ಆ ಮುಸಾಫರ್ ಖಾನೆಯ ಹಿಂಭಾಗದಲ್ಲಿ ಒಂದು ಕೆರೆಯಿತ್ತು. ಅದೇನು ಅಂತಹ ದರ್ಶನೀಯ ಸ್ಥಾನವಾಗಿರಲಿಲ್ಲ. ಅದೊಂದು ಹೊಟ್ಟುಗೆರೆ, ಬೇಸಿಗೆಯಲ್ಲಿ ಕೆಸರೇ ನೀರು! ಊರುಹಂದಿಗಳು ಎಮ್ಮೆಗಳು ಮಗ್ಗುಲು ಬೀಳುತ್ತಿದ್ದುವು. ಜನರು ಮಲಬಾಧೆ ತೀರಿಸುವುದಕ್ಕೂ ಧಾರಾಳವಾಗಿ ಉಪಯೋಗಿಸುತ್ತಿದ್ದರು. ನನಗೆ ನೆನಪಿರುವಂತೆ ನಾವು ಅಲ್ಲಿಗೆ ಹೋಗುತ್ತಿದ್ದುದು, ಮಗ್ಗುಲು ಬಿದ್ದಿರುತ್ತಿದ್ದ ಊರುಹಂದಿಗಳಿಗೆ ಕಲ್ಲು ಹೊಡೆದೆಬ್ಬಿಸಿ ಅಲ್ಲಿದ್ದ ಕುರುಚಲು ಕಾಡಿನಲ್ಲೆಲ್ಲಾ ಅಟ್ಟುವುದಕ್ಕಾಗಿ. ಕುಪ್ಪಳಿಯಲ್ಲಿ ನಮ್ಮ ಹಿರಿಯರು ಹೆಗ್ಗಾಡಿನಲ್ಲಿ ಬೇಟೆಯಾಡುತ್ತಿದ್ದುದನ್ನು ಅನುಕರಿಸಿ ಆಟವಾಡುತ್ತಿದ್ದೆವಷ್ಟೆ: ಹಳು ನುಗ್ಗಿ, ಬಿಲ್ಲಿಗೆ ನಿಂತು! -ಬಹುಶಃ ಆಗ ನಾನು ಓದಲು ಹೋಗುತ್ತಿದ್ದುದು ಪೇಟೆಯಲ್ಲಿರುತ್ತಿದ್ದ ಒಂದು ಪ್ರಾಥಮಿಕ ಶಾಲೆ ಇರಬಹುದೆಂದು ತೋರುತ್ತದೆ. ಆಗ ನನ್ನ ಪ್ರಜ್ಞೆ ಇನ್ನೂ ಸ್ಮೃತಿಯಲ್ಲಿ ಸ್ಥಾಯಿಯಾಗಿ ನಿಲ್ಲಲಾರದೆ, ಅಂಬೆಗಾಲಿಕ್ಕಿಯೋ ತಿಪ್ಪತಿಪ್ಪ ಹೆಜ್ಜೆಯಿಟ್ಟೋ ತತ್ತರಿಸುತ್ತಿದ್ದಿರಬೇಕು!
***
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ, ತಿರುಪತಿ ಯಾತ್ರೆಗೆಂದು ಹೋಗಿದ್ದ ಹಳೆಮನೆ ದೊಡ್ಡಣ ಹೆಗ್ಗಡೆಯನ್ನು ಹೋಲುವ ಮೂಕ ಗೋಸಾಯಿಯೊಬ್ಬ ಗೋಸಾಯಿಗಳ ಗುಂಪಿನಲ್ಲಿ ಕಂಡುಬರುವ ಚಿತ್ರಣವಿದೆ. ಅಲ್ಲಿನ ವಿವರಣೆಯನ್ನು ಗಮನಿಸಿದರೆ, ಬಾಲ್ಯದಲ್ಲಿ ಕವಿ ಕಂಡ ಮುಸಾಫರ್ ಖಾನೆಯಯಲ್ಲಿ ಬೀಡು ಬಿಡುತ್ತಿದ್ದ, ಗಡ್ಡಬಿಟ್ಟುಕೊಂಡವರು, ಉದ್ದ ನಿಲುವಂಗಿಯವರು, ಕೊಳಕಿನ ಮುದ್ದೆಯಾಗಿರುವವರು,
ಭಿಕ್ಷುಕರಂಥವರು - ಒಟ್ಟಿನಲ್ಲಿ ನಮ್ಮ ಭಾಗಕ್ಕೆ ನಾವು ದೂರವೇ ಇರಬೇಕಾಗಿರುವಂತಹ ರಹಸ್ಯ
ವ್ಯಕ್ತಿಗಳು -ಇರುತ್ತಿದ್ದರು.ಎಂಬ ಮಾತಿನ ಪ್ರಭಾವವನ್ನು ಮನಗಾಣಬಹುದು. ಮುಸಾಫರ್ ಖಾನೆಯ ಆ ಚಿತ್ರಣದಿಂದ ಬಾಲಕನ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದ, ಮದ್ದು, ಮಾಟ, ವಶೀಕರಣ ಮೊದಲಾದ ಭಯೋತ್ಪಾದಕ ವಿಚಾರಗಳೂ ಕಾದಂಬರಿಯ ವಿವರಗಳಲ್ಲಿ ತಳುಕು ಹಾಕಿಕೊಂಡಿರುವುದನ್ನು ಕಾಣಬಹುದು.ನೆನಪಿನ ದೋಣಿಯಲ್ಲಿ ಕವಿ ಬರೆದಂತೆ, ಈ ನೆನಪಿನ ಚಿತ್ರ ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಅಪ್ರಕೃತವೂ ಅಸ್ವರಸವೂ ನೀರಸವೂ ಅಲ್ಲ! ಪ್ರಕೃತವೂ ಸ್ವರಸವೂ ರಸವೂ ಆಗಿದೆ ಎನ್ನಲಡ್ಡಿಯಿಲ್ಲ.
No comments:
Post a Comment