ಅವರು ತೀರ್ಥಹಳ್ಳಿಗೆ ಪ್ರತಿ ಭಾನುವಾರವೂ ಪ್ರಾರ್ಥನೆಗೆ ಅವರ ಪ್ರಾಟೆಸ್ಟೆಂಟ್ ಚರ್ಚಿಗೆ ಹೋಗುತ್ತಿದ್ದರು. ಚರ್ಚು ಎಂದರೆ ಆಗ ಇದ್ದುದ್ದು ಉಪದೇಶಿ ಜ್ಞಾನಮಿತ್ರಯ್ಯನವರ ಮನೆಗೆ ಸೇರಿದಂತಿದ್ದ ಒಂದು ಉದ್ದ ಕೋಣೆಯಷ್ಟೆ. ಪೇಟೆಗೆ ಹೋದಾಗಲೆಲ್ಲ ಅವರು ತಮ್ಮ ಸ್ವಂತ ಉಪಯೋಗಕ್ಕೆಂದು ಏನನ್ನಾದರೂ ತಿಂಡಿ ಸಾಮಾನು ತಂದಿಟ್ಟುಕೊಳ್ಳುತ್ತಿದ್ದರು. ಅದನ್ನರಿತಿದ್ದು, ನಮ್ಮ ಮನೆಯಲ್ಲಿ ಓದುವುದಕ್ಕಿದ್ದ ನಮ್ಮ ನೆಂಟರ ಮಕ್ಕಳು, ನನಗಿಂತಲೂ ಅವರೆಲ್ಲ ತುಸು ದೊಡ್ಡವರೆ, ಒಮ್ಮೆ ಅವರು ತಂದಿಟ್ಟಿದ್ದ ಬಿಸ್ಕತ್ತಿನ ಇಡೀ ಡಬ್ಬವನ್ನೆ ಎಗರಿಸಿಬಿಟ್ಟರು. ಯಾರನ್ನು ವಿಚಾರಿಸಿದರೂ ನಾನಲ್ಲ ನಾನಲ್ಲ ಎಂದುಬಿಟ್ಟರು. ಬಹುಶಃ ನನಗೆ ಅರಿವಾಗುವಂತೆ ಅವರಲ್ಲಿ ಕೆಲವರಿಗೆ ಹೆದರಿಸಿ ಬೆದರಿಸಿ ಶಿಕ್ಷೆ ವಿಧಿಸಿದರೆಂದು ತೋರುತ್ತದೆ. ಆದರೂ ಯಾರು ಹಾರಿಸಿದವರೆಂಬುದು ಪತ್ತೆಯಾಗಲಿಲ್ಲ.
ಯಾರಾದರೊಬ್ಬರ ಹೆಸರನ್ನು ಹೇಳಿ ಪೀಡೆ ತಪ್ಪಿಸಿಕೊಳ್ಳಬಹುದಾಗಿತ್ತು ನಾನು. ಅವರೂ ನನ್ನಿಂದ ಅಷ್ಟನ್ನೇ ನಿರೀಕ್ಷಿಸುತ್ತಿದ್ದರು. ಆದರೆ ಯಾರ ಹೆಸರನ್ನು ಹೇಳುವುದು? ನಿಜವಾಗಿಯೂ ಕದ್ದಿದ್ದವರ ಹೆಸರನ್ನು ಹೇಳಿದರೆ ಸರಿಹೋಯ್ತು. ಆದರೆ ನಿರಪರಾಧಿಯಾದವನ ಹೆಸರನ್ನು ಹೇಳಿ, ಅವನಿಗೆ ಬಾಸುಂಡೆ ಬರುವಂತೆ ಹೊಡೆಸಿದರೆ!? ನನಗಂತೂ ಯಾರು ಏನು ಒಂದೂ ಗೊತ್ತಿಲ್ಲ. ಆದರೆ ಚಿಕ್ಕಯ್ಯ ಇಷ್ಟು ವಿಶ್ವಾಸದಿಂದ ನನ್ನಿಂದ ಅವರು ಅನ್ವೇಷಿಸುತ್ತಿದ್ದ ವಿಷಯ ಸಿಕ್ಕುತ್ತದೆ ಎಂದು ಪ್ರಶ್ನಿಸುತ್ತಿದ್ದಾರಲ್ಲಾ. ಅವರನ್ನು ನಿರಾಶೆಗೊಳಿಸುವುದು ಹೇಗೆ?
ಕಡೆಗೆ ಬಹಳ ಹೊತ್ತು ಅವರು ಪುಸಲಾಯಿಸಿದ ಮೇಲೆ ನನಗೂ ಬೇಸರವಾಗಿ ಒಂದು ನಿರ್ಧಾರಕ್ಕೆ ಬಂದೆ. ಅವರಿವರ ಹೆಸರನ್ನು ಹೇಳಿ, ಯಾರು ಯಾರನ್ನೊ ತಪ್ಪು ಮಾಡದವರನ್ನು ಕಷ್ಟಕ್ಕೆ ಸಿಕ್ಕಿಸುವುದೇಕೆ? ಚಿಕ್ಕಯ್ಯನನ್ನೂ ನಿರಾಶೆಗೊಳಿಸಬಾರದು; ಇತರರನ್ನೂ ತೊಂದರೆಗೆ ಸಿಕ್ಕಿಸಬಾರದು; ಎಂದು, ಕಡೆಗೆ ’ನಾನೇ ಅದನ್ನು ಕದ್ದು ತಿಂದವನು’ ಎಂದುಬಿಟ್ಟೆ!
ಅವರು ಕೇಳಿದ ಪ್ರಶ್ನೆಗಳಿಗೆ -’ಅದು ಎಲ್ಲಿತ್ತು?’ ’ಹೇಗೆ ತೆಗೆದೆ?’ ’ಕಾಗದದ ಡಬ್ಬಿಯೋ ಟಿನ್ನಿನ ಡಬ್ಬಿಯೋ?’ ’ನೀನೊಬ್ಬನೆ ತಿಂದೆಯೋ?’ ’ಯಾರು ಯಾರಿಗೆ ಕೊಟ್ಟೆ?’ - ನಾನು ಹೇಳುತ್ತಿದ್ದ ಉತ್ತರಗಳೆಲ್ಲ ಬರಿಯ ಸುಳ್ಳಿನ ಕಂತೆಯೆಂಬುದು ಅರಿವಾಗಲು ಅವರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ.
ಅಂತೂ ಅವರು ಎಂದೂ ನಿರೀಕ್ಷಿಸದೆ ಇದ್ದ ನಿರಾಶೆಯಿಂದ ನನ್ನನ್ನು ಗೋಡೆಯಿಂದಳಿಸಿದರು! ನನಗಂತೂ ಆ ಕೇಸು ಹೇಗೆ ಇತ್ಯರ್ಥವಾಯಿತು? ಹೇಗೆ ಕೊನೆಗೊಂಡಿತು? ಒಂದೂ ಗೊತ್ತಾಗಲಿಲ್ಲ. ಗೊತ್ತಾಗಲಿಕ್ಕೆ ಆ ವಿಚಾರ ಮತ್ತೆ ನನ್ನ ತಲೆಗೆ ಬಂದಿದ್ದರೆ ತಾನೆ!
***
ಈ ಘಟನೆಯ ಬಗ್ಗೆ, 'ನೆನಪಿನ ದೋಣಿಯಲ್ಲಿ' ಕವಿಯ ಮಾತು: "ಅದು ನನ್ನ ಸ್ವಭಾವದ ಮೇಲೆ ಬೆಳಕು ಬೀರುವ ಸಂಭವ ಉಂಟು."
No comments:
Post a Comment