಕ್ಕೆ ನಮ್ಮನ್ನೆಂದೂ ಬಿಡುತ್ತಿರಲಿಲ್ಲ. ಅಲ್ಲದೆ ಹಾಗೆ ಮಾಡುವವರು ಜಾತಿಭ್ರಷ್ಟರಾದಂತೆಯೆ ಅಲ್ಲವೆ? ಅದು ಜಾತಿ ಕೆಟ್ಟ ಕಿಲಸ್ತರಿಗೆ ಮತ್ತು ಮುಸಲ್ಮಾನರಿಗೆ ಮಾತ್ರವೆ ಯೋಗ್ಯ: ಹಿಂದೂಗಳಿಗೆ ಶಿಖೆಯೇ ಸ್ವರ್ಗಕ್ಕೊಯ್ಯುವ ಏಣಿ! ಮತ್ತು ಧರ್ಮಧ್ವಜ!
ನಮ್ಮ ಬುರುಡೆಯ ಮೇಲಣ ವಸ್ತುವಿನ ವಿಚಾರದಲ್ಲಿ ನಮ್ಮ ಹಿರಿಯರಿಗೆ ಇರುತ್ತಿದ್ದ ಆಸಕ್ತಿ ನಮ್ಮ ಮಂಡೆಯ ಒಳಗಿನ ವಸ್ತುವಿನಲ್ಲಿಯೂ ಇರುತ್ತಿದ್ದರೆ ಮುಂದೆ ನಡೆದುದು ನಡೆಯುತ್ತಿರಲಿಲ್ಲವೋ ಏನೊ? ಆದರೆ ಮೆದುಳಿನ ವ್ಯಾಪಾರ ಆಲೋಚನಾ ರೂಪವಾದ್ದರಿಂದ ಆ ಅಗೋಚರದ ವಿಷಯದ ಕಡೆಗೆ ಅವರ ಲಕ್ಷ ಅಷ್ಟಾಗಿ ಬೀಳಲಿಲ್ಲ. ಆ ಕಾರಣವಾಗಿಯೆ ನಮಗೆ ಅಲ್ಲಿ ತಕ್ಕಮಟ್ಟಿನ ಸ್ವಾತಂತ್ರಕ್ಕೆ ಅವಕಾಶ ಒದಗಿತು. ಬಾಹ್ಯಕವಾಗಿ ನಡೆಯಲಾರದಿದ್ದ ಕ್ರಾಂತಿ ದಮನಗೊಂಡು ಆಂತರಿಕವಾಗಿ ತಲೆಯೆತ್ತಿತ್ತು. ನಮ್ಮ ಹೊಸ ಉಪಾಧ್ಯಾಯರ ಕ್ರೈಸ್ತಮತ ಬೋಧೆಗೆ ನಮ್ಮ ಮನಸ್ಸಿನ ಮೊಗ್ಗು ತನ್ನ ಬುದ್ಧಿಯ ಬಾಗಿಲು ತೆರೆದು ಮೆಲ್ಲಮೆಲ್ಲನೆ ಅರಳಿತು
.............. ಮುಂದುವರೆಯುವುದು

Thursday, January 8, 2015

ಮೋಸಸ್ ಮೇಷ್ಟರು ಬಿತ್ತಿದ ಪ್ರಾರ್ಥನೆಯ ಕಿಡಿ - 1

ನನ್ನ ಅಕ್ಷರಾಭ್ಯಾಸಕ್ಕೆ ಅಗೆಯಾದುದು ಹಿಂದೆ ವರ್ಣಿಸಿದಂತಹ ಯಾವುದೊ ಒಂದು ನವರಾತ್ರಿಯ ಸರಸ್ವತೀ ಪೂಜೆಯ ದಿನದಂದು ಎಂದು ತೋರುತ್ತದೆ. ಮಿಂದು ಮಡಿಯಾದ ಮೇಲೆ ಉಡಿದಾರ, ಲಂಗೋಟಿ, ಅಡ್ಡಪಂಚೆಡಗಳ ದೀಕ್ಷೆತೊಟ್ಟು, ಮರಳ ಮೇಲೆ ಅ ಆ ಬರೆದು, ನಡುಬೆರಳ ಮೇಲೆ ತೋರುಬೆರಳನ್ನು ಇಡುವುದು ಹೇಗೆ ಎಂಬುದನ್ನು ತೋರಿಸಿ, ಕಲಿಸಿ, ಅಕ್ಷರ ತಿದ್ದಲು ಹೇಳಿದ್ದರು. ಅದುವರೆಗೆ ಉಡಿದಾರ ಹಾಕುವುದಾಗಲಿ, ಲಂಗೋಟಿ ಕಟ್ಟುವುದಾಗಲಿ, ಅಡ್ಡಪಂಚೆ ಮುಂಡುಸುತ್ತಿ ಉಡುವುದಾಗಲಿ ನನ್ನ ಇಷ್ಟ ಮತ್ತು ಅನುಕೂಲದ ವಿಷಯವಾಗಿದ್ದುದು ಅಂದಿನಿಂದ ಸಾಧಿಸಲೇಬೇಕಾದ 'ನಿಷ್ಠೆ'ಯ ಕರ್ತವ್ಯವಾಗಿಬಿಟ್ಟಿತು!
ಆಗತಾನೆ ಸಮಗ್ರ ಭರತಖಂಡದಲ್ಲಿ ಸುಸ್ಥಾಪಿತವಾದ ಬ್ರಿಟಿಷ್ ಸಾಮ್ರಾಜ್ಯ ಚೆನ್ನಾಗಿ ಬೇರು ಬಿಡಲು ತೊಡಗಿದ್ದ ಕಾಲ. ಆಡಳಿತ ವ್ಯವಸ್ಥೆಯನ್ನು ಕ್ರಮಗೊಳಿಸಿದ ಆಳರಸರು ಅದನ್ನು ಸುಗಮವಾಗಿ ತಮ್ಮ ಇಚ್ಛೆಯಂತೆ ನಡೆಸಿಕೊಂಡು ಹೋಗಲು ನಮ್ಮವರನ್ನೆ ದುಡಿವಾಳುಗಳನ್ನಾಗಿ ಮಾಡಲು ನಿರ್ಧರಿಸಿ, ಅದಕ್ಕೆ ಅನುಕೂಲವೂ ಅನುರೂಪವೂ ಆದ ವಿದ್ಯಾಭ್ಯಾಸ ಪದ್ಧತಿಯನ್ನು ಜಾರಿಗೆ ತಂದರು. ಅದರಲ್ಲಿ ಅತ್ಯಂತ ಮುಖ್ಯವಾದದ್ದು ಮತ್ತು ಬಹುಕಾಲ ಪರಿಣಾಮಕಾರಿಯಾದದ್ದು - ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಇಂಗ್ಲಿಷ್ ಭಾಷೆಯನ್ನೆ ಶಿಕ್ಷಣ ಮಾಧ್ಯಮವನ್ನಾಗಿ ಅಂಗೀಕರಿಸಿದ್ದು.
ನನಗೆ ಬುದ್ಧಿ ತಿಳಿಯುವ ಹೊತ್ತಿಗಾಗಲೆ ನಮ್ಮ ಮನೆ ಕುಪ್ಪಳಿಯಿಂದಲೂ ವಾಟಗಾರು ಮನೆಯಿಂದಲೂ ದೇವಂಗಿ ಮನೆಯಿಂದಲೂ ಹೊಸ ವಿಧ್ಯಾಭ್ಯಾಸಕ್ಕಾಗಿ ತರುಣರು ಹೊರಗಣ ದೂರದೂರುಗಳಿಗೆ ಹೋಗತೊಡಗಿದ್ದರು; ಮತ್ತು ಹೋಗಿ, ವಿದ್ಯಾಭ್ಯಾಸವನ್ನು ನಿಲ್ಲಿಸಿ, ಹಿಂತಿರುತ್ತಯೂ ಇದ್ದರು.
ಆ ಮಲೆನಾಡಿನ ಕಾಡಿನ ಮೂಲೆಯ ಕೊಂಪೆಯಿಂದ ಹುಡುಗರು ಮೈಸೂರಿಗೆ ಆಗಿನ ಕಾಲದಲ್ಲಿ ವಿದ್ಯಾರ್ಜನೆಗೆ ಹೋಗಿದ್ದರೆಂದರೆ ಅಚ್ಚರಿಯಾಗುತ್ತದೆ. ಆದರೆ ಅವರು ಹಾಗೆ ದೂರ ಹೋಗಲು ಸಾಧ್ಯವಾಗಿದ್ದುದೂ, ಹಾಗೆ ಹೋಗುವುದಕ್ಕೆ ಪ್ರಚೋದನೆ ಪ್ರೋತ್ಸಾಹ ಸಹಾಯಗಳು ದೊರಕಿದುದೂ ಕ್ರೈಸ್ತ ಮಿಷನರಿಗಳಿಂದ ಎಂಬುದನ್ನು ನೆನೆದರೆ ನಮ್ಮ ಆಶ್ಚರ್ಯ ವಿಷಾದಾಂಚಿತವೂ ಆಗುವುದರಲ್ಲಿ ಸಂದೇಹವಿಲ್ಲ.
ಅದುವರೆಗೆ ನಮ್ಮ ಉಪ್ಪರಿಗೆಯ ಐಗಳ ಶಾಲೆಗೆ ಕಲಿಸಲು ಬರುತ್ತಿದ್ದವರು ಹೆಚ್ಚಾಗಿ ಕನ್ನಡ ಜಿಲ್ಲೆಯವರೆ. ಅವರ ವಿದ್ಯೆಯ ಮಟ್ಟ ಇರುತ್ತಿದ್ದುದೂ ಅಷ್ಟರಲ್ಲಿಯೆ. ಹುಡುಗರಿಗೆ ಅಕ್ಷರ ಕಲಿಸಿ, ಕನ್ನಡದಲ್ಲಿ ತುಸು ಬರೆಯಲೂ ಓದಲೂ ಹೇಳಿಕೊಟ್ಟರೆ ಮುಗಿಯಿತು. ಆದರೆ ಇನ್ನು ಮುಂದೆ ಕನ್ನಡ ಸಾಕೆ? ಇಂಗ್ಲಿಷಿನವರ ಆಳ್ವಿಕೆಯಲ್ಲಿ ಇಂಗ್ಲಿಷ್ ಕಲಿಯದಿದ್ದರೆ ಆದೀತೆ? ಆದರೆ ಇಂಗ್ಲಿಷ್ ಹೇಳಿಕೊಡುವವರಾರು? ದೊರೆಗಳ ಭಾಷೆಯನ್ನು?
ಆ ಹಳ್ಳಿಗರು ಇನ್ನೆಷ್ಟು ವರ್ಷಗಳೆ ಕಾಯಬೇಕಿತ್ತೊ ಇಂಗ್ಲಿಷ್ ಕಲಿಯಲು? ಆದರೆ ಮತಪ್ರಚಾರ ಮತ್ತು ಮತಾಂತರ ಉದ್ದೇಶವೆ ಪ್ರಧಾನವಾಗಿದ್ದ ಕ್ರೈಸ್ತ ಮಿಷನರಿಗಳು ಬ್ರಿಟಿಷ್ ಸಾಮ್ರಾಜ್ಯದ ಮತ್ತು ಕ್ರೈಸ್ತಧರ್ಮದ ಮುಂಚೂಣಿಯ ದಳಗಳಾಗಿ ಸಹ್ಯಾದ್ರಿಯ ಕಾಡುಹಳ್ಳಿಗಳಿಗೂ ಕಾಲಿಟ್ಟರು. ಸ್ಕೂಲು ಆಸ್ಪತ್ರೆಗಳನ್ನು ತೆರೆದರು; ಸಾಧ್ಯವಾದಷ್ಟು ಜನರನ್ನು ತಮ್ಮ ಮತಕ್ಕೆ ಸೇರಿಸಿಕೊಂಡರು, ಕನ್ನಡ ಭಾಷೆಗೆ ಪರಿವರ್ತಿತವಾಗಿದ್ದ ಬೈಬಲ್ಲನ್ನೂ ಮ್ಯಾಥ್ಯೂ ಮಾರ್ಕ್ ಲ್ಯಾಕ್ ಜಾನ್ ಮೊದಲಾದ ಕ್ರಿಸ್ತಶಿಷ್ಯ ಸಂತರ ಸುವಾರ್ತೆಗಳನ್ನು ಓದಲು ಹಂಚಿದರು. 'ಹಿಂದೂಗಳಾಗಿ ಇದ್ದೂ ಬ್ರಾಹ್ಮಣರಿಂದ ಶೂದ್ರರೆಂದು ತಿರಸ್ಕೃತರಾಗಿ ಮೌಢ್ಯ ಅಜ್ಞಾನಗಳ ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸುತ್ತೇವೆ', 'ನಿಮ್ಮನ್ನು ಬ್ರಾಹ್ಮಣರ ದಾಸ್ಯದಿಂದ ಪಾರು ಮಾಡುತ್ತೇವೆ' ಎಂದು ಮನದಟ್ಟುವಂತೆ ಬೋಧಿಸಿದರು. ಶೂದ್ರರ ಮಕ್ಕಳಿಗೆ ನವೀನ ವಿದ್ಯಾಭ್ಯಾಸ ಮಾಡಿಸಲು ಅವರನ್ನು ಮೈಸೂರು ಬೆಂಗಳೂರುಗಳ ಕ್ರೈಸ್ತ ವಿದ್ಯಾಸಂಸ್ಥೆಗಳಿಗೆ ಕರೆದೊಯ್ದು, ಊಟ ಬಟ್ಟೆ ವಸತಿಗಳನ್ನು ಪುಕ್ಕಟೆಯಾಗಿಯೆ ನೀಡಿ, ಅವರ ತಂದೆ ತಾಯಿ ಬಂಧುಗಳ ಗೌರವ ಕೃತಜ್ಞತೆಗಳನ್ನು ಸೂರೆಹೊಯ್ದರು. ಆ ಎಲ್ಲ ಸ್ನೇಹ ಸೌಹಾರ್ಧ ಸಂಪರ್ಕಗಳ ಪರಿಣಾಮವಾಗಿಯೇ ಕ್ರೈಸ್ತ ಪಾದ್ರಿಗಳು ನಮ್ಮ ಮನೆ ಕುಪ್ಪಳಿಯ ಉಪ್ಪರಿಗೆಯ ವಿದ್ಯಾಸಂಸ್ಥೆಗೂ ಒಬ್ಬ ಇಂಗ್ಲಿಷ್ ಬಲ್ಲ ಕ್ರೈಸ್ತ ತರುಣರನ್ನು ನಮಗೆ ಮೇಷ್ಟರನ್ನಾಗಿ ಕಳಿಸುವ ಕೃಪೆ ಮಾಡಿದರು: ಅವರ ಹೆಸರು ಮೋಸಸ್!
.................. ಮುಂದುವರೆಯುವುದು

Wednesday, January 7, 2015

ಜನವರಿ 7 : 1924ರ ದಿನಚರಿ

ಕೆಲವು ಸ್ನೇಹಿತರು ಬಂದರು. ಸುಮಾರು ಅಪರಾಹ್ನ ಎರಡು ಗಂಟೆಯ ಸಮಯದಲ್ಲಿ ನಾನು ಮಾತನಾಡುತ್ತಿದ್ದಾಗ 'ಪ್ರೇತಸಿದ್ಧಾಂತ'ದ (Theory of spirits) ನನ್ನ ಭಾವನಗೆಳನ್ನು ಅರ್ಥ ಮಾಡಿಕೊಳ್ಳುವ ಮಟ್ಟದಲ್ಲಿರಲಿಲ್ಲ ನನ್ನ ಮಿತ್ರರು. ಅವರನ್ನು ಮನಗಾಣಿಸುವುದು ನನಗೆ ಪ್ರಯಾಸಕರವಾಯ್ತು. ಒಂದು ಸಮಸ್ಯೆ ನನ್ನನ್ನು ಪೀಡಿಸಿತು. ಅವರೆಲ್ಲ ಬೀಳ್ಕೊಂಡ ಮೇಲೆ ನಾನೊಬ್ಬನೆ ಕುಳಿತು ಶ್ರೀಕೃಷ್ಣನನ್ನೂ ಸ್ವಾಮಿ ವಿವೇಖಾನಂದರನ್ನೂ ಇತರರನ್ನೂ ನನ್ನ ನೆರವಿಗೆ ಬರುವಂತೆ ಬೇಡಿಕೊಂಡೆ. ಚೆನ್ನಾಗಿ ಅತ್ತೂ ಬಿಟ್ಟೆ. ಬೆಳಿಗ್ಗೆ ಒಂದು ಥಿಯಾಸಫಿಯ ಪುಸ್ತಕದಲ್ಲಿ 'ಶ್ರೀಕೃಷ್ಣನು Logas ಮಾತ್ರನೆಂದೂ ಪರಬ್ರಹ್ಮದ ಅಂಶಮಾತ್ರನೆಂದೂ ಓದಿದ್ದು, ಈ ಹಾಳು ಮಂದಿ ಸಮಸ್ಯೆಯನ್ನು ಬಿಡಿಸುತ್ತೇವೆ ಎಂದು ಹೊಸ ಹೊಸ ಪದಗಳನ್ನು ನೆಯ್ದು ವಿಷಯವನ್ನು ಮತ್ತೂ ಜಟಿಲವನ್ನಾಗಿ ಮಾಡಿ ಜೀವನಿಗೂ ದೇವನಿಗೂ ಇರುವ ಅಂತರವನ್ನು ಇನ್ನೂ ದೂರಾಂತರವನ್ನಾಗಿ ಮಾಡುತ್ತಾರಲ್ಲಾ ಎಂದು ನನ್ನ ಮನಸ್ಸು ರೇಗಿ ಹುಚ್ಚೆದ್ದು ಹೋಗಿತ್ತು. ತುಸು ಸಿಟ್ಟಿನಿಂದಲೆ ರೂಮಿನಿಂದ ಹೊರಬಿದ್ದು ಏಕಾಂತ ಸ್ಥಳಕ್ಕಾಗಿ ಚಾಮುಂಡಿಬೆಟ್ಟದ ತಪ್ಪಲಿಗೆ ಅಭಿಮುಖವಾಗಿ ಬೀದಿಯಲ್ಲಿ ಸರಸರನೆ ನಡೆದೆ. ದಾರಿ ಸೀಳುತ್ತಿರುವಂತೆ ಭಾಸವಾಗಿ ಸಿಟ್ಟಿಗೆ ಒಂದೆರಡು ಸಾರಿ ರಸ್ತೆಯನ್ನು ಒದ್ದೂ ಬಿಟ್ಟೆ. ಹೋಗುತ್ತಾ ಒಮ್ಮೆ ಅತ್ತು, ಕೃಷ್ಣನನ್ನೂ ಕಡೆಗೆ ಪೂಜ್ಯರಾದ ನನ್ನ ಸ್ವಾಮಿ ವಿವೇಕಾನಂದರನ್ನೂ ತರಾಟೆಗೆ ತೆಗೆದುಕೊಂಡೆ. ಅಷ್ಟರಲ್ಲಿ ಒಂದು ಸಂಗತಿ ಜರುಗಿತ್ತು. ಒಂದು ಹಕ್ಕಿ ಮರದಲ್ಲಿ ಹಾಡುತ್ತಿದ್ದುದು ಕೇಳಿಸಿತು, ಹಕ್ಕಿ ಮಾತ್ರ ಕಾಣುತ್ತಿರಲಿಲ್ಲ. ಇದ್ದಕ್ಕಿದ್ದ ಹಾಗೆ ಬುದ್ಧಿಗೆ ಹೊಳೆಯಿತು: ಶ್ರೀಕೃಷ್ಣನೇ ಆ ರೂಪದಲ್ಲಿ ನ್ನನ್ನು ಸಾಂತ್ವನಗೊಳಿಸಲು ಬಂದಿದ್ದಾನೆ ಎಂದು. ಏನೊ ಒಂದು ರಸಾನಂದ ನನ್ನ ಚೇತನವನ್ನು ತುಂಬಿತ್ತು. ಹಕ್ಕಿಯನ್ನು ನೋಡಲಾಗದಿದ್ದರೂ ಹಾಡಿನಿಂದ ಅದರ ಅಸ್ತಿತ್ವವನ್ನರಿಯಬಹುದು ಎಂದು. ಜೇಬಿನಲ್ಲಿ ಭಗವದ್ಗೀತೆ ಇತ್ತು.
ಒಂದೆರಡು ಫರ್ಲಾಂಗು ಮುಂದೆ ಹೋಗಿ ಒಂದು ಹೂವಿನ ಪೊದೆಯ ಪಕ್ಕದಲ್ಲಿ ಕುಳಿತು ಎರಡು ಮೂರು ಶ್ಲೋಕಗಳನ್ನು ಓದಿದೆ: 'ಕೆಲವರು ವೇದಗಳನ್ನು ಓದಿ ತಪ್ಪಾಗಿ ಅರ್ಥಮಾಡಿ ಅನರ್ಥಕಾರವಾಗಿ ಬೋಧಿಸುತ್ತಾರೆ.' ಹಾಗೆಯೆ ಆಲೋಚಿಸಿದೆ, ಥಿಯಾಸಫಿಗಳು ಮೂರ್ಖರು! ಏಕೆಂದರೆ, ಭಗವಂತನಿಗೂ ನಮಗೂ ಇರುವ ಅಂತರವನ್ನು ಹೆಚ್ಚಿಸುತ್ತಾರೆ.

Tuesday, January 6, 2015

ಜನವರಿ 6 : ತೊಂಬತ್ತೊಂದು ವರ್ಷಗಳ ಹಿಂದಿನ ದಿನಚರಿ!

ಅಮಾವಾಸ್ಯೆಯ ದಿನ ಅಭ್ಯಂಜನ ಮಾಡಬಾರದು ಎಂದು ಕೆಲವರು ನಿಷೇಧಿಸಿದರೂ ನಾನು ಎಣ್ಣೆ ಸ್ನಾನ ಮಾಡಿ, (ಭಾನುವಾರದ ಹಕ್ಕು) ಕೊಟಡಿಗೆ ಬಂದು, ಎರಡು ತುಪ್ಪದ ದೋಸೆ ತರಿಸಿದೆ. ನಾನೊಬ್ಬನೆ ತಿನ್ನಲು ಶುರು ಮಾಡಲು ಕುಚೇಷ್ಟೆಯ ಶ್ರೀ ಬಾಲಕೃಷ್ಣನು ಬಂದು ನನ್ನ ಎದುರು, ಕೊಳಲು ಹಿಡಿದು ಬಲಗೈ ಊರಿ, ಒರಗಿದಂತೆ ಕುಳಿತನು. ಮುಗುಳು ನಗುತ್ತಿದ್ದನು. ಅವನ ಸಾನ್ನಿಧ್ಯ ನನಗೆ ತುಂಬ ಹರ್ಷದಾಯಕವಾಗಿತ್ತು. ಸಲುಗೆಯ ಮಾತುಗಳಿಂದ ಅವನನ್ನು ಕೇಳಿಕೊಂಡೆ 'ದೋಸೆ ತಿನ್ನುವುದನ್ನು ಮೊದಲು ನೀನೆ ಪ್ರಾರಂಭಿಸು' ಎಂದು. ಅವನು ಒಪ್ಪಲಿಲ್ಲ. ನಾನೆ ದೋಸೆಯ ಒಂದು ಚೂರನ್ನು ಕಿತ್ತು ಅವನ ಬಾಯಿಯ ಬಳಿಗೆ ಒಯ್ದೆ ತಿನ್ನಿಸಲೆಂದು. ಆದರೆ ಅವನು ಹಿಂದು ಹಿಂದಕ್ಕೆ ಸರಿದುಬಿಟ್ಟ. ನನಗೆ ಮುನಿಸು ಬಂದು, ಕೊಟಡಿಯಿಂದಾಚೆಗೆ ನಡಿ ಎಂದು ಆಜ್ಞೆ ಮಾಡಿದೆ. ಅವನು ಮಾತ್ರ ನಗುತ್ತಲೆ ಅಲ್ಲೆ ಇದ್ದನು. ಅವನಿಗೆ ಕೊಡಲೆಂದು ಹಿಡಿದಿದ್ದ ಚೂರನ್ನು, ಬಾಯಿಗೆ ಹಾಕಿಕೊಂಡೆ. ಆಗ ಅವನೂ ಬಾಯಿಗೆ ಹಾಕಿಕೊಂಡ, ಅದೇ ಚೂರನ್ನು, ನಾನು ಅವನಿಗೆ ತಿನ್ನಿಸಬೇಕೆಂದಿದ್ದು ನಾನು ಬಾಯಿಗೆ ಹಾಕಿಕೊಂಡಿದ್ದ ಚೂರನ್ನೆ! ಎಡಗೈಯಿಂದ ಕೊಳಲು ಹಿಡಿದಿದ್ದ ಬಲಗೈಯನ್ನು ಊರಿ ಬಾಲಲೀಲೆಯಿಂದ ಓರೆಯಾಗಿ ಕುಳಿತೇ ಇದ್ದ. ಹಾಗೆ ನಾನೂ ಅವನೂ ಏಕಕಾಲದಲ್ಲಿ ದೋಸೆಗಳನ್ನೆಲ್ಲ ತಿಂದೆವು. ನಮ್ಮ ಆನಂದ ಮಾತಿಗೆ ಮೀರಿತ್ತು. ನಡುವೆ ನಾನು ಅವನಿಗೊಂದು ಏಟು ಕೊಟ್ಟು, ಲಂಬೋದರ (ದೊಡ್ಡಹೊಟ್ಟೆ) ನವನೀತಚೋರ (ಬೆಣ್ಣೆಕಳ್ಳ) ಎಂದು ಕರೆಯಬೇಕೆಂದಿದ್ದೆ. ನಾನು ಎರಡೇ ದೋಸೆ ತರಿಸಿದ್ದೆ. ಅವನೂ ಎರಡು ತಿಂದ, ನಾನೂ ಎರಡು ತಿಂದಿದ್ದೆ. ಸುಖವೋ ಪರಾಕಾಷ್ಠೆಯನ್ನೈದಿತ್ತು. ನಾನು ಒಂದು ದೊಡ್ಡ ಚೂರನ್ನು ತೆಗೆದುಕೊಂಡಾಗ ಆ ಹುಡುಗನೂ ಅಂತಹುದೇ ಒಂದು ದೊಡ್ಡ ಚೂರನ್ನು ತೆಗೆದುಕೊಳ್ಳುತ್ತಿದ್ದ. ಅಂತೂ ಕಡೆಗೆ ದೋಸೆಗಳು ಮಾಯವಾಗಿದ್ದುವು! ದೋಸೆಗಳನ್ನು ಕಟ್ಟಿದ್ದ ಕಾಗದ ಮತ್ತು ಎಲೆಗಳನ್ನು ಎಸೆಯಲು ಹೇಳಿದೆ. ಆದರೆ ಅವನು ತುಂಟಗಣ್ಣು ಮಾಡಿ ಒಲ್ಲೆ ಎಂದುಬಿಟ್ಟನು. 'ಆಗಲಿ, ಕೃಷ್ಣ, ನೀನು ಮತ್ತೆ ಬಂದರೆ ನಿನಗೂ ಹಾಗೆ ಮಾಡುತ್ತೇನೆ' ಎಂದೆ. ಹಾಗೆ ಹೇಳುತ್ತಾ ಎಲೆ ಕಾಗದಗಳನ್ನು ಕೈಗೆ ತೆಗೆದುಕೊಂಡೆ; ಅವನೂ ತೆಗೆದುಕೊಂಡ. ನಾನು ಎಸೆದಾಗ ಅವನೂ ಎಸೆದ. ಅವು ಒಂದೇ ಜಾಗದಲ್ಲಿ ಬಿದ್ದು, ಒಂದಾದುವು. ಅವನು ನನ್ನ ಕಡೆ ನೋಡುತ್ತಾ ನಗುತ್ತಾ ನಿಂತಿದ್ದ. ನಾನು ನಡೆದ ಇದನ್ನೆಲ್ಲ ಬರೆಯಲು ಡೈರಿ ತೆಗೆದುಕೊಂಡೆ. ಅವನು ಹೇಳಿದ 'ಬರೆಯಬಾರದು!' ನಾನು ಲೆಕ್ಕಿಸಲಿಲ್ಲ, ಹೇಳಿದೆ 'ನಿನ್ನ ತಂಟೆಯ ಆಟವನ್ನು ಎಲ್ಲರಿಗೂ ತೋರಿಸುತ್ತೇನೆ' ನಾನು ಇದನ್ನೆಲ್ಲ ಬರೆಯುತ್ತಿದ್ದಾಗ ಅವನು ಕುತ್ತಿಗೆ ಚಾಚಿ ನೋಡುತ್ತಲೇ ಇದ್ದ ಇದರ ಕಡೆಯೆ. 'ನೀನೆ ನೋಡುತ್ತಿದ್ದೀಯಲ್ಲಾ? ಹೇಳು, ಇದೆಲ್ಲ ಸುಳ್ಳೊ ನಿಜವೊ? ಎಂದೆ........
***
ಇದೊಂದು ಅಪರೂಪವಾದ ದಾಖಲೆ. ದಿನಚರಿಯ ಪುಟವಾದ್ದರಿಂದ ಕವಿಯ ಅಂದಿನ ಮನಸ್ಥಿತಿಯನ್ನರಿಯಲು ಬಹು ಸಹಕಾರಿ. ಯಾರಾದರೂ ಕುವೆಂಪುವನ್ನು ಓದಿಕೊಂಡಿರುವ ಮನಃಶಾಸ್ತ್ರಜ್ಞರು ಈ ಸನ್ನಿವೇಶವನ್ನು ವಿಶ್ಲೇಷಿಸಬೇಕು. ಆಗ ಕವಿಯನ್ನು ಬೇರೊಂದು ಆಯಾಮದಲ್ಲಿ ಅರ್ಥ ಮಾಡಿಕೊಳ್ಳಲು ಬೇಕಾದ ಕೀಲಿಕೈ ಸಿಗುತ್ತದೆ.

Monday, January 5, 2015

ನೇಗಿಲಯೋಗಿಗೂ ಮುನ್ನ ಬರೆದ ಇಂಗ್ಲಿಷ್ ಕವಿತೆ!



19.7.1923ನೆಯ ತಾರೀಖಿನಲ್ಲಿ ಬರೆದಿರುವ ಒಂದು ಕವನ 'The Labourer's Cottage' ಎಂಬುದು ಸಾಮಾನ್ಯ ಬಡ ಜನರ ಜೀವನದಲ್ಲಿದ್ದ ಕವಿಯ ಆಸಕ್ತಿ ಕನಿಕರಗಳನ್ನೂ ಅವರ ಕಷ್ಟ ಜೀವನದ ಪರವಾಗಿದ್ದ ಗೌರವ ವಿಶ್ವಾಸಗಳನ್ನೂ ಸೂಚಿಸುತ್ತದೆ. ಮುಂದೆ ಕನ್ನಡದಲ್ಲಿ 'ನೇಗಿಲಯೋಗಿ' ಮೊದಲಾದ ಕವನಗಳನ್ನು ಬರೆಯಲಿದ್ದ ಚೇತನಕ್ಕೆ ಬೀಜಾವಾಪನೆಯಯಾದಂತಿದೆ. ಎಂಟು ಪಂಕ್ತಿಗಳ ಹತ್ತು ಪದ್ಯಗಳಿವೆ ಕವನದಲ್ಲಿ. ಪ್ರಾಸ ನಿಯಮ: aaa b ccc b. ಗುಡಿಸಲಿದ್ದ ಸ್ಥಳದ ಸುತ್ತಮುತ್ತಣ ಪ್ರಕೃತಿ ದೃಶ್ಯದ ಸೌಂದರ್ಯದ ವರ್ಣನೆಯಿಂದ ಮೊದಲಾಗಿ ಅದರ ನೀರವ ಪ್ರಶಾಂತ ವಾತಾವರಣವನ್ನು ಚಿತ್ರಿಸಿ, ಆ ಬಡಶ್ರಮಜೀವಿಯ ಬದುಕನ್ನು ಕುರಿತ ಕವಿಯ ಸಹಾನುಭೂತಿ ಅನುಕಂಪ ಪ್ರಶಂಸೆಗಳಲ್ಲಿ ಕೊನೆ ಮುಟ್ಟುತ್ತದೆ. ನಿದರ್ಶನವಾಗಿ ಒಂದೆರಡು ಪದ್ಯಗಳನ್ನು ಕೊಟ್ಟಿದೆ. ಇಲ್ಲಿಯ ಭಾಷೆಯ ನಡೆ ಅಂಬೆಗಾಲಿಕ್ಕುವುದನ್ನು ದಾಟಿ ತಿಪ್ಪ ತಿಪ್ಪ ಹೆಜ್ಜೆಯಿಟ್ಟಿರುವುದನ್ನೂ ಗಮನಿಸಬಹುದಲ್ಲವೆ?
Remote from towns and haunts of men,
Upon the wild sequestered glen,
Beyond the reach of envious ken
     And all destructive hands
Alone amid the regions wild
Where man is ever undifiled
There like a simple nature's child
     The Labourer's cottage stands.

If on the cottage floor you stand
Your eyes survey tyhe smiling land 
Whose splendour wrought by nature;s hand
     Allures each nature's child;
Around, the green-clad mountains rise;
Beneath, the green-clad pasture lies;
Above, there spread the silent skies,
     And make a heaven in the wild.

No regal wall surrounds the shed
And porticos none stand ahead,
Save flowery shrubs by nature fed
     Supply both gate and well;
No watchman strong the shed requires,
No sweeper wise the house desires;
For Poverty with all her sires
     Obeys the poor-man's call!

ಈ ಕವಿತೆಯ ಜೊತೆಯಲ್ಲಿ ಕವಿಯೇ ಸೂಚಿಸಿರುವಂತೆ ಓದಿಕೊಳ್ಳಬಹುದಾದ ಒಂದು ಕವಿತೆ 'ನೇಗಿಲಯೋಗಿ'. 
ಅದರ ಜೊತೆಯಲ್ಲಿ ಓದಿಕೊಳ್ಳಬೇಕಾದ ಮತ್ತೊಂದು ಕವಿತೆ 'ನನ್ನ ಬಯಕೆ'.

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
     ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ.
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
     ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ.

ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
     ದನಿಯು ದನ ಕಾಯುವವನ ಕೊಳಲೊಡನೆ ಬರಲಿ.
ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು
     ದಿನ ದಿನವು ಸವಿಯೂಟವಿಕ್ಕುತಿರಲೆನಗೆ.

ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
     ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ.
ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ
     ಗೋಪಾಲನಾಗಿರುವ ತಿಮ್ಮನೆನಗಿರಲಿ!

ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ
     ನನ್ನಾಸೆ ಏನೆಂದು ಎಲ್ಲರರಿತಿರಲಿ:
ಸಗ್ಗವಿವನೊಳಗೊಂಡಿರಲು ಸಗ್ಗವೆನಗಿರಲಿ;
     ನರಕವಿವನೊಳಗೊಂಡಿರಲು ನರಕವಿರಲಿ!

***
ಇಂಗ್ಲಿಷ್  ಕವಿತೆ ಬರೆದಾಗ ಕವಿಯ ವಯಸ್ಸು ಹತ್ತೊಂಬತ್ತು; ನನ್ನ ಬಯೆಕೆ ಬರೆದಾಗ 24!




Friday, January 2, 2015

ಬಾಲಕ ಪುಟ್ಟಪ್ಪನ ಹನುಮನೊಡನಾಟ!

ಇನ್ನೊಂದು ಅಪೂರ್ವವಾದ ಮತ್ತು ಅರ್ಥಪೂರ್ಣವಾದ ಚಿತ್ರ ನೆನಪಿಗೆ ಹೊಳೆಯುತ್ತಿದೆ: ಮುಂದೆ, ಎಷ್ಟೋ ವರ್ಷಗಳ ತರುವಾಯ, ನಾನು ಕನ್ನಡದ ಮಹಾಕವಿಯಾಗಿ 'ಶ್ರೀರಾಮಾಯಣದರ್ಶನಂ' ಮಹಾಛಂದಸ್ಸಿನ ಮಹಾಕಾವ್ಯವನ್ನು ರಚಿಸಿದುದಕ್ಕೂ ಅದಕ್ಕೂ ಏನಾದರೂ ಅತೀಂದ್ರಿಯ ಸಂಬಂಧವಿರಬಹುದೇ ಎಂದು ಅಚ್ಚರಿಪಡುತ್ತೇನೆ.
 

 ಆಗತಾನೆ ತಾರುಣ್ಯವನ್ನು ದಾಟಿ ಯೌವ್ವನದ ಹೊಸ್ತಿಲಲ್ಲಿ ಕಾಲಿಟ್ಟಿದ್ದ ವಾಟಿಗಾರು ಮಂಜಪ್ಪಗೌಡರು (ಆಗ ನಮಗೆ ಅವರು 'ಮಂಜಣ್ಣಯ್ಯ' ಮಾತ್ರ ಆಗಿದ್ದರು.) ಕುಪ್ಪಳಿಗೆ ಉಳಿಯಲು ಬಂದಾಗಲೆಲ್ಲ ಅವರಿಂದ ಓಲೆಗರಿಯ ಕಟ್ಟುಗಳ ರೂಪದಲ್ಲಿ ಇರುತ್ತಿದ್ದ ರಾಮಾಯಣ ಭಾರತಗಳಲ್ಲಿ ಯಾವುದಾದರೂ ಒಂದೆರಡು ಸಂಧಿಗಳನ್ನು ಓದಿಸಿ ಆಲಿಸುತ್ತಿದ್ದರು, ಅಪ್ಪಯ್ಯ, ದೊಡ್ಡಚಿಕ್ಕಪ್ಪಯ್ಯ, ಅಜ್ಜಯ್ಯ ಮೊದಲಾದವರು. ರಾತ್ರಿ ಊಟಕ್ಕೆ ಕರೆಯುವುದು ಅಂತಹ ಸಂದರ್ಭಗಳಲ್ಲಿ ಸ್ವಲ್ಪ ತಡವಾಗುತ್ತಿದ್ದುದು ವಾಡಿಕೆ; ಏಕೆಂದರೆ ವಿಶೇಷ ಔತಣದ ಪಾಕಕಾರ್ಯ ಪೂರೈಕೆಯ ದೆಸೆಯಿಂದ. ಮಕ್ಕಳು ಅವರವರ ತಂದೆಯ ತೊಡೆಯ ನಡುವೆ ಹುದುಗಿ, ಹೊದ್ದ ಶಾಲಿನಿಂದ ತಲೆ ಮಾತ್ರ ಕಾಣುವಂತೆ ಬೆಚ್ಚಗೆ ಕುಳಿತು ಆಲಿಸುತ್ತಿದ್ದುವು. ನಾನೂ, ಮುಂಡಿಗೆಗೆ ಒರಗಿ ಶಾಲು ಹೊದ್ದು ಕುಳಿತು, ಯಾವುದೋ ಅಲೌಕಿಕ ಅತೀಂದ್ರಿಯ ವ್ಯಾಪಾರವನ್ನು ಗಮನಿಸುತ್ತಿರುವಂತೆ, ವಿಸ್ಮಯಾನಂದಗಳ ಸಮ್ಮಿಶ್ರಣ ಭಂಗಿಯಿಂದ ಆಲಿಸುತ್ತಿದ್ದೆ. ನನಗೀಗ ನೆನಪಾಗುತ್ತಿರುವ ಸಂದರ್ಭದಲ್ಲಿ, ಮಂಜಪ್ಪಗೌಡರು ಓದಿ ಅರ್ಥ ಹೇಳುತ್ತಿದ್ದ ಭಾಗ, ತೊರವೆ ರಾಮಾಯಣದಲ್ಲಿ ಆಂಜನೇಯನ ಸಮುದ್ರಲಂಘನದ ಸನ್ನಿವೇಶವಾಗಿತ್ತು. ಹಳ್ಳಿಯ ಹುಡುಗನಾಗಿದ್ದ ನನ್ನ ಆ ವಯಸ್ಸಿಗೆ ರಾಮಾಯಣದ ಕಥೆ ಅದರ ಭ್ರೂಣಾವಸ್ಥೆಗಿಂತಲೂ ಪೂರ್ವತರದ್ದಾಗಿತ್ತು. ರಾಮ ಸೀತೆ ಹನುಮಂತ ರಾವಣರ ಹೆಸರುಗಳು ಕಿವಿಯ ಮೇಲೆ ಬಿದ್ದಿರಬಹುದಾಗಿದ್ದರೂ ಕಥೆಯ ರೂಪ ಅಖಂಡವಾಗಿರದೆ ತೆನ್ನಾಲಿ ರಾಮಕೃಷ್ಣನ ಚಿತ್ರಕಲೆಯ ಮಾದರಿಯದಾಗಿತ್ತು! ಆದರೂ ನನಗೆ ಮಂಜಣ್ಣಯ್ಯ ತುಸು ರಾಗವಾಗಿ ಓದಿ ಹನುಮಂತ ಹಾರಿದುದನ್ನು ಅರ್ಥಯ್ಸುತ್ತಿದ್ದಾಗ ಏನು ಕುತೂಹಲ! ಏನು ರೋಮಾಂಚನ! ಮುಂದೇನು? ಮುಂದೇನು? -ಎಂಬ ಆತುರ! ತುಸು ವ್ಯಾಖ್ಯಾನ ಹೇಳಿ, ಮುಂದಿನ ಪದ್ಯ ಓದಲು ಗಮಕಿ ಸಾವಧಾನವಾಗಿ ಮುಂದುವರಿದಾಗ ನನಗೆ ಅದೊಂದೂ ಅರ್ಥವಾಗದೆ, ಆ ಪದ್ಯದ ಮೇಲೆ ಸಿಟ್ಟೂ ಬರುತ್ತಿತ್ತು! ಅದೇಕೆ ನಾನೂ ತಿಳಿಯಬಹುದಾದ ಗದ್ಯವೇ ಆಗಿರಬಾರದಾಗಿತ್ತು ಎಂದು?! ಜೊತೆಗೆ ಅಷ್ಟರಲ್ಲಿಯೇ "ಬಳ್ಳೆ ಹಾಕಿದ್ದಾರೆ" ಎಂಬ ಊಟದ ಕರೆಯು ಬಂದು, ಎಲ್ಲರೂ ರಾಮಾಯನದ ಲೋಕದಿಂದ ಕಡುಬು ತುಂಡುಗಳ ಅಡುಗೆ ಮನೆಗೆ ನಿರ್ಲಿಪ್ತ ನಿರ್ವ್ಯಸನಿಗಳಾಗಿ ನಿರ್ದಾಕ್ಷಿಣ್ಯವಾಗಿ ಹೊರಟುಬಿಡುತ್ತಿದ್ದರು, ನನ್ನನ್ನೂ ನನ್ನ ಹನುಮಂತನನ್ನೂ ಆಕಾಶದ ಮಧ್ಯೆ ಸಾಗರದ ಮೇಲೆ ತ್ರಿಶಂಕು ಸ್ವರ್ಗದಲ್ಲಿಯೇ ತ್ಯಜಿಸಿಬಿಟ್ಟು! 'ಈ ದೊಡ್ಡವರನ್ನು ಆಶ್ರಯಿಸಿದರೇ ಹೀಗೆ, ನಾನೇ ಇದನ್ನೆಲ್ಲ ಓದಿಕೊಳ್ಳುವುದನ್ನು ಕಲಿತುಬಿಟ್ಟರೆ ಇವರ ಯಾರ ಹಂಗೂ ಇಲ್ಲದೆ ಬೇಕಾದಾಗ ಬೇಕಾದಷ್ಟು ಕಾಲ ಹನುಮಂತನೊಡನೆ ಹಾರಿ, ಮುಂದೆ ನಡೆಯುವುದನ್ನೆಲ್ಲ ಕಾಣುತ್ತೇನೆ' ಎಂದು ಸಾಹಸದ ಸಂಕಲ್ಪ ಮಾಡುತ್ತಿದ್ದೆ. ಬಹುಶಃ ಆ ಅಭೀಷ್ಟೆಯ ಹೃದಯದಲ್ಲಿ, ಬೀಜದ ಅಂತರತಮ ಗರ್ಭದಲ್ಲಿ ಮುಂಬರುವ ಮಹಾವಟ ವೃಕ್ಷವು ಸುಪ್ತಗುಪ್ತವಾಗಿರುವಂತೆ, ಶ್ರೀರಾಮಾಯಣದರ್ಶನಂ ಮಹಾಕಾವ್ಯ ಅಂತರ್ಗತವಾಗಿ ನಿದ್ರಿಸುತ್ತಿತ್ತೊ ಏನೋ?